ನ್ಯೂಸ್ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎನ್ನುತ್ತಲೆ ಕೈ ಕುಟುಕಿದ: ಶಂಭು ಕಲ್ಲೋಳ್ಕರ್

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎನ್ನುತ್ತಲೆ ಕೈ ಕುಟುಕಿದ: ಶಂಭು ಕಲ್ಲೋಳ್ಕರ್

(BELAGAVI): ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಇಲ್ಲಿನ ಜನರಲ್ಲಿ ಒಬ್ಬರು ಕ್ಷೇತ್ರಕ್ಕೆ ಬಂದಿಲ್ಲ, ಇನ್ನೊಬ್ಬರು ಬರಬಾರದು ಎಂಬ ಆಕ್ರೋಶ ಜನರಲ್ಲಿ ಹೆಚ್ಚಾಗಿದೆ ಭಾವನೆಯಿಂದ ಜನ ನನಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಐಎಎಸ್ ಅಧಿಕಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳ್ಕರ್ ಟಾಂಗ್ ನೀಡಿದರು.

ಇಂದು ಕುಡಚಿ ವಿಧಾನಸಭಾ ವ್ಯಾಪ್ತಿಯ ಹಾರೂಗೇರಿ ಕ್ರಾಸ್ ಬಳಿಯಿರುವ ಮತಗಟ್ಟೆ 166ರಲ್ಲಿ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸ್ವಾಭಿಮಾನಿ ಜನರ ಕೈ ಮೇಲಾಗಲಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರುವ ಮನಸ್ಥಿತಿಯಿಂದ ಜನರು ಹೆಚ್ಚಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ಜನರ ಆಶಿರ್ವಾದದಿಂದ ಗೆಲುವು ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಶುಭ ಸೂಚಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಹಣೆಬರಹ ಜನರ ಕೈಯಲ್ಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರೆ ನಮಗೆ ಒಳ್ಳೆಯ ಆಡಳಿತ ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಎಲ್ಲೇ ಇದ್ದರೂ ಮೊದಲು ಎಲ್ಲ ಕೆಲಸಗಳನ್ನೂ ಬದಿಗಿಟ್ಟು ಮತ ಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಒಬ್ಬ ಜನಪ್ರತಿನಿಧಿಯ ಆಯ್ಕೆಗೆ ನಮ್ಮೆಲ್ಲರ ಒಂದು ಮತ ಕಾರಣವಾಗುತ್ತದೆ. ಆದ್ದರಿಂದ ಎಲ್ಲರೂ ಅತ್ಯಂತ ವಿವೇಚನೆಯಿಂದ ಮತದಾನ ಮಾಡುವಂತೆ ಕರೆ ನೀಡಿದರು.
 ಸ್ವಾಭಿಮಾನದ ನನ್ನ ಈ ಹೋರಾಟದಲ್ಲಿ ನನಗೆ ಬಿಜೆಪಿ ಎದುರಾಳಿಯಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಕೈ ಲೆಕ್ಕಕ್ಕೆ ಇಲ್ಲ ಎಂಬಂತೆ ಕಿಡಿಕಾರಿದರು.
ಮತದಾನದ ಹಕ್ಕನ್ನು ತಪ್ಪದೇ ಚಲಾವಣೆ ಮಾಡಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *

Scan the code