ದಿನಪತ್ರಿಕೆಗಳಿಂದ ಓದಿನ ಅಭಿರುಚಿ ಬೆಳೆಯಲಿದೆ :ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್
(CHIKKAMAGALURU): ದಿನ ಪತ್ರಿಕೆಗಳನ್ನು ನಿತ್ಯವೂ ಓದುವುದರಿಂದ ಓದಿನ ಅಭಿರುಚಿ ಬೆಳೆಯಲಿದೆ ಎಂದು ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು. ಸಮೀಪದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕಸಾಪ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಡಿಂಡಿಮ ಹಾಗೂ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೆಗಳಿಂದ ಹಲವು ವಿಚಾರಗಳು ನಮಗೆ ನಿತ್ಯವೂ ದೊರೆಯಲಿದ್ದು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ದಿನಪತ್ರಿಕೆಗಳು ಸಾಕಷ್ಟು ಕೊಡುಗೆ ನೀಡಿವೆ. ಪತ್ರಕರ್ತರು ನಿಜವಾದ ಸಾಹಿತಿಗಳಾಗಿದ್ದು, ಕಾರ್ಯಕ್ರಮಗಳಲ್ಲಿ, ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸಮಗ್ರವಾಗಿ, ನೈಜವಾಗಿ ಶುದ್ಧ ವ್ಯಾಕರಣದಲ್ಲಿ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಜ್ಞಾನದ ಅಭಿವೃದ್ಧಿಗೆ ದಿನಪತ್ರಿಕೆಗಳು ಪೂರಕವಾಗಿವೆ. ಕೆಲವು ಕಡೆಗಳಲ್ಲಿ ಮಾಧ್ಯಮದ ಹೆಸರಿನಲ್ಲಿ ವಂಚನೆ ಮಾಡುವುದನ್ನು ನೋಡಬಹುದು. ಆದರೆ ದಿನಪತ್ರಿಕೆಗಳು ಎಂದಿಗೂ ಸಹ ಅಂತಹ ಕಾರ್ಯಗಳನ್ನು ಮಾಡುವುದಿಲ್ಲ ಎಂದರು.
ಎನ್.ಆರ್.ಪುರ ತಾಲೂಕು ಕಸಾಪ ಆಯೋಜಿಸಿರುವ ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿನ ಡಿಂಡಿಮ ಪದದ ಕುರಿತು ಇರುವ ವಿವಿಧ ಅರ್ಥಗಳನ್ನು ವಿದ್ಯಾರ್ಥಿಗಳು ನವೆಂಬರ್ ಅಂತ್ಯದೊಳಗೆ ಬರೆದು ಕಸಾಪಗೆ ನೀಡಬೇಕು. ವಿಶಿಷ್ಟ ಅರ್ಥಗಳನ್ನು ಬರೆದುಕೊಡುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ತಪ್ಪಾಗಿ ಬರೆದರೆ ತಿದ್ದಬಹುದು. ಆದರೆ ಬದುಕೆಂಬ ಅಕ್ಷರವನ್ನು ತಪ್ಪಾಗಿ ಬರೆದರೆ ತಿದ್ದಲು ಸಾಧ್ಯವಿಲ್ಲ. ಬದುಕಿನ ಅಕ್ಷರವನ್ನು ಸುಂದರವಾಗಿ ಬರೆದು ನಮ್ಮ ಜೀವನವನ್ನು ಸುಂದರ ಮಾಡಿಕೊಂಡು ತಂದೆ ತಾಯಿಗಳಿಗೆ ಉಡುಗೊರೆ ನೀಡಬೇಕು ಎಂದರು.
ಸಮಾಜ ತಿದ್ದುವಲ್ಲಿ ಪತ್ರಿಕೆಗಳ ಪಾತ್ರ ಕುರಿತು ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್ ನಾಯಕ್ ಉಪನ್ಯಾಸ ನೀಡಿ, ಪತ್ರಿಕೆ ವಿಶ್ವದ ಕೈಗನ್ನಡಿಯಾಗಿದ್ದು, ಒಬ್ಬ ವ್ಯಕ್ತಿಯ ಜೀವನ ವಿಕಾಸವನ್ನು ಮಾಡಲಿದೆ. ಪತ್ರಿಕೆಗಳು ಆಡಳಿತದಲ್ಲಿ ಚುರುಕು ಮುಟ್ಟಿಸುತ್ತಿದ್ದು, ವಿಶ್ವದ ಘಟನೆಯನ್ನು ನೈಜವಾಗಿ ಜನರಿಗೆ ಕೊಡುತ್ತವೆ. ಪತ್ರಿಕೆಗಳಿಂದ ಮೌಲ್ಯಗಳು ಬೆಳೆಯಲು ಸಾಧ್ಯವಿದ್ದು, ಮಾನವೀಯ ಮೌಲ್ಯಗಳನ್ನು ಸಹ ಇವು ಎತ್ತಿಹಿಡಿಯುತ್ತವೆ. ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ಸುದ್ದಿಯನ್ನು ಅವಲೋಕನ ಮಾಡಿದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಪತ್ರಿಕೆಗಳಿಂದ ಹೊಸ ಆಲೋಚನೆ, ಆವಿಷ್ಕಾರಕ್ಕೆ ಸಾಧ್ಯವಿದೆ. ಹಲವರ ಜೀವನ ಬದಲಾವಣೆಗೂ ಸಹ ಪತ್ರಿಕೆಗಳು ಕಾರಣವಾಗಿವೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕಾಗಿ ಪತ್ರಿಕೆಯನ್ನು ಓದಬೇಕಿದೆ ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ಪತ್ರಿಕೆಗಳು ಸಮಾಜದಲ್ಲಿ ಸಕಾರಾತ್ಮಕವಾಗಿ ಕಾರ್ಯನಿರ್ವಹಿಸುತ್ತ ಪರಿಣಾಮಕಾರಿಯಾಗಿ ಜನರ ಮನಸ್ಸು ಮುಟ್ಟುತ್ತವೆ. ಪತ್ರಿಕಾ ರಂಗ ಇಂದು ಬಹಳ ಮುಂದುವರೆದಿದ್ದು, ವಿದ್ಯಾರ್ಥಿಗಳಿಗೆ ಹಲವು ಮಾಹಿತಿಗಳು ದೊರೆಯುತ್ತವೆ.
ಜ್ಞಾನಾಭಿವೃದ್ಧಿಗೆ ಪತ್ರಿಕೆಗಳು ಪೂರಕವಾಗಿದ್ದು, ವಿದ್ಯಾರ್ಥಿಗಳು ಪುಸ್ತಕ ಪತ್ರಿಕೆಗಳನ್ನು ನಿರಂತರವಾಗಿ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ಡಿ.ಎನ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಸಮೂಹ ಗಾಯನ ಸ್ಪರ್ಧೆಯಲ್ಲಿ ಧೀರನ್ ತಂಡ ಪ್ರಥಮ, ಶ್ರದ್ಧಾ ತಂಡ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು, ಪ್ರಶಸ್ತಿ ಪತ್ರ ನೀಡಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಶಿವೇಂದ್ರ, ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ, ಪ್ರಧಾನ ಕಾರ್ಯದರ್ಶಿ ಶ್ರೀಚೇತನಾ, ಶಿಕ್ಷಕರಾದ ಎಚ್.ಎನ್.ಛಲವಾದಿ, ಟಿ.ಎ.ಗೀತಾ, ಎಚ್.ಆರ್.ನವೀದಾ ಮತ್ತಿತರರು ಉಪಸ್ಥಿತರಿದ್ದರು.