Entertainmentಮನರಂಜನೆ

‘ನಾವು ಗೆದ್ದಿದ್ದರೆ ಈ ರೀತಿ ಟ್ರೋಫಿ ನಮ್ಮ ಕೈಯಲ್ಲೂ ಇರುತ್ತಿತ್ತು’

‘ನಾವು ಗೆದ್ದಿದ್ದರೆ ಈ ರೀತಿ ಟ್ರೋಫಿ ನಮ್ಮ ಕೈಯಲ್ಲೂ ಇರುತ್ತಿತ್ತು’


(ARTICAL):ಮಕ್ಕಳು ಶಾಲೆಲಿ ಇದ್ದಾಗ ಅವರು ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳುವುದು, ತರಗತಿ ತಪ್ಪಿಸಿಕೊಳ್ಳುವುದನ್ನು ಕಂಡಾಗ, ಶಿಕ್ಷಕರು ಬರದೇ ಇದ್ದಾಗ ಮೈದಾನದಲ್ಲಿ ಆಟವಾಡಲು ಬಿಡಿ ಎಂದು ಕೇಳುವಾಗ, ಆಟವಾಡಲೆಂದು ಮೈದಾನದಲ್ಲಿ ಕಾಲ ಕಳೆಯುವುದನ್ನು ಕಂಡಾಗ, ಆಟದ ಮೈದಾನದವನ್ನು ತಾವೇ ಸಿದ್ದಮಾಡುವುದನ್ನು ಕಂಡಾಗ ಒಮ್ಮೆ ನನ್ನನ್ನೇ ನಾನು ಕಂಡಂತೆ ಆಯಿತು.
 
ಚಿಕ್ಕಮಗಳೂರಿನ ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ದೈಹಿಕ ಶಿಕ್ಷಕಿ ವೇದಾವತಿ ಟೀಚರ್ ಎಲ್ಲಾ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ನಮ್ಮ ಶಾಲೆಯ ಚಿಕ್ಕಚೊಕ್ಕ ಕ್ರೀಡಾಂಗಣದಲ್ಲಿ ಒಂದಿಷ್ಟು ಆಟೋಟಗಳನ್ನು ಅಭ್ಯಾಸ ಮಾಡುತ್ತಿದ್ದೆವು. ವಾಲಿಬಾಲ್, ಕಬ್ಬಡ್ಡಿ, ಕೊಕ್ಕೋ, ಓಟಕ್ಕೆ ಅನುಕೂಲವಾಗುವಂತಿತ್ತು. ಆದರೂ ಇದರ ಮಧ್ಯೆ ನಮ್ಮಲ್ಲಿ ಏನಾದರೂ ಕಿತಾಪತಿ ಮಾಡಿದಾಗ ಓಡಿಸಿಕೊಂಡು ಬರುವ ಗೆಳೆಯರಿಂದ ತಪ್ಪಿಸಿಕೊಳ್ಳಲು ಓಡುವುದರ ಮೂಲಕ ಓಟದ ಅಭ್ಯಾಸ, ಅದೇ ಓಟ ಹೆಚ್ಚಾದಾಗ ಶಾಲೆಯ ತಂತಿಬೇಲಿಯನ್ನು ಹಾರುವ ಮೂಲಕ ಹೈಜಂಪ್ ಕೂಡ ಅಭ್ಯಾಸವಾಗಿತ್ತು. ತಂತಿಬೇಲಿ ಹಾರುವಾಗ ತರಚಿದ ಗಾಯವಾಗಿದ್ದು, ಬಟ್ಟೆ ಹರಿದುಕೊಂಡದ್ದು ಉಂಟು. ಮನೆಗೆ ಸಮೀಪದಲ್ಲಿ ಕಬ್ಬಿನಗದ್ದೆ ಇದ್ದದ್ದರಿಂದ ಶನಿವಾರ ಮಧ್ಯಾಹ್ನ ಗದ್ದೆಗೆ ಹೋಗಿ ಕಬ್ಬನ್ನು ತರುತ್ತಿದ್ದದ್ದು, ಗದ್ದೆಯ ಮಾಲೀಕ ಓಡಿಸಿಕೊಂಡು ಬಂದಾಗ ಸಿಗದಂತೆ ಓಡಿದ್ದು, ಬಿದ್ದು ಗಾಯ ಮಾಡಿಕೊಂಡದ್ದು ಇದ್ದೇಇತ್ತು. ಹೀಗೆ ಓಡುವ ಅಭ್ಯಾಸ ಹೆಚ್ಚಾಗಿದ್ದರಿಂದ ಕೊಕ್ಕೋ ಆಟಕ್ಕೆ ನಮ್ಮ ಟೀಚರ್ ಸೇರಿಸಿಕೊಂಡರು. ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಓಡಿಓಡಿ ಅಭ್ಯಾಸ ಇದ್ದಿದ್ದರಿಂದ ಬಹುತೇಕ ಕೊಕ್ಕೋ ಆಟದಲ್ಲಿ ಇದ್ದೆವು. ಅದೆಷ್ಟೋ ಬಾರಿ ಹಿಡಿಯಲು ಹೊರಟಾಗ ಅದೇನು ಗೂಳಿ ಓಡಿದ ಹಾಗೇ ಓಡ್ತಿಯಾ? ಅಂತ ಅಂದಿದ್ದಾರೆ. ಆಟಕ್ಕಾಗಿ ನಾವೆಲ್ಲ ಒಂದಾಗುತ್ತಿದ್ದೆವು. ಮಲೆನಾಡಿನ ಮಳೆಯಿಂದಾಗಿ ನಮ್ಮ ಶಾಲಾ ಮೈದಾನದಲ್ಲಿ ನೀರು ತುಂಬಿರುತ್ತಿತ್ತು. ಅದನ್ನು ತೆಗೆದು ಸರಿ ಮಾಡುವಷ್ಟರಲ್ಲಿ ಸಾಕುಸಾಕಾಗಿರುತ್ತಿತ್ತು. ಅಂತೂ ಕ್ರೀಡಾಕೂಟ ನಡೆದು ಸ್ವಲ್ಪ ಅಂಕಗಳ ಅಂತರದಲ್ಲಿ ಸೋತೆವು. ನಮ್ಮ ವೇದಾವತಿ ಟೀಚರ್ ಸೋತರೂ ಮುಂದಿನಬಾರಿಗೆ ಇನ್ನೂ ಹೆಚ್ಚಿನ ಅಭ್ಯಾಸ ಮಾಡಿ ಬರೋಣ ಎಂದು ಹುರಿದುಂಬಿಸಿದರು. ನಮ್ಮ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಬಂದ ಬಹುಮಾನವನ್ನೇ ನಮ್ಮದು ಎನ್ನುವ ರೀತಿಯಲ್ಲಿ ಸಂಭ್ರಮಿಸಿದ್ದೇವೆ. ನಂತರ ಪ್ರೌಢಶಾಲೆಯಲ್ಲೂ ಅನೇಕ ಕ್ರೀಡೆಗಳಿದ್ದರೂ ನನ್ನ ಒಲವು ಕೊಕ್ಕೋ ಮೇಲೆಯೇ ಇತ್ತು. ಅಲ್ಲಿ ದೈಹಿಕಶಿಕ್ಷಕ ಷಡಕ್ಷರಿಸರ್ ಆಟಗಳ ಒಳಹೊರಗುಗಳನ್ನು ಹೇಳಿಕೊಟ್ಟು, ಚೆನ್ನಾಗಿ ಅಭ್ಯಾಸ ಮಾಡಿಸಿದರು. ಅಷ್ಟೇ ಪೆಟ್ಟು ಕೂಡ ಕೊಡುತ್ತಿದ್ದರು. ಅವರ ಪೆಟ್ಟಿನಿಂದ ಏನು ಕಲಿತಿದ್ದೇವೋ ಮರೆತಿದ್ದೇವೆ. ಆದರೆ ಆ ಪೆಟ್ಟುಗಳು ಇನ್ನೂ ನೆನಪಿವೆ, ಎಲ್ಲವೂ ಮಧುರ ನೆನಪುಗಳಾಗಿ…


 
                ಶಿಕ್ಷಕನಾಗಿ ಈ ಶಾಲೆಗೆ ಬಂದಾಗಿನಿಂದ ವಾಲಿಬಾಲ್, ಥ್ರೋಬಾಲ್ ಪ್ರಮುಖವಾಗಿದ್ದ ಕ್ರೀಡೆಗಳಾಗಿದ್ದವು. ಒಂದಿಷ್ಟು ವರ್ಷಗಳ ನಂತರ ಕೊಕ್ಕೋ ಅಂಕಣ ಸಿದ್ಧವಾಗ ತೊಡಗಿತು. ಎರಡು ಪೋಲ್ ಬಂದು ನಿಂತಾಗ,  ಅದೊಂತರ ಸಂಭ್ರಮ ನನಗೆ. ದೈಹಿಕಶಿಕ್ಷಕ ಬಸವರಾಜ್ ಸರ್ ದೆಸೆಯಿಂದ ಆಸಕ್ತಿ ಇದ್ದ ಮಕ್ಕಳು ನಿಧಾನವಾಗಿ ಕೊಕ್ಕೋ ಅಂಕಣಕ್ಕೆ ಬರತೊಡಗಿದರು. ಒಮ್ಮೆ ಮಕ್ಕಳ ದಿನಾಚರಣೆಯ ಸಮಯದಲ್ಲಿ  ಮಕ್ಕಳೊಂದಿಗೆ ಬೆರೆತು ಆಟವಾಡುತ್ತಿದ್ದಾಗ ಪುಷ್ಪಮೇಡಂ ಮಕ್ಕಳೊಂದಿಗೆ ಕೊಕ್ಕೋ ಆಟದಲ್ಲಿ ಭಾಗವಹಿಸಿದ್ದರು. ಆಗಲೇ ತಿಳಿದದ್ದು ಅವರು ಕೂಡ ಕೊಕ್ಕೋ ಆಟದಲ್ಲಿ ಬಹುಮಾನವನ್ನು ಪಡೆದಿದ್ದರೆಂದು. ಅದಾದ ನಂತರ ನಾನು ಮತ್ತು ಚನ್ನೇಶ್ ಸರ್ ಕೂಡ ಮಕ್ಕಳೊಂದಿಗೆ ಬೆರೆತು ಆಡಿದೆವು. ಆ ಸಮಯದಲ್ಲಂತೂ ನನ್ನ ಬಾಲ್ಯದ ದಿನಗಳು, ಕೊಕ್ಕೋ ಆಟ, ಏಳು-ಬೀಳು, ಮೈದಾನ ಸಿದ್ದಗೊಳಿಸುತ್ತಿದ್ದದ್ದು ಎಲ್ಲವೂ ಒಮ್ಮೆ ಕಣ್ಣಮುಂದೆ ಬಂದು ಹೋಯಿತು. ಮಕ್ಕಳು ಪಿ.ಇ ತರಗತಿಗೆ ಬಂದಾಗ, ಸಂಜೆ ಕೋಚಿಂಗ್ ತರಗತಿಯ ಸಮಯದಲ್ಲಿ, ಶಾಲೆ ಮುಗಿದಾಗ ಕ್ರೀಡಾಕೂಟಕ್ಕೆ ಸಿದ್ಧರಾಗುತ್ತಿದ್ದ ಮಕ್ಕಳ ಜೊತೆಗೆ ಒಂದಿಷ್ಟು ದಿನಗಳ ಕಾಲ ಆಗಾಗ ಕೊಕ್ಕೋ ಆಡುತ್ತಿದ್ದೆ.
 
ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಕ್ಕೋ ತಂಡ ತಯಾರಾಗತೊಡಗಿತು. ಕಳೆದ ಎರಡುಮೂರು ವರ್ಷಗಳಲ್ಲಿ ಒಳ್ಳೆಯ ಕೊಕ್ಕೋ ಆಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಯಿತು. ಮೊದಲ ಬಾರಿಗೆ ಬಾಲಕ-ಬಾಲಕಿಯರ ತಂಡ ಭಾಗವಹಿಸಿತು. ಪ್ರಶಸ್ತಿ ಪಡೆಯದೆ ಹೋದರೂ ಮಕ್ಕಳು ಬೇರೆ ತಂಡಗಳೊಂದಿಗೆ ಒಳ್ಳೆಯ ಪೈಪೋಟಿ ನೀಡಿದ್ದರು. ಕಳೆದ ವರ್ಷವೂ ಒಂದೊಳ್ಳೆಯ ತಂಡ ತಯಾರಾಗಿತ್ತು. ಯಾವುದಾದರೊಂದು ಬಹುಮಾನ ಬಂದೇ ಬರುತ್ತದೆ ಎನ್ನುವಂತೆ ತಯಾರಾಗಿದ್ದರು. ಪ್ರಶಸ್ತಿಗೆ ಒಂದೇ ಮೆಟ್ಟಿಲು ಎನ್ನುವಂತೆ ಸೆಮಿಫೈನಲ್ ನಲ್ಲಿ ಸೋತರು. ಆದರೆ ಸೋಲಿಗಿಂತ ಹೆಚ್ಚಾಗಿ ಕಾಡಿದ್ದು ಗೆದ್ದ ತಂಡದವರು ನಮ್ಮ ಮಕ್ಕಳ ತಂಡದ ಎದುರು ‘ತೊಡೆತಟ್ಟಿ’ ಗೆಲುವನ್ನು ಸಂಭ್ರಮಿಸಿದ್ದರು. ಇದು ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪೈಪೋಟಿ ಕೊಡಲು, ಸರಿಯಾದ ಉತ್ತರ ಕೊಡಲೇಬೇಕು ಎನ್ನುವಂತೆ ತಯಾರಾಗಲು ಅನುವು ಮಾಡಿಕೊಟ್ಟಿತು


 
ಇತ್ತೀಚೆಗೆ ಸಂಜೆ ಹೆಚ್ಚಿನ ಸಮಯದಲ್ಲಿ ಅಭ್ಯಾಸ ಮಾಡುವಾಗ ಮಕ್ಕಳೊಂದಿಗೆ ಆಡುವಾಗ ರಾಹುಲ್ ‘ಮೊದಲು ಈಸರ್ ನ ಔಟ್ ಮಾಡಬೇಕು’ ಎನ್ನುತ್ತಿದ್ದನು. ಅದನ್ನು ಕೇಳಿಸಿಕೊಂಡು ನಕ್ಕು ಆಟ ವಾಡಿದ್ದೆ. ದೈಹಿಕಶಿಕ್ಷಕ ಪ್ರಶಾಂತ್ ಅವರು ಇತರ ಕ್ರೀಡೆಗಳಲ್ಲಿರ ವ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದುದರಿಂದ ನಾನೇ ಅನೇಕ ಸಲ ಕೊಕ್ಕೋ ತಂಡಗಳನ್ನು ರಚಿಸಿ ಆಡಿಸಿದ್ದೇನೆ. ಆಗಂತೂ ಸರ್ ಅದು ಔಟ್, ಇದು ಔಟ್ ಇಲ್ಲ, ಅದು ಹಾಗಲ್ಲ, ಇದು ಈಗಲ್ಲ, ಅದು ಇದು ಎಂದು ಹೇಳುತ್ತಿದ್ದರು. ಆಗ ಅಂತರಾಷ್ಟ್ರೀಯ ಪಂದ್ಯಗಳಲ್ಲೇ ಕ್ಯಾಮರಾಗಳು ಇದ್ದರೂ ಒಮ್ಮೊಮ್ಮೆ ತೀರ್ಪುಗಳು ಏನೇನೋ ಆಗಿರುತ್ತವೆ. ಅಂತದ್ದರಲ್ಲಿ ಇವರು ಹೇಳುವುದನ್ನು ಕೇಳಿ ನಕ್ಕಿದ್ದೇನೆ. ಸಮಾಧಾನ ಮಾಡಿಕೊಂಡಿದ್ದೇನೆ. ಒಮ್ಮೆ ಆಟ ಅರ್ಧ ನಡೆಯುವಾಗ ಮಳೆ ಬಂದು ಆಟವನ್ನು ನಿಲ್ಲಿಸಲು ಮುಂದಾದಾಗ ‘ಸರ್ ಅಂತ ಜೋರು ಮಳೆ ಏನು ಅಲ್ಲ, ಆಟ ಆಡಿ ಮುಗಿಸೋಣ’ ಎಂದು ಮಕ್ಕಳೇ ಕೇಳಿಕೊಂಡರು. ಆರೋಗ್ಯದ ದೃಷ್ಟಿಯಿಂದ ಒಪ್ಪದೇ ಅನಿವಾರ್ಯವಾಗಿ ಆಟವನ್ನು ನಿಲ್ಲಿಸಬೇಕಾಯಿತು. ಮಕ್ಕಳಂತೂ ಬೇಸರದಿಂದ ಆಟವನ್ನು ನಿಲ್ಲಿಸಿದರು. ಬೆಳಗ್ಗೆಯಿಂದ ಇಲ್ಲದ ಮಳೆ ಈಗಲೇ ಬರಬೇಕಿತ್ತೇ? ಎಂದು ಬೈದುಕೊಂಡಿದ್ದಾರೆ.
 
 ಮರುದಿನ ಬೆಳಗ್ಗೆಯಿಂದಲೂ ಮಳೆ ಬಿಡದೇ ಸುರಿಯುತ್ತಿದ್ದುದರಿಂದ ಸಂಜೆ ಅಭ್ಯಾಸದ ಸಮಯಕ್ಕೆ ಅದಾಗಲೇ ಕೊಕ್ಕೋ ಅಂಕಣ ನೀರಿನಿಂದ ತುಂಬಿತ್ತು. ಮಳೆ ಬಂದು ಕಟ್ಟಡದಿಂದ ಸುರಿದ ನೀರು ಕೊಕ್ಕೋ ಅಂಕಣಕ್ಕೆ ಬರುತ್ತಿದ್ದದ್ದನ್ನು ಕಂಡು ಒಂದಿಷ್ಟು ಮಕ್ಕಳು ಪಕ್ಕದ ಎತ್ತರದ ಜಾಗದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಬಂದು ಕೊಕ್ಕೋ ಅಂಕಣದಲ್ಲಿ ಎಲ್ಲೆಲ್ಲಿ ಒದ್ದೆಯಾಗಿತ್ತೋ ಅಲ್ಲಲ್ಲಿ ಹಾಕಿದ್ದಾರೆ, ಆ ಜಾಗವನ್ನು ಗಟ್ಟಿಗೊಳಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಅಂದು ಆಟವನ್ನೇ ಆಡದೇ ದೈಹಿಕಶಿಕ್ಷಕರೊಂದಿಗೆ ಸೇರಿ ಅಂಕಣದ ಸುತ್ತಲೂ ನೀರು ಬರದಂತೆ ಗುಂಡಿ ತೆಗೆದು ಮಣ್ಣನ್ನು ತಂದು ಕಟ್ಟೆ ಕಟ್ಟಿದ್ದಾರೆ. ಮರುದಿನದಿಂದ ಮಳೆ ಬಂದರೂ ಅಷ್ಟೊಂದು ಸಮಸ್ಯೆ ಆಗದಂತೆ ಮಾಡಿಕೊಂಡಿದ್ದ ವ್ಯವಸ್ಥೆಯಿಂದಾಗ ಆಟವನ್ನು ಆಡಿದ್ದಾರೆ. ಶಾಲೆ ಮುಗಿದ ನಂತರ ಹೆಚ್ಚಿನ ಸಮಯ ಅಭ್ಯಾಸಕ್ಕೆ ಬರುತ್ತಿದ್ದುದರಿಂದ ಇವರನ್ನು ಕರೆದುಕೊಂಡು ಹೋಗಲು ಪೋಷಕರು ತಡವಾಗಿಯೇ ಬರುತ್ತಿದ್ದರು, ಕೆಲವರು ಬೇಗನೇ ಬಂದು, ‘ಅದೇನು ಆಡ್ತಾರೋ ನೋಡೋಣ ಅಂತ ಬೇಗ ಬಂದೆ’ ಎಂದಿದ್ದಾರೆ. ‘ಹೇಗಿದ್ದರೂ ಬೇಗ ಆಟ ಮುಗಿಸಲ್ಲ ಅಂತ ಗೊತ್ತಿತ್ತು ಹಾಗಾಗಿ ತಡವಾಗಿ ಬಂದೆ’ ಅಂತ ಹೇಳಿದ ಪೋಷಕರು ಇದ್ದರು. ಒಟ್ಟಾರೆಯಾಗಿ ಮಕ್ಕಳು ಓದಿನ ಬಗ್ಗೆ ಇಷ್ಟೊಂದು ಆಸಕ್ತಿ ವಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಆಟ ಎಂದು ಬಂದರೆ ಊಟ-ತಿಂಡಿ, ಓದು ಎಲ್ಲವನ್ನು ಬಿಟ್ಟು ತಯಾರಾಗುತ್ತಾರೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ನಾನು ಶಾಲೆಯಲ್ಲಿದ್ದಾಗ ಹೀಗೆಯೇ ಮಾಡಿರುವುದನ್ನು ನೆನೆಸಿಕೊಂಡು ನಕ್ಕಿದ್ದೇನೆ.


 
ಕ್ರೀಡಾಕೂಟಕ್ಕೆ ಮೊದಲು ಸಮವಸ್ತ್ರವನ್ನು ಕಂಡು ಸಂಭ್ರಮಿಸಿದ್ದಾರೆ, ಧರಿಸಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಕ್ರೀಡಾಕೂಟ ಎನ್ನುವಾಗ ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಚಡಪಡಿಸಿದ್ದಾರೆ. ಕ್ರೀಡಾಕೂಟದ ದಿನ ಮಕ್ಕಳಿಗೆ ಹುರಿದುಂಬಿಸಿ, ಪ್ರೋತ್ಸಾಹದ ಮಾತುಗಳನ್ನಾಡಿ ಶಾಲೆಗೆ ಬಂದಾಗ ಕ್ರೀಡೆಯಲ್ಲಿ ಏನಾಯಿತೋ? ಏನೋ? ಎಂಬ ಕುತೂಹಲ, ಅನೇಕ ಮಕ್ಕಳು ಬಂದು ‘ಸರ್ ಯಾವುದಾದರೂ ಪಂದ್ಯಗಳನ್ನು ಗೆದ್ದರಾ? ಹೇಗೆ?’ ಎಂದು ಕೇಳುತ್ತಿದ್ದರು. ಲೀಗ್ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ ಎಂಬುದನ್ನು ಹಲವರು ಕೇಳಿ ಸಂಭ್ರಮಿಸಿದ್ದಾರೆ. ಕೆಲವರು ನಿಜವಾಗಿಯೂ ಗೆದ್ದರಾ? ಎಂದು ಬೆರಗಾಗಿದ್ದಾರೆ. ಕಳೆದಬಾರಿ ಯಾರ ಮೇಲೆ ಸೋತು ಹೊರಬಿದ್ದಿದ್ದರೋ ಆ ತಂಡವನ್ನು ಸೋಲಿಸಿ ಪ್ರತೀಕಾರವೆಂಬಂತೆ ತೊಡೆ ತಟ್ಟಿದ್ದಾರೆ. ಎದುರಾಳಿ ತಂಡದವರು ‘ವಿಶ್’ ಮಾಡಲು ಹೋದರೆ ನಿರಾಕರಿಸಿ ಹೋಗಿದ್ದಾರೆ. ಬಾಲಕ-ಬಾಲಕಿಯರ ತಂಡಗಳೆರಡೂ ಸೆಮಿಫೈನಲ್ ನಲ್ಲಿ ಸೋತು ಹೊರಬಿದ್ದಾಗ ಎದುರಾಳಿ ತಂಡದ ಆಟಗಾರರಿಗೆ ಶುಭಾಶಯಗಳನ್ನು ತಿಳಿಸಿ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ನಂತರ ಆ ನೋವನ್ನು ತಡೆಯಲಾಗದೇ ಅತ್ತಿದ್ದಾರೆ, ತಮ್ಮ ತಂಡದ ಸದಸ್ಯರಿಗೆ ತಾವೇ ಸಮಾಧಾನ ಮಾಡಿದ್ದಾರೆ. ಪಂದ್ಯ ಸೋತರೂ ೧೦೦% ಪ್ರಯತ್ನವನ್ನು ಹಾಕಿದ್ದಾರೆ. ಆದರೆ ಆಟದಲ್ಲಿ ಸೋಲು-ಗೆಲುವನ್ನು ಸ್ವೀಕರಿಸಲು ಸಿದ್ಧರಾಗಿದ್ದರೆ ಮಾತ್ರ ಆಟಗಾರರಾಗಲು ಸಾಧ್ಯ. ಸೋತ ಮಕ್ಕಳು ಅದರಿಂದ ಸುಲಭವಾಗಿ ಹೊರಬರಲಿಲ್ಲ. ಕಾಲ ಎಲ್ಲವನ್ನು ಮರೆಸುತ್ತದೆ ಎನ್ನುವಂತೆ ಆದ ಸೋಲಿನ ನೋವನ್ನು ಮರೆತರು. ಇತ್ತೀಚೆಗೆ ಬಾಲಕರ ಥ್ರೋಬಾಲ್ ಫೈನಲ್ ಪಂದ್ಯ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂಬುದನ್ನು ತಿಳಿದು ಅನೇಕ ಮಕ್ಕಳು ಅಲ್ಲಿಗೆ ಬಂದಿದ್ದರು.
 
ತಮ್ಮಗಳ ತಂಡ ಸೋತಿದ್ದರೂ ಆಡುವ ಶಾಲೆಯ ಮಕ್ಕಳಿಗೆ ಹುರಿದುಂಬಿಸಲು ಕೊಕ್ಕೋದಲ್ಲಿ ಸೋಲನ್ನು ಕಂಡಿದ್ದ ತಂಡದ ಕೆಲವು ವಿದ್ಯಾರ್ಥಿಗಳು ಬಂದಿದ್ದರು. ಥ್ರೋಬಾಲ್ ಸೋತರೂ, ಗೆದ್ದರೂ ಮುಂದಿನ ಹಂತಕ್ಕೆ ಹೋಗುವುದು ಖಚಿತವಾಗಿತ್ತು. ದುರಾದೃಷ್ಟವಶಾತ್ ಮಕ್ಕಳು ಸೋತರು. ಆದರೂ ದ್ವಿತೀಯ ಸ್ಥಾನ ಲಭಿಸಿತ್ತು. ಪ್ರಶಸ್ತಿಯನ್ನು ಪಡೆದು ವಿದ್ಯಾರ್ಥಿಗಳು ಸಂಭ್ರಮಿಸಿದರು. ಟ್ರೋಫಿ ಹಿಡಿದು ಕುಣಿದಿದ್ದಾರೆ. ಅದಕ್ಕೆ ಮುತ್ತಿಟ್ಟಿದ್ದಾರೆ. ಇವೆಲ್ಲವೂ ಮರೆಯದ ಕ್ಷಣವಾಗಿದ್ದವು. ಇದರ ನಡುವೆ ಬಾಲಕಿಯರ ಕೊಕ್ಕೋ ತಂಡದ ಮಾನ್ಯತಾ, ಮತ್ತು ಮಾನ್ಯ ಇಬ್ಬರೂ  ‘ನಾವು ಗೆದ್ದಿದ್ದರೆ ಈ ರೀತಿ ಟ್ರೋಫಿ ನಮ್ಮ ಕೈಯಲ್ಲೂ ಇರುತ್ತಿತ್ತು’ ಎಂದುಕೊಂಡು ಟ್ರೋಫಿಯನ್ನು ಹಿಡಿದು ಬೆರಗುಗಣ್ಣಿನಿಂದ ನೋಡಿದ್ದಾರೆ.
 
 ಮುಂದಿನ ವರ್ಷಕ್ಕೆ ಶಾಲೆಯಲ್ಲಿ ಇರುವವರು ಪ್ರಯತ್ನ ಮಾಡಿ ಆದರೂ ಆಗಬಹುದು, ಸೋಲಿನಿಂದ ಕಲಿತ ಪಾಠವನ್ನು ನೆನಪಲ್ಲಿಡಿ, ಅದನ್ನು ಮುಂದಿನ ದಿನಗಳಲ್ಲಿ ಆಟವಾಡುವಾಗ ಬಳಸಿಕೊಳ್ಳಿರಿ, ಸೋಲದೇ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ. ಆ ರೀತಿಯ ಇತಿಹಾಸವನ್ನು ಸೃಷ್ಟಿಸುವ ವಿದ್ಯಾರ್ಥಿಗಳಾಗಲಿ ಎಂಬುದೇ ಆಶಯ. ಮಕ್ಕಳ ಕೊಕ್ಕೋ ತಂಡ ನನ್ನ ಬಾಲ್ಯದ ದಿನಗಳ ಕೊಕ್ಕೋವನ್ನು ನೆನಪಿಸಿದ್ದು,  ಎಲ್ಲವನ್ನೂ ಬೆಸೆದದ್ದು ಬರೀ ‘ಕೊಕ್ಕೋ’ ಮಾತ್ರ…

ಚೇತನ್ ಸಿ ರಾಯನಹಳ್ಳಿ

Leave a Reply

Your email address will not be published. Required fields are marked *

Scan the code