ಕೋಲಾರನ್ಯೂಸ್

ಯೋಜನೆಗಳ ಅನುಷ್ಠಾನ ಸರ್ಕಾರದ ಔದಾರ್ಯ:ಎಸ್.ಎನ್.ನಾರಾಯಣಸ್ವಾಮಿ

ಯೋಜನೆಗಳ ಅನುಷ್ಠಾನ ಸರ್ಕಾರದ ಔದಾರ್ಯ:ಎಸ್.ಎನ್.ನಾರಾಯಣಸ್ವಾಮಿ

(KOLARA): ಚುನಾವಣೆಯಲ್ಲಿ ಸಂದಭದಲ್ಲಿ ನೀಡಿದ ಐದು ಭರವಸೆಗಳನ್ನು ಜಾತಿ-ಮತ-ಪಕ್ಷ-ಬೇದ ಮರೆತು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ, ಇದು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರದ ಔದಾರ್ಯ ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಎಸ್.ಎನ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯಲ್ಲಿ ಸಂತೇ ಮೈದಾನದ ಬಳಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಮ್ಮ ಸರ್ಕಾರ ಎಂದರು.

ನಮ್ಮ ಸರ್ಕಾರ ಬಡವ, ರೈತ, ಶ್ರಮಿಕವರ್ಗ, ಮಹಿಳೆಯರ ಮತ್ತು ಯುವಜನತೆಯ ಸಬಲೀಕರಣಕ್ಕಾಗಿ ಸದಾಕಾಲ ಬದ್ದವಾಗಿರುತ್ತದೆ. ಈ ಹಿನ್ನಲೆಯಲ್ಲಿ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗಾಗಿ 5ಜನಪರ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ, ಶಕ್ತಿಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಭಿ ಬದುಕಿಗಾಗಿ ಮಾಸಿಕ ೨ಸಾವಿರ ರೂಗಳನ್ನು ನೀಡಲಾಗುತ್ತಿದೆ, ಪದವಿಧರ ನಿರುದ್ಯೋಗಿಗಳಿಗೆ ಮಾಸಿಕ 3ಸಾವಿರ ಹಣವನ್ನು ಹಾಗೂ ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ವ್ಯಕ್ತಿಗೆ 10ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಲ್ಲಿ ನೀಡಲಾಗುತ್ತಿದೆ. ಇದು ನಮ್ಮ ಬದ್ದತೆ. ಇದರೊಟ್ಟಿಗೆ ಪ್ರಸಕ್ತ ವರ್ಷದಲ್ಲಿ ತೀರ್ವ ಬರಗಾಲ ಎದುರಿಸುತ್ತಿದ್ದು, ರೈತರಿಗೆ ಸಹಾಯ ಹಸ್ತ ನೀಡುವುದರೊಟ್ಟಿಗೆ ಬ್ಯಾಂಕ್‌ಗಳಿoದ ಪಡೆದ ಸಾಲದ ಬಡ್ಡಿಯನ್ನು ಮನ್ನಾ, ಹೈನೋದ್ಯಮಗಳಿಗೆ ಪ್ರತಿ ಲೀ ಹಾಲಿನ ಮೇಲೆ 5ರೂ ಸಬ್ಸಿಡಿ ನೀಡಲಾಗುತ್ತಿದೆ. ಮತ್ತು ಹಸುಗಳಿಗೆ ಮೇವಿನ ಕಿಟ್ ಒದಗಿಸಲಾಗಿದೆ ಎಂದರು.

ಪ್ರಚಾರದ ಗಿಮಿಕ್, ಅಕ್ಕಿ ವಿತರಣೆ: ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ, ರಾಜ್ಯದ ಬಡವರಿಗೆ 1೦ಕೆಜಿ ಅಕ್ಕಿ ನೀಡಲು ಕೇಂದ್ರದ ಮೋದಿ ಸರ್ಕಾರಕ್ಕೆ ಆಹಾರ ಸಚಿವ ಮತ್ತು ಮುಖ್ಯ ಮಂತ್ರಿಗಳ ನಿಯೋಗ 34ರೂಗಳಿಗೆ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಅಕ್ಕಿ ನೀಡಲು ನಿರಾಕರಿಸಿದ ಮೋದಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ 29ರೂ.ಗೆ ಕೆಜಿ ಅಕ್ಕಿ ವಿತರಣೆ ಮಾಡುತ್ತಿರುವುದು ಪ್ರಚಾರದ ಗಿಮಿಕ್ ಆಗಿದೆ. ನಮ್ಮ ಸರ್ಕಾರದ ಯಶಸ್ಸನ್ನು ಸಹಿಸದ ಬಿಜೆಪಿ ನಾಯಕರು ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಟೀಕಿಸಿದ್ದರು. ಇಂತಹವರಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬಾಯಿಗೆ ಬೀಗ ಹಾಕಿದ್ದೇವೆ. ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ, ಜನತೆಯ ಅಂತರoಗದ ಧ್ವನಿಯನ್ನು ಅರಿತು ಅವರ ಸಮಸ್ಯೆಗಳಿಗೆ ಸ್ಪಂಧಿಸುವುದು ನಾಯಕನ ಕರ್ತವ್ಯ ಎಂದು ವಿರೋಧ ಪಕ್ಷಕ್ಕೆ ಕುಟುಕಿದರು.

ಯೋಜನೆಗಳ ಅನುಷ್ಠಾನಗೊಳಿಸಿದ ಹೆಮ್ಮೆ: ತಹಸೀಲ್ದಾರ್ ರಶ್ಮಿ ಅವರು ಮಾತನಾಡಿ, ಸಾರ್ವಜನಿಕರ ಆರ್ಥಿಕ ಹೊರೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ 5ಯೋಜನೆಗಳು ಸಹಕಾರಿಯಾಗಿದೆ. ಯುವನಿಧಿ ಯೋಜನೆಯಲ್ಲಿ 366ಜನ ಅರ್ಜಿ ಸಲ್ಲಿಸಿದ್ದು, ಕೇವಲ 69ಫಲಾನುಭವಿಗಳಿಗೆ ಸೌಲಭ್ಯ ಲಭ್ಯವಾಗಿವೆ. ಆಧಾರ್ ಸೀಡಿಂಗ್ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರು ಪಹಣಿ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳಿಗೆ ಆಧಾರ್ ಸೀಡಿಂಗ್ ಮಾಡಬೇಕು. ಇದರಿಂದ ಆಕಸ್ಮಿಕವಾಗಿ ಉಂಟಾಗಬಹುದಾದ ಅಪಘಾತ ಮತ್ತು ಆರೋಗ್ಯದ ಅವಘಡಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 4ಲಕ್ಷ, ಹಾಗೂ ಓಪಿಸಿ ಅವರಿಗೆ 3ಲಕ್ಷ ರೂ, ವಿಮೆ ಸಿಗಲಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸಕಾರಗೊಳಿಸಿದ ತೃಪ್ತಿ ಹಾಗೂ ಇಂತಹ ಜನಪರ ಸರ್ಕಾರದ ಅಧಿಕಾರಿಯಾಗಿ ಸೇವೆ ಸಲ್ಲಿಸುವುದು ಹೆಮ್ಮೆ ಸಂಗತಿ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಉಪನಿರೀಕ್ಷಕ ಸುನಿಲ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮತ್ತು ರಾಮಶೆಟ್ಟಿ, ಪಿಚ್ಚಹಳ್ಳಿ ಗೋವಿಂದರಾಜು, ಮಹದೇವ್, ಹೆಚ್.ಕೆ.ನಾರಾಯಣಸ್ವಾಮಿ, ಕೆ.ವಿ.ನಾಗರಾಜು, ಎ.ಬಾಬು, ಸಿಡಿಪಿಓ ಮುನಿರಾಜು, ಪಿಡಿಓ ವೇಣು, ವಸಂತ್, ಆನಂದ್, ಕಿಶೋರ್, ಉಪತಹಸೀಲ್ದಾರ್ ಪ್ರಭಾಕರ್, ಆಲಂಬಾಡಿ ಜ್ಯೋತೆನಹಳ್ಳಿ ರಮೇಶ್, ವಿಜಿಕುಮಾರ್, ಆರ್.ಐ ಪವನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code