ಪುರಾತನ ದೇವಸ್ಥಾನವಾಗಿದ್ದು ಅದರ ಪುನರುಜ್ಜೀವನಗೊಳಿಸುವುದು ಪುಣ್ಯದ ಕೆಲಸ
(SHIVAMOGA): ಸಾಗರ ಪ್ರಾಚೀನ ಇತಿಹಾಸ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮಾರಿಗುಡಿಯ ಪುರಾತನ ದೇವಸ್ಥಾನವಾಗಿದ್ದು ಅದರ ಪುನರುಜ್ಜೀವನಗೊಳಿಸುವುದು ಪುಣ್ಯದ ಕೆಲಸ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಸಾಗರ ಪಟ್ಟಣದ ಶಂಕರ ಮಠದ ಭಾರತೀತೀರ್ಥ ಸಭಾಭವನದಲ್ಲಿ ಕಾಪು ಮಾರಿಗುಡಿ ಸಾಗರ ಭಕ್ತವೃಂದದ ವತಿಯಿಂದ ನವದುರ್ಗಾ ಲೇಖನ ಯಜ್ಞದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಪು ಮಾರಿಗುಡಿ ಪುನರ್ ನಿರ್ಮಾಣ ಮಾಡುತ್ತಿರುವ ಆಡಳಿತ ಮಂಡಳಿಯ ಕೆಲಸಕ್ಕೆ ಸಹಕಾರ ನೀಡುತ್ತೇನೆ. ಕಳೆದ 25 ವರ್ಷದಿಂದ ಈ ದೇವಸ್ಥಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಮೊದಲು ಸಣ್ಣದಾಗಿದ್ದ ದೇವಸ್ಥಾನ ಈಗ ಭವ್ಯವಾಗಿ ನಿರ್ಮಾಣವಾಗಿದೆ. ಈ ಶುಭ ಸಂದರ್ಭದಲ್ಲಿ ನವದುರ್ಗಾ ಲೇಖನ ಯಜ್ಞದಂತಹ ಧಾರ್ಮಿಕ ಕಾರ್ಯದ ಮೂಲಕ ಲಕ್ಷಾಂತರ ಭಕ್ತರನ್ನು ತೊಡಗಿಸಿಕೊಳ್ಳುವಂತೆ ಮಾಡಿರುವುದು ಸಂತೋಷದ ಸಂಗತಿ ಎಂದರು.
ಕಾಪು ಮಾರಿಗುಡಿಯ ಆಡಳಿತ ಸಮಿತಿ ಅಧ್ಯಕ್ಷ ಕಾಪು ವಾಸುದೇವ ಶೆಟ್ಟಿ ಮಾತನಾಡಿ, ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಪಂಚದಾದ್ಯ0ತ ಇರುವ ಎಲ್ಲ ಭಕ್ತರು ಪಾಲ್ಗೊಳ್ಳಬೇಕೆನ್ನುವುದು ನಮ್ಮೆಲ್ಲರ ಉದ್ದೇಶ. ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ನವದುರ್ಗಾ ಲೇಖನ ಯಜ್ಞ ಹಮ್ಮಿಕೊಂಡಿದ್ದೇವೆ ಎಂದರು.
ಇದೇ ವೇಳೆ ಕಾಪು ಮಾರಿಗುಡಿ ಸಮಿತಿ ಪ್ರಮುಖರನ್ನು ಅಭಿನಂದಿಸಲಾಯಿತು. ಉದಯಕುಮಾರ ಶೆಟ್ಟಿ, ದಾಮೋದರ ಶರ್ಮ, ಗೀತಾಂಜಲಿ ಸುವರ್ಣ, ವಸಂತ ಕುಮಾರ್ ಶೆಟ್ಟಿ, ರಘುರಾಜ ಶೆಟ್ಟಿ, ಪ್ರಮೋದ್ ಸುವರ್ಣ, ವಿರೇಶ್ ಪೂಜಾರಿ, ಸುಧೀರ್ ಶೆಟ್ಟಿ, ಮಾ.ಸ.ನಂಜುಂಡ ಇನ್ನಿತರರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ