‘ಇದೇನು ಸ್ವದೇಶಿಮೇಳವೋ, ನಮ್ಮ ಶಾಲಾ ಮಕ್ಕಳ ಮೇಳವೋ!?’
ಶಿವಮೊಗ್ಗ ನಗರದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳು ಆಗಾಗ ಆಯೋಜನೆಗೊಳ್ಳುತ್ತಲೇ ಇರುತ್ತವೆ. ಅಲ್ಲಿ ಅನೇಕ ಕಾರ್ಯಕ್ರಮಗಳು ಕೂಡ ಇರುತ್ತದೆ. ಬಹಳ ದೊಡ್ಡದಾದ ವೇದಿಕೆ. ಅಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಸಿಗುವುದೇ ಒಂದು ರೀತಿಯ ಅದೃಷ್ಟ ಎನ್ನುವಂತಾಗಿರುತ್ತದೆ. ಅದೊಂದು ದಿನ ವಿನಯ್ ಶಿವಮೊಗ್ಗ ಕಾಲ್ ಮಾಡಿ, ‘ಮುಂದಿನ ತಿಂಗಳು ಸ್ವದೇಶಿಮೇಳ ಅನ್ನುವ ಬೃಹತ್ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜನೆಗೊಳ್ಳಲಿದೆ. ನಿಮ್ಮ ಶಾಲಾ ಮಕ್ಕಳಿಂದ ಅರ್ಧಗಂಟೆಯ ಕಾರ್ಯಕ್ರಮ ಸಿಗಬಹುದಾ?’ ಎಂದರು.
ಖಂಡಿತವಾಗಿ ಎಂಬ ಭರವಸೆಯನ್ನು ನೀಡಿದ್ದೆ. ಸ್ವಲ್ಪ ದಿನಗಳ ನಂತರ ಆ ವಿಷಯವನ್ನೇ ಮರೆತಿದ್ದೆ. ವಿನಯಣ್ಣನೇ ನೆನಪು ಮಾಡಿ ‘ಅಮರಪುತ್ರರು’ ನಾಟಕವನ್ನು ಈ ವೇದಿಕೆಯಲ್ಲಿ ನೀಡಬಹುದಾ? ಎಂದರು. ಮಕ್ಕಳ ಬಳಿ ಕೇಳಿದಾಗ ‘ದಯವಿಟ್ಟು ಒಪ್ಪಿಕೊಳ್ಳಿ ಸರ್ ನಾಟಕವನ್ನು ಮಾಡೋಣ’ ಎಂದರು. ಆದರೆ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಅದಾಗಲೇ ಹಲವಾರು ಸ್ಪರ್ಧೆಗಳು ನಡೆಯುತ್ತಿದ್ದವು. ಅದರಲ್ಲಿದ್ದ, ನಾಟಕದಲ್ಲಿ ಅಭಿನಯಿಸಿದ್ದ ಕೆಲವು ಮಕ್ಕಳು ಬರಲಾಗುವುದಿಲ್ಲ ಎಂದರು. ಬೇರೆಯವರನ್ನು ಆ ಪಾತ್ರಕ್ಕೆ ತಯಾರುಮಾಡಬಹುದು ಎಂದುಕೊoಡೆವು. ಬೃಹತ್ ವೇದಿಕೆಯಲ್ಲಿ ಆ ಜನಜಂಗುಳಿಯಲ್ಲಿ ನಾಟಕ ಪ್ರದರ್ಶನ ಮಾಡುವುದು ಸ್ವಲ್ಪ ಕಷ್ಟವೇ ಸರಿ ಎನಿಸಿತು.
ಕಾರ್ಯಕ್ರಮ ಎರಡು ವಾರದಲ್ಲಿ ಇದೆ ಎನ್ನುವಾಗ ಆತ್ಮೀಯರಾಗಿದ್ದ ಡಾ.ಮೈತ್ರೇಯಿ ಆದಿತ್ಯಪ್ರಸಾದ್ ಅವರು ಸ್ವದೇಶಿಮೇಳದ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಂಡಿದ್ದರು. ‘ಈಗ ನಿಮ್ಮ ಶಾಲಾ ಮಕ್ಕಳಿಂದ ಏನೇನು ಕಾರ್ಯಕ್ರಮ ಸಿಗಬಹುದು?’ ಎಂದರು. ‘ಸಾಮೂಹಿಕವಾಗಿ ದೇಶಾಭಕ್ತಿಗೀತೆಗಳನ್ನು ಮಕ್ಕಳು ಹಾಡುತ್ತಾರೆ, ನಾಟಕ ಕಷ್ಟವಿದೆ’ ಎಂದೆ. ‘ಸರಿ ನಿಮ್ಮ ಮುಖ್ಯೋಪಾಧ್ಯಾಯರ ನಂಬರ್ ಕೊಡಿ ಒಮ್ಮೆ ಅವರೊಂದಿಗೂ ಮಾತನಾಡುತ್ತೇನೆ’ ಎಂದು ನಂಬರ್ ತೆಗೆದುಕೊಂಡರು.
ಮರುದಿನ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಈ ವಿಷಯವನ್ನು ಕುರಿತು ತಿಳಿಸಿದರು. ಒಟ್ಟು ನಾಲ್ಕು ಗೀತೆಗಳನ್ನು ಹಾಡುವುದೆಂದು ಅದರಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಂದ ಮತ್ತು ಪ್ರೌಢಶಾಲಾ ಮಕ್ಕಳಿಂದ ತಲಾ 2 ಗೀತೆಗಳನ್ನು ಹಾಡಿಸುವುದೆಂದು ತೀರ್ಮಾನಿಸಲಾಯಿತು. ಪ್ರೌಢಶಾಲಾ ಮಕ್ಕಳ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಪ್ರಾಥಮಿಕ ಶಾಲಾ ಮಕ್ಕಳ ಜವಾಬ್ದಾರಿಯನ್ನು ಸಂಗೀತ ಶಿಕ್ಷಕಿ ಸುಮಾಮೇಡಂಗೆ ನೀಡಲಾಯಿತು.
ಪ್ರೌಢಶಾಲೆಯಲ್ಲಿ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. 10ನೇ ತರಗತಿಯವರಿಗೆ ಪರೀಕ್ಷೆ ಸಮಯವಾದ್ದರಿಂದ ಅವರನ್ನು ಕರೆಯಲಿಲ್ಲ. ಹಿಂದೆ ‘ಆಕಾಶಕೆದ್ದು ನಿಂತ’ ಗೀತೆಯನ್ನು ಹಾಡಿದ್ದ 9ನೇ ತರಗತಿಯ ವಿದ್ಯಾರ್ಥಿನಿಯರನ್ನು ಕೇಳಿದಾಗ ಅವರಂತೂ ಸಂತೋಷದಿoದ ಒಪ್ಪಿಕೊಂಡರು. ಆಸಕ್ತಿಯಿದ್ದ ಮಕ್ಕಳು ಇತರ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಒಂದು ತಂಡವನ್ನು ರಚಿಸಿಕೊಂಡರು. 8ನೇ ತರಗತಿಯ ಭುವನ್ ‘ಸರ್ ನಾನು ಕೂಡ ಹಾಡಲು ಬರಬಹುದೇ?’ ಎಂದು ಕೇಳಿದನು. ಆತನೇ ಆಸಕ್ತಿಯಿಂದ ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ. ಆತನನ್ನೂ ಸೇರಿಸಿಕೊಳ್ಳಲಾಯಿತು. ಭುವನ್ ಮತ್ತು ಸುಜನ್ ಇಬ್ಬರೇ ಹುಡುಗರು ಹಾಡುವ ಈ ತಂಡದಲ್ಲಿದ್ದರು. ಒಟ್ಟು ೧೪ ವಿದ್ಯಾರ್ಥಿಗಳ ಪ್ರೌಢಶಾಲಾ ತಂಡ ಪ್ರತೀದಿನ ಮಧ್ಯಾಹ್ನ ಊಟ ಮುಗಿಸಿ, ಸಂಜೆ ತರಗತಿ ಮುಗಿದ ನಂತರ ಹಾಡಿನ ಅಭ್ಯಾಸವನ್ನು ಮಾಡುತ್ತಿದ್ದರು.
ಪ್ರಾಥಮಿಕ ಶಾಲೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳ ಬೃಹತ್ ತಂಡವೇ ಸಿದ್ಧವಾಗುತ್ತಿತ್ತು. ವೇದಿಕೆಯಲ್ಲಿ ಹೇಗೆ ನಿಂತು ಹಾಡಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿ. ಎಲ್ಲರನ್ನು ಸರಿಯಾಗಿ ಸಾಲಾಗಿ ನಿಲ್ಲಿಸಲಾಯಿತು. ವೇದಾಂತ್ಗೌಡ ಮತ್ತು ಅಚಿಂತ್ಯಶೆಟ್ಟಿಗೆ ರಾಷ್ಟçಧ್ವಜವನ್ನು ಹಾಡುವಾಗ ಹಿಡಿದುಕೊಳ್ಳಲು ತಿಳಿಸಲಾಯಿತು. ಪ್ರೌಢಶಾಲಾ ಮಕ್ಕಳು ‘ಚಪ್ಪಾಳೆ ಚಪ್ಪಾಳೆ’ ಹಾಡನ್ನು ಹಾಡುವಾಗ ಅದನ್ನು ಒಂದಿಷ್ಟು ಪರಿಣಾಮಕಾರಿಯಾಗಿಸಲು ಹಾಡಿನ ಸಾಲಿನಲ್ಲಿ ಬರುವ ಮಹನೀಯರ ಚಿತ್ರವನ್ನು ತಂದರೆ ಹೇಗೆ ಎಂದು ಮಕ್ಕಳೊಂದಿಗೆ ಚರ್ಚಿಸಿದೆ. ಹಿಂದಿನ ಕರ್ಯಕ್ರಮಕ್ಕೆ ಬಳಕೆಯಾಗಿದ್ದ ಸೈನಿಕರ ಚಿತ್ರವು ಅಲ್ಲಿಯೇ ಇತ್ತು ಅದನ್ನು ತೋರಿಸಿ ಈ ಮಾದರಿಯಲ್ಲಿ ಪ್ರತಿಯೊಬ್ಬ ಮಕ್ಕಳು ಒಂದೊAದು ವಿಷಯದ ಬಗೆಗೆ ಚಿತ್ರವನ್ನು ಅಂಟಿಸಿಕೊoಡು ಚೆಂದ ಮಾಡಿಕೊಂಡು ಬರಬಹುದೇ? ಎಂದಾಗ ಎಲ್ಲರೂ ಒಪ್ಪಿದರು.
ಮರುದಿನ ಸಾನ್ವಿರಾಮ್ ‘ಕೀರ್ತನೆ-ವಚನ’ದ ಬಗ್ಗೆ ಚೆಂದವಾಗಿ ತಯಾರಿ ಮಾಡಿಕೊಂಡು ಬಂದಿದ್ದಳು. ಅದನ್ನೇ ಮೂಲವಾಗಿಟ್ಟುಕೊಂಡು ‘ಇದೇ ಮಾದರಿಯಲ್ಲಿ ರೈತರು, ಸೈನಿಕರು, ರಾಷ್ಟ್ರೀಯ ನಾಯಕರು, ಕ್ರೀಡಾಲೋಕದ ಸಾಧಕರು, ಗಾಯಕರು, ಬೆಳ್ಳಿತೆರೆಯ ತಾರೆಗಳು… ಹೀಗೆ ವಿವಿಧ ವಿಭಾಗದಲ್ಲಿ ಪ್ರತೀ ಮಕ್ಕಳಿಗೂ ತಿಳಿಸಲಾಯಿತು. ಭುವನ್ ಮತ್ತು ಸೃಜನ್ ರಾಷ್ಟçಧ್ವಜ ಮತ್ತು ನಾಡಧ್ವಜವನ್ನು ಹಿಡಿದು ಹಾಡುವುದು ಎಂದು ತೀರ್ಮಾನವಾಯಿತು.
ಮೈತ್ರೇಯಿ ಮೇಡಂ ‘ನಾಳೆ ಸಂಜೆ 6ಕ್ಕೆ ಸರಿಯಾಗಿ ನಿಮ್ಮ ಕಾರ್ಯಕ್ರಮ ಆರಂಭವಾಗಲಿದೆ. ಮಕ್ಕಳಿಗೆ ಒಂದು ತಿಂಡಿಯ ವ್ಯವಸ್ಥೆ ಕೂಡ ಇರಲಿದೆ. ಹಾಗಾಗಿ ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಬನ್ನಿ’ ಎಂದರು. ಸರಿ ಎಂದಾಯಿತು. ಎಲ್ಲಾ ಮಕ್ಕಳಿಗೂ ವಿಷಯ ತಿಳಿಸಿದಾಗ ಶಾಲೆ ಮುಗಿಸಿ ಮನೆಗೆ ಹೋಗಿಬರುವುದಕ್ಕೆ ತಡವಾಗುವುದು ಎಂದೆನಿಸಿತು. ಹಾಗಾಗಿ ಕರ್ಯಕ್ರಮಕ್ಕೆ ಶಾಲೆ ಮುಗಿಸಿ ಇಲ್ಲಿಂದಲೇ ಶಾಲಾಬಸ್ನಲ್ಲಿ ತೆರಳೋಣ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು.
ಹಾಗಾಗಿ ಮಕ್ಕಳು ತರಗತಿ ಮುಗಿದ ನಂತರ ಒಮ್ಮ ಅಭ್ಯಾಸ ಮಾಡಿ ನಂತರ ಮುಖತೊಳೆದುಕೊಂಡು ತಯಾರಾಗಿ ಹೋಗೋಣ, ಪೋಷಕರಿಗೆ ನೇರವಾಗಿ ಅಲ್ಲಿಗೇ ಬರಲು ತಿಳಿಸಿ ಎಂದಾಗ ಕೃತಿ ಮತ್ತು ಮಧುಮಿತ, ‘ಸರ್ ನಮ್ಮ ಬ್ಯಾಗ್ ಮತ್ತು ಊಟದಡಬ್ಬಿಗಳು ಏನು ಮಾಡುವುದು?’ ಎಂದಾಗ ‘ಅದನ್ನು ಅಲ್ಲಿಗೇ ತೆಗೆದುಕೊಂಡು ಹೋಗೋಣ. ಏನಾದರು ವ್ಯವಸ್ಥೆ ಮಾಡೋಣ’ ಎಂದೆ ಎಲ್ಲರೂ ಒಪ್ಪಿದರು. ಕಾರ್ಯಕ್ರಮದಲ್ಲಿ ೪ ಹಾಡುಗಳಿದ್ದ ಕಾರಣ ಪ್ರಾಥಮಿಕ ಶಾಲೆಯ ಮಕ್ಕಳು ಮೊದಲು ನಂತರ ಪ್ರೌಢಶಾಲಾ ಮಕ್ಕಳು ಹಾಡುವುದು, ವೇದಿಕೆಗೆ ಬರುವುದು ಹಾಡಿದ ನಂತರ ನಿರ್ಗಮಿಸುವುದು ಹೇಗೆ ಎಂಬುದನ್ನು ಎಲ್ಲರಿಗೂ ತಿಳಿಸಲಾಯಿತು.
ಕಾರ್ಯಕ್ರಮದ ದಿನ ಬೆಳಗ್ಗೆ ಶಾಲೆಗೆ ಬೇಗ ಬಂದ ವಿದ್ಯಾರ್ಥಿಗಳು ಒಮ್ಮೆ ಅಭ್ಯಾಸಕ್ಕೆ, ತಯಾರಿಗೆ ಮುಂದಾದರು. ಮಧ್ಯಾಹ ಊಟ ಮುಗಿಸಿ ಧ್ವಜವನ್ನು, ಕೈಗೆ ತ್ರಿವರ್ಣದ ಬ್ಯಾಂಡ್ಅನ್ನು, ಕೇಸರಿ-ಬಿಳಿ-ಹಸಿರು ಬಣ್ಣದ ಟೋಪಿಗಳನ್ನು ಜೋಡಿಸಿಕೊಂಡರು. ಸಂಜೆಗೆ ಎಲ್ಲಾ ಮಕ್ಕಳು ಒಂದೆಡೆ ಸೇರಿ ಟ್ರ್ಯಾಕ್ ಜೊತೆಗೆ ಎಲ್ಲಾ ಹಾಡುಗಳನ್ನು ಸರಿಯಾಗಿ ಅಭ್ಯಾಸ ಮಾಡಿ ಕೊನೆಯ ಪ್ರೌಢಶಾಲಾ ಮಕ್ಕಳ ಹಾಡಿಗೆ ವಿವಿಧ ಸಾಧಕರ ಚಿತ್ರವನ್ನು ಪ್ರಾಥಮಿಕ ಶಾಲಾ ಮಕ್ಕಳು ಹೇಗೆ ಹಿಡಿದುಬರಬೇಕು, ಎಲ್ಲಿಂದ ಬರಬೇಕು ಎಂದು ಸೂಚನೆ ನೀಡಲಾಯಿತು. ಅಭ್ಯಾಸವೆಲ್ಲ ಮುಗಿದಾಗ. ಒಂದಿಷ್ಟು ಹುಡುಗಿಯರು ಮುಖತೊಳೆದು ತಾವು ತಂದಿದ್ದ ಮಿನಿ ‘ಮೇಕಪ್ ಕಿಟ್’ ಬಳಸಿಕೊಂಡು ಸಿದ್ಧರಾಗತೊಡಗಿದರು.
ಶಾಲೆಯ ಎಲ್ಲಾ ಮಕ್ಕಳು ತೆರೆಳತೊಡಗಿದರು. ನಮಗೆಂದು ಬಸ್ ಸಿದ್ಧವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಲವಲವಿಕೆಯಿಂದ ಓಡಾಡುವುದನ್ನು ಕಂಡು ಇತರ ಮಕ್ಕಳು ‘ನಾವು ಹಾಡಿಗೆ ಸೇರಿಕೊಳ್ಳಬೇಕಿತ್ತು’ ಎಂದುಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಒಂದಿಷ್ಟು ಶಿಕ್ಷಕರು ಕೂಡ ಫ್ರೀಡಂಪಾರ್ಕ್ಗೆ ಬಂದರು. ಎಲ್ಲರೂ ಸಾಲಾಗಿ ನಿಂತಾಗ ಆಯೋಜಕರು ಕಂಡು ‘ಕಾರ್ಯಕ್ರಮ ನೀಡಲು ಬಂದಿರುವವರಾ?’ ಎಂದರು ‘ಹೌದು’ ಎಂದೆವು ಅಷ್ಟರಲ್ಲಿ ವಿನಯಣ್ಣ, ಮೈತ್ರಕ್ಕ ಇಬ್ಬರೂ ಸಿಕ್ಕರು. ಉಭಯಕುಶಲೋಪಹರಿಸಾಂಪ್ರತದ ನಂತರ ‘ಶಿಕ್ಷಕರು ಮಕ್ಕಳೆಲ್ಲಾ ಸೇರಿ ಒಟ್ಟು ಎಷ್ಟು ಜನರಿದ್ದೀರಿ’ ಎಂದರು. ಆಗ ಲೆಕ್ಕ ಹಾಕಿದಾಗ ತಿಳಿದದ್ದು ಒಟ್ಟು ೪೫ ಮಂದಿ ಇದ್ದೆವು ಎಂದು. ಏಕೆ ಈ ಪ್ರಶ್ನೆ? ಎಂದಾಗ ‘ತಿಂಡಿಯ ವ್ಯವಸ್ಥೆ ಮಾಡಬೇಕಲ್ಲವೇ? ಹಾಗಾಗಿ’ ಎಂದರು ಹಾಗೇ ಸಾಲಾಗಿ ಒಳಗೆ ಪ್ರವೇಶಿಸಿದೆವು. ತಿನಿಸಿನ ಅಂಗಳದಲ್ಲಿ ಕುಳಿತು ತಿನ್ನಲು ಮಾಡಿದ್ದ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿತ್ತು. ‘ಹೊಟೇಲ್ ಶುಭಂ’ ನವರಿಂದ ತಿಂಡಿಯ ವ್ಯವಸ್ಥೆಯಿತ್ತು. ಓದಿನ ಜೊತೆಗೆ ತಿನ್ನುವುದರಲ್ಲೂ ಮುಂದಿದ್ದ ಹಿತ, ‘ಸರ್ ಏನೇನು ತಿನ್ನೋಕೆ ಕೊಡಬಹುದು? ಎಂದು ಕುತೂಹಲದಿಂದ ಕೇಳಿದಳು. ಅಷ್ಟರಲ್ಲಿಯೇ ಪುಳಿಯೋಗರೆ, ಅವಲಕ್ಕಿ, ಬಾದಾಮಿ ಹಾಲು ಸಿದ್ಧವಾಗಿತ್ತು. ಹೊಟೇಲ್ ಮಾಲೀಕರೇ ಮಕ್ಕಳಿಗೆ ಬಡಿಸಿದರು. ಸುಜನ್ ಮಾತ್ರ ತನಗೆ ‘ಈಗ ಏನೂ ಬೇಡ. ಕಾರ್ಯಕ್ರಮ ಮುಗಿದ ಮೇಲೆ ತಿನ್ನುತ್ತೇನೆ’ ಎಂದನು. ಎಲ್ಲರೂ ತಿಂದು ವೇದಿಕೆಯ ಬಳಿಗೆ ಬಂದೆವು. ಒಂದೆಡೆ ಎಲ್ಲರ ಬ್ಯಾಗ್-ಊಟದಡಬ್ಬಿಗಳು ಇಟ್ಟೆವು. ವೇದಿಕೆಯನ್ನು ನೋಡಿ ಮಕ್ಕಳಿಗೆ ಒಂದಿಷ್ಟು ಸೂಚನೆಯನ್ನು ನೀಡಿದೆವು. ನಿಗಧಿತ ಸಮಯಕ್ಕಿಂತ ಮುಂಚೆಯೇ ಸಿದ್ಧರಾಗಿದ್ದೆವು.
ವೇದಿಕೆಗೆ ಆಹ್ವಾನ ನೀಡಿದರು. ಮೊದಲನೆಯದಾಗಿ ‘ಎಲೆಗಳು ನೂರಾರು’ ಹಾಡನ್ನು ನಂತರ ‘ಆಕಾಶಕ್ಕೆದ್ದು ನಿಂತ’ ನಂತರ ‘ನಮ್ಮತಾಯಿ ನಮ್ಮ ತಂದೆ ಎಲ್ಲಾ ಭಾರತ ದೇಶ’ ಕಡೆಯದಾಗಿ ‘ಚಪ್ಪಾಳೆ’ ಹಾಡನ್ನು ಹಾಡುವಾಗ ನೆರೆದಿದ್ದವರು ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸಿದರು. ಮಕ್ಕಳು ತಮ್ಮ ಕೈಲಾದಷ್ಟು ಉತ್ತಮವಾಗಿ ಕಾರ್ಯಕ್ರಮ ನೀಡಿದರು. ಆಯೋಜರು ನೆನಪಿನ ಕಾಣಿಕೆಯನ್ನು ವಿತರಿಸಿದರು.
ಮಕ್ಕಳಂತೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷಪಟ್ಟರು. ಒಂದಿಷ್ಟು ಜನ ಮಕ್ಕಳಿಗೆ ‘ಚೆನ್ನಾಗಿ ಹಾಡಿಡ್ಡೀರಿ’ ಎಂದರು. ಆಗಂತೂ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದಿಷ್ಟು ಮಕ್ಕಳು ‘ಫೋಟೋ’ ಎಂದು ನಿಂತರು, ಪೋಷಕರು ಬಂದಿದ್ದ ಕಾರಣ ಕೆಲವರು ಅವರೊಂದಿಗೆ ಹೊರಟರು, ಕೆಲವರು ಸುತ್ತಾಟ ಮಾಡತೊಡಗಿದರು, ಕೆಲವರು ತಿನಿಸುಅಂಗಳದಲ್ಲಿದ್ದರು. ಸುಜನ್ ಪೋಷಕರು ‘ಮಂಡಕ್ಕಿ ತಿನ್ನಲು ಬನ್ನಿ’ ಎಂದರು. ಅಷ್ಟರಲ್ಲಿ ನವ್ಯ ಪೋಷಕರೊಂದಿಗೆ ‘ಐಸ್ಕ್ರೀಮ್’ ಹೀಗೆ ಸಾಗಿತು. ಎಲ್ಲಾ ಮಕ್ಕಳನ್ನು ಕಳಿಸಿಕೊಟ್ಟು ಹೊರಡುವಾಗ ಅನೇಕ ಹಿರಿಯ ವಿದ್ಯಾರ್ಥಿಗಳು ಸಿಕ್ಕರು. ‘ಇದೇನು ಸ್ವದೇಶಿಮೇಳವೋ!? ನಮ್ಮ ಶಾಲಾ ಮಕ್ಕಳ ಮೇಳವೋ!?’ ಎಲ್ಲಿ ನೋಡಿದರು ನಮ್ಮ ಶಾಲಾ ಸಮವಸ್ತçದಲ್ಲಿ ಮಕ್ಕಳೇ ಕಾಣ್ತಾ ಇದಾರೆ ಎಂದರು.
5ದಿನದ ಉತ್ಸವದಲ್ಲಿ ನಮ್ಮ ಶಾಲಾ ಮಕ್ಕಳಿಗೆ ಈ ಅವಕಾಶ ಸಿಕ್ಕಿತ್ತು. ಕಾರ್ಯಕ್ರಮದಲ್ಲಿದ್ದ ಅಚ್ಚುಕಟ್ಟು, ಶಿಸ್ತು, ಸಮಯ ಪಾಲನೆ ಎಲ್ಲವೂ ಮೆಚ್ಚುಗೆಯಾಯಿತು. ಮಕ್ಕಳಂತೂ ಒಂದು ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿರುವುದೇ ತಮ್ಮ ಅದೃಷ್ಟ ಎಂದುಕೊoಡರು. ಒಟ್ಟಾರೆಯಾಗಿ ಒಂದು ಚೆಂದದ ಕಾರ್ಯಕ್ರಮದ ಭಾಗವಾಗಿದ್ದೆವು ಎನ್ನುವುದೇ ನಮ್ಮೆಲ್ಲರ ಹೆಮ್ಮೆಯಾಗಿತ್ತು.