ಮುಖ್ಯ ರಸ್ತೆಗಳಲ್ಲಿ ಕಸದ ರಾಶಿ ಕಂಡು ಜನ ಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ
(KOLARA): ಬಂಗಾರಪೇಟೆ : ತಾಲೂಕಿನ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಂಚಾಯಿತಿ ಎಂದರೆ ಡಿ.ಕೆ ಹಳ್ಳಿ ಪಂಚಾಯಿತಿ, ಮುಂಬರುವ ದಿನಗಳಲ್ಲಿ ಡಿ.ಕೆ ಹಳ್ಳಿ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಆದರೆ ಪಂಚಾಯತಿ ವ್ಯಾಪ್ತಿಗೆ ಬರುವ ದಾಸರ ಹೊಸಹಳ್ಳಿ ಗ್ರಾಮದಲ್ಲಿ ಹಾಗೂ ಬಹುತೇಕ ಮುಖ್ಯ ರಸ್ತೆ, ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಗಳಲ್ಲಿ ಕಸದ ರಾಶಿ ಕಂಡು ಜನ ಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏಕೆಂದರೆ,ದಾಸರಹೊಸಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಕಸದ ರಾಶಿಯೇ ಬಿದ್ದಿದ್ದು, ಸಂಪೂರ್ಣ ಗ್ರಾಮವೇ ಕಸದ ಕೊಂಪೆಯಂತಾಗಿದೆ. ಗ್ರಾಮದ ಮುಖ್ಯರಸ್ತೆ ಮುಂಭಾಗವೇ
ಕಸದ ರಾಶಿ ಸಂಗ್ರಹವಾಗಿದ್ದು, ಕೊಳೆತು ಗಬ್ಬು ನಾರುತ್ತಿದೆ. ಬಹು ದಿನಗಳಿಂದ ತೆರವುಗೊಳಿಸಿಲ್ಲವಾದ್ದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಬಂಗಾರಪೇಟೆ ಮತ್ತು ಕೆಜಿಎಫ್ ಮುಖ್ಯ ರಸ್ತೆಯ ಬದಿಯಲ್ಲಿ ಚಿಕ್ಕನ್ ಅಂಗಡಿಯ ಮಾಲೀಕರು ಕೋಳಿಯ ತ್ಯಾಜ್ಯಗಳನ್ನು ತಂದು ಎಸೆದ ಕಾರಣ, ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದೆ.ಇದರಿಂದ ಬೀದಿ ನಾಯಿಗಳ ಹಾವಳಿಯು ಸಹ ಹೆಚ್ಚಾಗಿದೆ.
ಅಸರ್ಮಪಕ ವಿಲೇವಾರಿ: ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ಗ್ರಾಮ ಪಂಚಾಯಿತಿಯ ಟ್ರ್ಯಾಕ್ಟರ್ ಗೆ ಕಸವನ್ನು ಹಾಕಬೇಕು. ಆದರೆ ಟ್ರಾಕ್ಟರ್ ವಾರಕ್ಕೊಮ್ಮೆ ಬರುತ್ತಿದ್ದು, ವಾರದ ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಆಗದೆ ಖಾಲಿ ನಿವೇಶನ ಹಾಗೂ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ. ಹೀಗಾಗಿ ಗ್ರಾಮ ಸಂಪೂರ್ಣ ಕಸಮಯವಾಗಿದೆ. ಗ್ರಾಮ ಪಂಚಾಯಿತಿಯ ಟ್ರಾಕ್ಟರ್ ಪ್ರತಿದಿನ ಸಮಯಕ್ಕೆ ಸರಿಯಾಗಿ ತಪ್ಪದೆ ಬಂದು ಕಸ ತೆಗದುಕೊಂಡು ಹೋದಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಆದರೆ, ಗ್ರಾಮ ಪಂಚಾಯಿತಿಯ ಸದಸ್ಯರು ಈ ಬಗ್ಗೆ ಗಮನ ಹರಿಸದೆ ಇರುವುದರಿಂದ ಕಸದ ಸಮಸ್ಯೆ ಬಂದಿದೆ.
ಸೊಳ್ಳೆಗಳ ಕಾಟಕ್ಕೆ ಜನ ಹೈರಾಣು: ತಾಲೂಕಿನಲ್ಲಿ ಎರಡು ದಿನದಿಂದ ತುಂತುರು ಮಳೆ ಆಗುತ್ತಿರುವುದರಿಂದ, ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಸಾರ್ವಜನಿಕರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸೊಳ್ಳೆ ನಿಯಂತ್ರಣ (ಫಾಗಿಂಗ್) ಯಂತ್ರವನ್ನು ಬಳಸದೆ ಇರುವುದರಿಂದ.ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದೆ. ಗ್ರಾಮ ತುಂಬಾ ಕಸದ ರಾಶಿ ಬಿದ್ದಿದ್ದರೂ ಕೂಡಾ, ಪಿಡಿಒ ಅಧಿಕಾರಿ, ಗ್ರಾಮ ಪಂಚಾಯಿತಿ ಸದಸ್ಯರು ಸುಳಿದಿಲ್ಲ ಎಂದು ಸದಸ್ಯರ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು. ಕಸದ ರಾಶಿ ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಆಗ್ರಹಿಸಿದ್ದಾರೆ.
ವರದಿ: ವಿಷ್ಣು ಕೋಲಾರ