ಯೋಗದ ಮೂಲಕ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಲು ಸಾದ್ಯ
(SHIVAMOGA): ಸಾಗರ : ಯೋಗದಿಂದ ಆರೋಗ್ಯ ರಕ್ಷಣೆ ಸಾಧ್ಯ. ಭಾರತದ ಯೋಗವನ್ನು ವಿಶ್ವವೇ ಒಪ್ಪಿಕೊಂಡಿದ್ದು, ಯೋಗದ ಮೂಲಕ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಲು ಸಾದ್ಯ ಅದ್ದರಿಂದಲೆ ಯೋಗ ದಿನವನ್ನು ಇಡೀ ವಿಶ್ವಾದ್ಯಂತ ಆಚರಿಅಲಾಗುತ್ತದೆ ಎಂದು ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ತಿಳಿಸಿದರು.
ಇಲ್ಲಿನ ಅಣಲೆಕೊಪ್ಪದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆಯುಷ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒತ್ತಡದ ನಡುವೆ ಬದುಕುತ್ತಿರುವ ನಮಗೆಲ್ಲಾ ಯೋಗ ಮಾನಸಿಕ ಸ್ಥೈರ್ಯ ಮತ್ತು ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನೀಡುತ್ತದೆ. ಪ್ರಸ್ತುತ ಇಡೀ ವಿಶ್ವವೇ ಭಾರತದ ಯೋಗಶಕ್ತಿಗೆ ತಲೆಬಾಗಿದೆ. ಯೋಗದಿಂದ ನಿರೋಗಿಗಳಾಗಿ ಬದುಕಲು ಸಾಧ್ಯವಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳೆಯರಿಗೆ ಯೋಗ ಕುರಿತು ತರಬೇತಿ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದು ಹೇಳಿದರು.
ಪುರಪ್ಪೆಮನೆ ಸರ್ಕಾರಿ ಆರ್ಯುವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಪತಂಜಲಿ ಮಾತನಾಡಿ, ಪ್ರತಿಯೊಬ್ಬರೂ ಯೋಗವನ್ನು ಕಲಿಯುವ ಅಗತ್ಯವಿದೆ. ನಾವು ಉಪಯೋಗಿಸುತ್ತಿರುವ ಆಹಾರ, ಉಸಿರಾಡುತ್ತಿರುವ ಗಾಳಿ, ಕುಡಿಯುವ ನೀರು ಎಲ್ಲವೂ ಕಲುಷಿತಗೊಳ್ಳುತ್ತಿರುವ ಸಂಕೀರ್ಣ ಕಾಲಘಟ್ಟ ಇದಾಗಿದೆ. ಇಂತಹ ಹೊತ್ತಿನಲ್ಲಿ ನಾವು ಯೋಗವನ್ನು ಕಲಿಯುವ ಮೂಲಕ ಸಾಧ್ಯವಾದಷ್ಟು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಸಂರಕ್ಷಣಾಧಿಕಾರಿ ಸುವರ್ಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ರಾಜೇಶ್ವರಿ, ವಿಜಯಲಕ್ಷ್ಮೀ, ಸಾವಿತ್ರಿ ತುಮರಿಕೊಪ್ಪ, ರೇಣುಕಾ, ಸೌಮ್ಯ ಇನ್ನಿತರರು ಹಾಜರಿದ್ದರು.