ಪ್ರಾಮಾಣಿಕತೆಯಿಂದ ನ್ಯಾಯಯುತವಾಗಿ ದೊರಕಬೇಕಾದ ಪರಿಹಾರವನ್ನು ತೀರ್ಪಿನ ಮೂಲಕ ಕೊಡಿಸುವುದು ವಕೀಲರ ಜವಾಬ್ದಾರಿ
(KOLARA): ಬಂಗಾರಪೇಟೆ : ನ್ಯಾಯವನ್ನು ನಂಬಿ ಬರುವ ಕಕ್ಷಿದಾರರಿಗೆ ಸತ್ಯ ಮತ್ತು ಪ್ರಾಮಾಣಿಕತೆಯಿಂದ ನ್ಯಾಯಯುತವಾಗಿ ದೊರಕಬೇಕಾದ ಪರಿಹಾರವನ್ನು ತೀರ್ಪಿನ ಮೂಲಕ ಕೊಡಿಸುವ ವಕೀಲರ ಜವಾಬ್ದಾರಿ ವಕೀಲರದ್ದಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಹಮ್ಮದ್ ರಹಿಮುಲ್ಲ ನಡಪ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ನ್ಯಾಯಾಲಯದ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಾಗುತ್ತಿದೆ, ಕಾರಣ ಎಲ್ಲಾ ನ್ಯಾಯಾಲಯಗಳು ನ್ಯಾಯವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಾ ಬಂದಿವೆ, ವಿಶೇಷವಾಗಿ ವಕೀಲರು ನ್ಯಾಯಾಲಯ ಮತ್ತು ಕಕ್ಷಿದಾರರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ ಮಾತನಾಡಿ, ಇಂದಿನ ಕಾಲದಲ್ಲಿ ವಕೀಲರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ, ಅಪರಾಧ ಪ್ರಕರಣಗಳ ಸ್ವರೂಪವು ವಕೀಲರಿಗೆ ಸವಾಲಾಗಿ ಪರಿಣಮಿಸಿದೆ, ಅಧ್ಯಯನದ ಜೊತೆಗೆ ತಾಂತ್ರಿಕ ವಿಧಾನವನ್ನು ವಕೀಲರು ಅರಿಯಬೇಕಾಗಿದೆ. ವಕೀಲ ವೃತ್ತಿಯಲ್ಲಿ ಅನುಭವ ಮತ್ತು ಮಾತಿನ ಚಮತ್ಕಾರ ಎರಡೂ ಪ್ರಮುಖ ಪಾತ್ರ ವಹಿಸುತ್ತದೆ, ಇಂದಿನ ದಿನಗಳಲ್ಲಿ ವಕೀಲ ವೃತ್ತಿಗೆ ಗೌರವ ಇದೆ ಎಂದು ಹೇಳಿಕೊಂಡು ಕರ್ತವ್ಯ ಮರೆಯುತ್ತಿದ್ದೇವೆ, ಸಮಾಜದಲ್ಲಿ ವಕೀಲ ವೃತ್ತಿಗೆ ಘನತೆ ಗೌರವ ಬರಬೇಕೆಂದರೆ ಶ್ರಮಪಡಬೇಕು, ಸಮಾಜದಲ್ಲಿ ಬಡಬಗ್ಗರಿಗೆ ಸಾಧ್ಯವಾದಷ್ಟು ಉಚಿತ ನ್ಯಾಯ ದೊರಕಿಸಿ ಕೊಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಹಿರಿಯ ವಕೀಲರದ ಎಲ್.ಎನ್. ರಮಾನಾಥ್ ಎಂ.ಎನ್. ನಂಜುಂಡಪ್ಪ, ಜಯಪ್ರಕಾಶ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಅಲಬೂರ್, ಒಂದನೇ ಅಪರ ನ್ಯಾಯಧಿಶರಾದ ಸುಖಿತಾ.ಎಸ್. ಹದ್ಲಿ, ವಕೀಲರ ಸಂಘದ ಎಂ.ಅಮರೇಶ್, ಐ.ಜಿ.ಮಂಜುನಾಥ್, ರವಿಚಂದ್ರ, ರಂಜಿತ್ ಕುಮಾರ್, ಅಭಿಲಾಷ್, ಎಂ.ವಿಜಿಯಕುಮಾರ್, ಪಂಕಜ, ಆರ್.ಗೀತಾ, ಸುಮಾ, ಗಾಯತ್ರಿ, ವಿ.ಎಸ್.ವೇಣುಗೋಪಾಲ ಎಲ್ಲಾ ವಕೀಲರು ಹಾಜರಿದ್ದರು.
ವರದಿ: ವಿಷ್ಣು ಕೋಲಾರ