ಯಾವ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತದೆಯೋ ಅಂತಹ ಸಂಸ್ಥೆ ಹೆಚ್ಚುಕಾಲ ಜನರ ಮಧ್ಯೆ ಉಳಿದು ಬೆಳೆಯುತ್ತದೆ.
(SHIVAMOGA): ಯಾವ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತದೆಯೋ ಅಂತಹ ಸಂಸ್ಥೆ ಹೆಚ್ಚುಕಾಲ ಜನರ ಮಧ್ಯೆ ಉಳಿದು ಬೆಳೆಯುತ್ತದೆ ಎಂದು ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಶಿವಾನಂದ ಯು. ಭಂಡಾರ್ಕರ್ ತಿಳಿಸಿದರು.
ಪಟ್ಟಣದ ಕಾರಾಂತ ಸಭಾಭವನದಲ್ಲಿ ಶನಿವಾರ ನಡೆದ ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರಿ ಸಂಘದ 20ನೇ ವರ್ಷದ ಗ್ರಾಹಕರ ಸಮಾಲೋಚನಾ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಸಹಕಾರ ಚಳುವಳಿಗೆ ಭಾರತದಲ್ಲಿ ಭದ್ರ ಬುನಾದಿ ಇದ್ದು, ಜನರಿಂದಲೇ ಯಶಸ್ವಿಯಾಗಿದೆ. ಸಹಕಾರಿ ಸಂಘ ಸದೃಢವಾಗಿ ಬೆಳೆಯಲು ಸ್ಥಳೀಯರ ಸಹಕಾರ ಅಗತ್ಯ. ಷೇರುದಾರರ ನಿರಂತರ ವಹಿವಾಟು ನಡೆಸಿದರೆ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಗ್ರಾಹಕಸ್ನೇಹಿಯಾಗಿರುವ ನಮ್ಮ ಸಂಸ್ಥೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಹಕರಿಗೆ ಉಪಯುಕ್ತವಾಗಿವೆ. ವರ್ಷದಿಂದ ವರ್ಷಕ್ಕೆ ಆರ್ಥಿಕ ವಹಿವಾಟು ಹೆಚ್ಚುತ್ತಿದ್ದು ಪ್ರಸ್ತುತ ಸಾಲಿನಲ್ಲಿ ರೂ. 10.50 ಕೋಟಿ ಸಾಲ ನೀಡಿದ್ದು, ಶೇ. 100ರಷ್ಟು ವಸೂಲಾತಿಯಾಗಿದೆ. ಅಲ್ಲದೆ ರೂ. 37 ಲಕ್ಷಗೂ ಅಧಿಕ ಲಾಭ ಗಳಿಸಿದ್ದರಿಂದ ಷೇರುದಾರರಿಗೆ ಶೇ. 10.5 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಸಂಸ್ಥೆಯು ಕೇವಲ ಆರ್ಥಿಕ ವಹಿವಾಟಿಗೆ ಸೀಮಿತವಾದರೆ ಜನಸ್ನೇಹಿಯಾಗಲು ಸಾಧ್ಯವಿಲ್ಲ. ಇದರ ಜತೆಯಲ್ಲಿ ಷೇರುದಾರ ಸದಸ್ಯರ ಹಿತರಕ್ಷಣೆಯನ್ನೂ ಮಾಡಬೇಕು. ಅಂಭ್ರೀಣಿಯಲ್ಲದು ಯಶಸ್ವಿಯಾಗಿ ನಡೆಯುತ್ತಿದೆ. ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಾಮಾಜಿಕ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕ ನೆರವು, ಕೊರೋನಾ ಸಂದರ್ಭದಲ್ಲಿ ಸಮುದಾಯಕ್ಕೆ ಸಹಕಾರದಂಥ ಹತ್ತಾರು ಜನೋಪಯೋಗಿ ಕಾರ್ಯದಲ್ಲಿ ತೊಡಗಿಕೊಳ್ಳಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಜಿ.ಆರ್.ರಾಘವೇಂದ್ರ, ಎಚ್.ವಿ. ಶಿವಪ್ರಕಾಶ್, ಉಮಾ ಎಸ್. ಭಂಡಾರ್ಕರ್, ಜಿ.ಆರ್.ವಿಜಯಲಕ್ಷ್ಮೀ, ಎಸ್.ಡಿ. ಸುಮಾ, ರಾಧಾಕೃಷ್ಣ ನಾಯ್ಕ್, ಕಾರ್ತಿಕ್ ಭಂಡಾರ್ಕರ್, ಕರಿಬಸಪ್ಪ ಶಿವಳ್ಳಿ, ಎಸ್.ಪಿ. ಪ್ರಿಯಾಂಕ ಇನ್ನಿತರರು ಹಾಜರಿದ್ದರು. ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಚ್. ಸುಧೀಂದ್ರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ