ಅತಿಥಿಗಳನ್ನು ವೇದಿಕೆಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು’
(ARTICAL): ‘ಕಾರ್ಗಿಲ್ ದಿವಸ್’ ಎನ್ನುವುದು ಭಾರತೀಯರ ಪಾಲಿಗೆ ಹೆಮ್ಮೆಯ ಮತ್ತು ನೋವಿನ ದಿನವೂ ಹೌದು. ಈ ಯುದ್ಧದಲ್ಲಿ ಭಾರತ ಗೆಲುವನ್ನು ಸಾಧಿಸಿದೆ. ಜೊತೆಗೆ ೫೨೭ಕ್ಕೂ ಹೆಚ್ಚಿನ ವೀರ ಯೋಧರು ಹುತಾತ್ಮರಾಗಿದ್ದಾರೆ. ಈ ಯುದ್ಧದ ಸಮಯದಲ್ಲಿ ವಿದ್ಯಾರ್ಥಿಯಾಗಿದ್ದ ನಾವುಗಳು ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕೆನಿಸಿತು. ಸೈನಿಕರ ಬಗ್ಗೆ ಹೆಮ್ಮೆ ಎನಿಸುವಂತೆ ಅಲ್ಲಲ್ಲಿ ಕಾರ್ಯಕ್ರಮ ಆಯೋಜಿಸುತ್ತ, ಭಾಷಣಗಳ ಮೂಲಕ ಹುರಿದುಂಬಿಸುತ್ತಿದ್ದ ಸಮಯದಲ್ಲಿ ನಮ್ಮಗಳ ಬಳಿಯಿದ್ದ ಒಂದಷ್ಟು ಹಣವನ್ನು ಆ ಬಳಗಕ್ಕೆ ನೀಡಿದ್ದೆವು. ಆಗ ವಠಾರದಲ್ಲಿದ್ದ ಒಂದೇ ಟಿ.ವಿಯಲ್ಲಿ ಬರುತ್ತಿದ್ದ ಡಿ.ಡಿ.1 ನಲ್ಲಿನ ವಾರ್ತೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆವು. ಕಾರ್ಗಿಲ್ ಬಗ್ಗೆ ಏನಾದರೂ ಮಾಹಿತಿ ಬರುತ್ತದೆಯೇ? ಎಂದು ಎಲ್ಲಿಯಾದರೂ, ‘ಭಾರತೀಯ ಸೈನಿಕರು ಒಂದಿಷ್ಟು ಭೂ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿದ್ದಾರೆ’ ಎಂದರೆ ಕೇಕೆ ಹಾಕಿ, ಚಪ್ಪಾಳೆ ಹೊಡೆದು ಎಲ್ಲರೂ ಸಂಭ್ರಮಿಸುತ್ತಿದ್ದೆವು. ಅದೇ ಎಲ್ಲಿಯಾದರೂ, ‘ಹೋರಾಟದಲ್ಲಿ ನಮ್ಮ ಸೈನಿಕರು ಮಡಿದಿದ್ದಾರೆ, ಹುತಾತ್ಮರಾಗಿದ್ದಾರೆ’ ಎಂಬ ಸುದ್ಧಿ ಬಂದ ತಕ್ಷಣ ನೀರವ ಮೌನವು ಆವರಿಸುತ್ತಿತ್ತು. ವಾರ್ತೆಗಳು ಮುಗಿಯುತ್ತಿದ್ದ ನಂತರ ಎಲ್ಲರೂ ಅದರ ಬಗ್ಗೆಯೇ ಚರ್ಚೆ. ದೂರದ ಕಾರ್ಗಿಲ್ ನಮ್ಮೆಲ್ಲರ ಭಾಗವಾಗಿತ್ತು.
ಅದಾದ ನಂತರದಲ್ಲಿ ಭಾರತ ಈ ಯುದ್ಧದಲ್ಲಿ ಗೆಲುವನ್ನು ಸಾಧಿಸಿದೆ ಎಂದಾಗ ರಸ್ತೆಯಲ್ಲಿರುವವರೆಲ್ಲರೂ ಸಂಭ್ರಮಿಸಿದ್ದೇವೆ. ಯಾರೋ ಸಿಹಿಯನ್ನು ಹಂಚಿದ್ದಾರೆ. ಅದು ಭಾರತೀಯರ ಪಾಲಿಗೆ ಮರೆಯಲಾಗದ ಸುದಿನ ಎಂದರೆ ತಪ್ಪಾಗಲಾರದು. ಪೇಪರ್, ಮತ್ತು ಟಿ.ವಿಯಲ್ಲಿ ಬರುತ್ತಿದ್ದ ಮಾಹಿತಿಗಳು ಮಾತ್ರ ತಿಳಿದಿತ್ತು. ಅಂದಿನಿಂದ ಸೈನಿಕರ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿತ್ತು. ಅದೆಲ್ಲಿಯಾದರೂ ಸೈನಿಕರ ವಾಹನಗಳು ಕಂಡಾಗ ಅವರತ್ತ ಕೈಬೀಸಿದ್ದೇವೆ, ಸಲ್ಯೂಟ್ ನೀಡಿದ್ದೇವೆ. ಸೈನಿಕರೆಂದರೆ ನಿಜವಾದ ಹಿರೋಗಳು ಎಂದು ತಿಳಿದಿದ್ದೆವು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಲ್ನಾಡ್ ಓಪನ್ ಗ್ರೂಪ್ ಸದಸ್ಯನಾದ ನಂತರ ‘ಗೀತಭಾರತಿ’ ಎನ್ನುವ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ, ಧೈರ್ಯ-ಶೌರ್ಯಗಳನ್ನು ಪ್ರದರ್ಶಿಸಿದ ವೀರಯೋಧರನ್ನು ಹತ್ತಿರದಿಂದ ಕಂಡಿದ್ದೇವೆ, ಅವರ ಮಾತುಗಳನ್ನು ಆಲಿಸಿದ್ದೇವೆ. ಅದೆಷ್ಟೋ ಬಾರಿ ಕಣ್ಣಂಚಲ್ಲಿ ನೀರು ಮೂಡಿದೆ, ಮನಸ್ಸುಗಳು ಆದ್ರವಾಗಿವೆ, ಅಯ್ಯೋ ಎನ್ನುವ ಉದ್ಘಾರ, ವೀರತ್ವದ ಮಾತುಗಳಿಗೆ ಚಪ್ಪಾಳೆ ಎಲ್ಲ ಭಾವನೆಗಳು ಒಂದೇ ರೀತಿಯಾಗಿತ್ತು ಎಂಬುದನ್ನು ಆ ಸಮಯದಲ್ಲಿ ಕಂಡದ್ದಿದೆ.
ನಮ್ಮ ಶಾಲೆಗೂ ಗೀತಭಾರತಿಗೆ ಬರುತ್ತಿದ್ದ ಸೈನಿಕರನ್ನು ಶಾಲೆಗೆ ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸಿ, ಮಕ್ಕಳಿಂದ ದೇಶಭಕ್ತಿಯ ಬಗ್ಗೆ ಮಾತನಾಡಿಸಿ, ಅವರ ಮಾತುಗಳನ್ನು ಕೇಳಿಸಲಾಗಿದೆ. ಅವರೊಂದಿಗೆ ಫೋಟೋ ಬೇಕಿದೆ ಎಂದು ಮಕ್ಕಳು ಮುಗಿಬಿದ್ದಿದ್ದಾರೆ. ಅನೇಕರು ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಹೆಮ್ಮೆಯಿಂದ ಘೋಷಣೆಗಳನ್ನು ಕೂಗಿದ್ದಾರೆ.
ಇತ್ತೀಚೆಗೆ ‘ಕಾರ್ಗಿಲ್ ವಿಜಯ್ ದಿವಸ್’ ಗೆ ೨೫ ವರ್ಷಗಳಾದ ಸಮಯದಲ್ಲಿ ಶಾಲೆಯಿಂದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮುಖ್ಯೋಪಾಧ್ಯಾಯರು ಸೂಚಿಸಿದರು. ಕಾರ್ಯಕ್ರಮಮವನ್ನು ನಗರದ ಕುವೆಂಪು ರಂಗಮಂದಿರಲ್ಲಿ ಆಯೋಜಿಸಲು ಸೂಚಿಸಿದರು. ಒಂದಿಷ್ಟು ವರ್ಷಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದ ‘ಕ್ಯಾಪ್ಟನ್ ನವೀನ್ ನಾಗಪ್ಪ’ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಯಿತು. ಅವರೂ ಪ್ರೀತಿಯಿಂದ ಒಪ್ಪಿದರು. ಶಿವಮೊಗ್ಗದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮಕ್ಕೆ ಅವರು ಬಂದಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮುಖಾಮುಖಿಯಾಗಿ ಕಾರ್ಯಕ್ರಮಕ್ಕೆ ಮತ್ತೊಮ್ಮೆ ಆಹ್ವಾನಿಸಲಾಯಿತು. ಆ ಸಮಯದಲ್ಲಿ ಅವರು ಹಿಂದೊಮ್ಮೆ ‘ಗೀತಭಾರತಿ’ ಕಾರ್ಯಕ್ರಮಕ್ಕೆ ಬಂದದ್ದು, ಶಾಲೆಗೆ ಭೇಟಿ ನೀಡಿದ್ದು ಎಲ್ಲವನ್ನು ಸ್ಮರಿಸಿಕೊಂಡರು. ಸೇನೆಯಿಂದ ನಿವೃತ್ತರಾಗಿರುವುದರಿಂದ ಅನೇಕ ಕಡೆ ಮಕ್ಕಳನ್ನು, ಯುವಕರನ್ನು ಹುರಿದುಂಬಿಸುವ ಕಾರ್ಯವನ್ನು ರಾಜ್ಯಾದ್ಯಂತ ಮಾಡುತ್ತಿದ್ದರು.
ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದರ ಕುರಿತು ಎಲ್ಲರೂ ಚರ್ಚಿಸಿ, ಮಕ್ಕಳಿಗೆ ಸೈನಿಕರ ಬಗ್ಗೆ ಪೋಸ್ಟರ್ ರಚನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಅದಕ್ಕೆ ಬಹುಮಾನವನ್ನು ಅತಿಥಿಗಳಿಂದಲೇ ಪಡೆಯಬಹುದು ಎಂದಾಗ ‘ಅವರಿಂದ ಪಡೆಯುವ ಅವಕಾಶ ಬಿಡಬಾರದು ಎಂದು’ ಪ್ರಯತ್ನಿಸಿದ್ದಾರೆ. ಜೊತೆಗೆ ಒಂದಿಷ್ಟು ಕಾರ್ಯಕ್ರಮಗಳನ್ನು ನೀಡುವುದರ ಬಗ್ಗೆ ಚರ್ಚಿಸಿ, ಸ್ವಾಗತಕ್ಕೆ ಭರತನಾಟ್ಯ, ಮೂಕಾಭಿನಯ, ಸಾಮೂಹಿಕ ನೃತ್ಯ, ಪಿರಮಿಡ್ ರಚನೆ, ಸಾಮೂಹಿಕವಾಗಿ ದೇಶಭಕ್ತಿಗೀತೆಗಳನ್ನು ಅಭ್ಯಾಸ ಜೊತೆಗೆ ರಾಷ್ಟ್ರಗೀತೆಯನ್ನು ವಾದ್ಯಗಳ ಮೂಲಕ ನುಡಿಸಲು ನಿರಂತರವಾಗಿ ಮಕ್ಕಳು ಅಭ್ಯಾಸ ಮಾಡತೊಡಗಿದರು. ನೃತ್ಯ ಶಿಕ್ಷಕ ಕಿರಣ್ ಬಿಡುವಿದ್ದಾಗಲೆಲ್ಲ ಅಭ್ಯಾಸ ಮಾಡಿಸುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಸಾಮೂಹಿಕ ಗೀತೆಯನ್ನು ಮಕ್ಕಳು ಅಭ್ಯಾಸ ಮಾಡಿ ಊಟಕ್ಕೆ ತೆರಳುತ್ತಿದ್ದರು. ಬೇಗ ಊಟ ಮುಗಿಸಿಕೊಂಡು ಮೂಕಾಭಿನಯದ ಮಕ್ಕಳು ಅಭ್ಯಾಸಕ್ಕೆ ಬರುತ್ತಿದ್ದರು. ಸಂಜೆಯ ಸಮಯದಲಿ ಪಿರಮಿಡ್ ರಚನೆಯ ಅಭ್ಯಾಸ ಸಾಗುತ್ತಿತ್ತು. ಒಂದೆಡೆಯಿಂದ ಮಕ್ಕಳು ವೇದಿಕೆಯ ಮೇಲೆ ಮಾತನಾಡಲು ತಯಾರಿ ಮಾಡಿಕೊಳ್ಳುತ್ತಿದ್ದರು.
ಇವುಗಳ ಮಧ್ಯೆ ಅತಿಥಿಗಳು ವೇದಿಕೆಗೆ ಬಂದಾಗ ‘ಅಮರ್ ಜವಾನ್’ ಅನ್ನು ಸಿದ್ಧಪಡಿಸಿ, ಅದಕ್ಕೆ ‘ರೀತ್’ ಇಟ್ಟು ಗೌರವ ಸಲ್ಲಿಸುವುದನ್ನು ಮಾಡಬೇಕಿತ್ತು. ಅಮರ್ ಜವಾನ್ ಅನ್ನು ಮಲ್ನಾಡ್ ಓಪನ್ ಗ್ರೂಪ್ ನ ರೋವರ್ ಚಂದನ್ ತಾನು ಸಿದ್ಧಪಡಿಸಿಕೊಡುವುದಾಗಿ ತಿಳಿಸಿದ. ಮುಖ್ಯೋಪಾಧ್ಯಾಯರು, ‘ರೀತ್ ಅನ್ನು ಹಿಡಿದುಕೊಳ್ಳಲು ಇಬ್ಬರು ಚೆನ್ನಾಗಿ ಮಾರ್ಚ್ ಫಾಸ್ಟ್ ನಲ್ಲಿರುವವರು, ಸ್ವಲ್ಪ ಎತ್ತರ ಇರುವವರು ಬೇಕಿತ್ತು’ ಎಂದಾಗ ಎದುರಿಗೆ ನವ್ಯಕಶ್ಯಪ್ ಬಂದಳು ಇವಳ ಜೊತೆಗೆ ‘ಕಳೆದ ಬಾರಿ ಬಾಲಕಿಯರ ಪಥಸಂಚಲನದ ನಾಯಕಿಯಾಗಿದ್ದ ನಿತ್ಯಶ್ರಿ ಇಬ್ಬರಿಂದಲೂ ಮಾಡಿಸಬಹುದು’ ಎಂದಾಗ ಮುಖ್ಯೋಪಾಧ್ಯಾಯರು ಒಪ್ಪಿದರು. ಇಬ್ಬರನ್ನೂ ಕರೆಯಿಸಿ ‘ಕಾರ್ಗಿಲ್ ವಿಜಯ್ ದಿವಸ್ ಅತಿಥಿಗಳನ್ನು ವೇದಿಕೆಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು. ಇದನ್ನು ನಿರ್ವಹಿಸುತ್ತಿರಾ?’ ಎಂದಾಗ ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿ ಖುಷಿಯಿಂದ ಒಪ್ಪಿಕೊಂಡರು. ಆದರೆ ನವ್ಯಳಿಗೆ ಎಸ್.ಎಸ್.ಎಲ್.ಸಿ ಆಗಿರುವುದರಿಂದ ಮನೆಯಿಂದ ಕಳಿಸುತ್ತಾರೋ ಇಲ್ಲವೋ? ‘ಬಂದೇ ಬರುತ್ತೇನೆ. ಆದರೂ ಒಮ್ಮೆ ಕೇಳಿ ಹೇಳುತ್ತೇನೆ’. ಎಂದಳು. ‘ಇಂತಹ ಅವಕಾಶಗಳು ಸಿಗುವುದೇ ಅಪರೂಪ ಅಲ್ಲದೇ ಕಾರ್ಯಕ್ರಮದ ಅತಿಥಿಗಳ ಜೊತೆಗಿರುವುದೇ ಸಂಭ್ರಮವನ್ನು ನಾನಂತೂ ಮಿಸ್ ಮಾಡಿಕೊಳ್ಳುವುದಿಲ್ಲ ಬಂದೇ ಬರುತ್ತೇನೆ’ ಎಂದು ನಿತ್ಯಶ್ರಿ ಒಪ್ಪಿಗೆ ಸೂಚಿಸಿದಳು. ಅಂದು ಶಾಲೆ ಬಿಡುತ್ತಿದ್ದಂತೆ ಅವಳನ್ನು ಕರೆದುಕೊಂಡು ಬರಲು ಶಾಲೆಗೆ ಬಂದಿದ್ದ ಅವರ ತಾಯಿಯ ಬಳಿ ಹೇಳಿ ಒಪ್ಪಿಗೆಯನ್ನು ಪಡೆದು ‘ಅಮ್ಮ ಒಪ್ಪಿದ್ದಾರೆ. ಇಂತಹ ಒಳ್ಳೆಯ, ಅಪರೂಪದ ಅವಕಾಶವನ್ನು ಬಿಡಬೇಡ ಎಂದ್ದಿದ್ದಾರೆ’ ಎಂದು ಹೇಳಿ ಅದೇನೋ ಗೆದ್ದ ಹಾಗೇ ಸಂಭ್ರಮಿಸಿದಳು.
ಕಾರ್ಯಕ್ರಮದ ದಿನ ಹತ್ತಿರ ಬರುತ್ತಿದ್ದಂತೆ ಒಂದಿಷ್ಟು ಮಕ್ಕಳು, ‘ಸರ್ ನವೀನ್ ನಾಗಪ್ಪಸರ್ ಜೊತೆಗೆ ಫೋಟೋ ತೆಗೆದುಕೊಳ್ಳಲು ಅವಕಾಶ ಸಿಗುತ್ತದಾ?’ ಎಂದು ಕೇಳುತ್ತಿದ್ದರು. ‘ನನಗೂ ಗೊತ್ತಿಲ್ಲ, ನಾನು ನಿಮ್ಮ ಹಾಗೆಯೇ ನನಗೂ ಆವಕಾಶ ಸಿಗುತ್ತದಾ? ಎಂದು ಕಾಯುತ್ತಿದ್ದೇನೆ’. ಎಂದೆನು. ‘ಹೇಗಾದರೂ ನೋಡಿ ಸರ್’ ಎಂದರು. ‘ಹೆಚ್ಚಿನ ಮಾಹಿತಿ ಮುಖ್ಯೋಪಾಧ್ಯಾಯರಿಂದ ಪಡೆಯಬಹುದು’ ಎಂದಾಗ ಕೆಲವರು ಹಿಂದೇಟು ಹಾಕಿದ್ದಾರೆ, ಕೆಲವರು ಧೈರ್ಯವಾಗಿ ಮುಖ್ಯೋಪಾಧ್ಯಾಯರ ಬಳಿಯಲ್ಲಿ ಕೇಳಿದ್ದಾರೆ. ‘ಸಮಯ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೂ ಪ್ರಯತ್ನ ಮಾಡಿನೋಡುವೆ’ ಎಂದಿದ್ದಾರೆ. ಕಾರ್ಯಕ್ರಮಕ್ಕೆ ಒಂದೆರಡು ದಿನ ಬಾಕಿ ಇದೆ ಎಂದಾಗ ಅಮರ್ ಜವಾನ್ ಬಳಿಗೆ ರೀತ್ ಅನ್ನು ಹೇಗೆ ತೆಗೆದುಕೊಂಡು ಹೋಗುವುದು, ಅದನ್ನು ಹಿಡಿದುಕೊಳ್ಳುವುದು ಹೇಗೆ? ಎಂಬೆಲ್ಲಾ ವಿಚಾರಗಳನ್ನು ಶಾಲೆ ಮುಗಿದ ನಂತರ ಎಲ್ಲಾ ಮಕ್ಕಳು ಮನೆಗೆ ಹೋದಾಗ ನವ್ಯ-ನಿತ್ಯ ಇಬ್ಬರೂ ಕೇಳುತ್ತಿದ್ದರು. ನಿಧಾನವಾಗಿ ಹೆಜ್ಜೆ ಹಾಕುತ್ತ ಹೇಗೆ ಬರಬೇಕು, ರೀತ್ ಅನ್ನು ಹೇಗೆ ಹಿಡಿಯುವುದು. ಅತಿಥಿಗಳಿಗೆ ಅದನ್ನು ನೀಡುವುದು, ಅವರು ಅಮರ್ ಜವಾನ್ ಗೆ ಅದನ್ನು ಅರ್ಪಿಸಿದಾಗ ಹಿಂದಕ್ಕೆ ಸರಿದು ನಿಲ್ಲುವುದು, ಎಲ್ಲರೂ ಸಲ್ಯೂಟ್ ಮಾಡುವುದು… ಇವೆಲ್ಲವನ್ನೂ ಹೇಳಿಕೊಡುತ್ತಿದ್ದಾಗ ನಿತ್ಯಶ್ರಿಯ ತಂಗಿ ವಿಜೇತ ಕುತೂಹಲದಿಂದ ಇವರನ್ನು ನೋಡುತ್ತಿದ್ದಳು. ‘ಇವರು ಲಂಚ್ ಬ್ಯಾಗ್ ನ ಹಾಗೇ ಇಡ್ಕೊಂದು ಏನು ಮಾಡ್ತಾ ಇದಾರೆ ಸರ್?’ ಎಂದು ಕೇಳಿದಳು. ಈ ಅಭ್ಯಾಸದ ಸಮಯದಲ್ಲಿ ರೀತ್ ನ ಜಾಗದಲ್ಲಿ ಇವರು ಲಂಚ್ ಬ್ಯಾಗ್ ಹಿಡಿದು ಅಭ್ಯಾಸ ಮಾಡುತ್ತಿದ್ದುದರಿಂದ ವಿಜೇತಳಿಗೆ ಏನೂ ಅರ್ಥವಾಗಿರಲಿಲ್ಲ. ‘ಲಂಚ್ ಬ್ಯಾಗ್ ತುಂಬಾ ಭಾರ ಆಗಿದೆಯಂತೆ ಹಾಗಾಗಿ ಇಬ್ಬರೂ ಸೇರಿ ಹಿಡ್ಕೊಂಡು ಬರ್ತಾ ಇದಾರೆ’ ಎಂದೆ. ‘ಸರ್ ಸ್ವಲ್ಪ ದೂರ ಹಾಗೇ ಇಡ್ಕೊಂಡು ಬರ್ತಾರೆ. ಮತ್ತೆ ಅದನ್ನು ಒಬ್ಬರೇ ಹಿಡ್ಕೊಂಡು ವಾಪಸ್ ಹೋಗಿ ಮತ್ತೇ ನಿಧಾನವಾಗಿ ಬರ್ತಾ ಇದಾರೆ. ಇವರು ಏನು ಮಾಡ್ತಾ ಇದಾರೆ ಅಂತ ಹೇಳಿ’ ಎಂದು ಕೇಳಿಕೊಂಡಳು. ಅವಳ ಮುಗ್ದತೆಗೆ ನಗು ಬಂತು. ‘ಇದನ್ನು ನಿಮ್ಮ ಅಕ್ಕನ ಬಳಿ ಕೇಳು ಅವಳು ನನಗಿಂತ ಚೆನ್ನಾಗಿ ಹೇಳುತ್ತಾಳೆ’ ಎಂದೆ. ಅಭ್ಯಾಸ ಮುಗಿಸಿ ಬಂದವಳನ್ನು ತಂಗಿ ವಿಚಾರಿಸತೊಡಗಿದಳು. ಅವಳು ಸ್ವಲ್ಪ ಗೋಳುಹೊಯ್ದುಕೊಂಡಳು. ತಾಯಿಯ ಜೊತೆಗೆ ಗಾಡಿಯಲ್ಲಿ ಹೊರಟಾಗ ತಂಗಿಯ ಪ್ರಶ್ನೆಗಳು, ಅಕ್ಕನ ಉತ್ತರಗಳು ಮುಂದುವರೆಯುತ್ತಿದ್ದವು.
ಮರುದಿನ ವಿಜೇತ, ‘ನನಗೆಲ್ಲ ಗೊತ್ತಾಯಿತು. ಅಕ್ಕ ಸತಾಯಿಸಿದಳು ಅಮ್ಮನ ಜೊತೆಗಿದ್ದಾಗ ಎಲ್ಲವನ್ನೂ ಹೇಳಿದಳು’ ಎಂದಾಗ ‘ಯಾರಿಗೂ ಹೇಳಬೇಡ ಆಯ್ತಾ?’ ಎಂದೆ. ‘ಸರ್ ಎಲ್ಲರಿಗೂ ಗೊತ್ತಿದೆ. ನನಗೇ ಗೊತ್ತಿರಲಿಲ್ಲ’ ಎಂದು ನಕ್ಕಳು. ಅಂದು ಕಡೆಯ ಅಭ್ಯಾಸ ಮೇಲಿನ ಹಾಲ್ ನಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಎಲ್ಲಾ ಮಕ್ಕಳು ತಮ್ಮ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿದ್ದರು. ಸಣ್ಣಪುಟ್ಟ ಬದಲಾವಣೆ ಇದ್ದಲ್ಲಿ ಉಳಿದವರು ಸೂಚಿಸುತ್ತಿದ್ದರು. ಎಲ್ಲರ ಅಭ್ಯಾಸ ಚೆನ್ನಾಗಿಯೇ ಆಗಿತ್ತು. ಮೊದಲು ಯಾವ ಕಾರ್ಯಕ್ರಮ, ನಂತರದಲ್ಲಿ ಯಾರು ಸಿದ್ಧರಾಗಿರಬೇಕು ಎಂಬುದನ್ನು ತಿಳಿಸಲಾಯಿತು. ನಿಗಧಿತ ಸಮಯಕ್ಕೆ ಮಕ್ಕಳು ಸಿದ್ಧರಾಗಿ ಬಂದಿರಲು ಸೂಚಿಸಲಾಯಿತು.
ಅಂದು ಶನಿವಾರ ಮಧ್ಯಾಹ್ನ ಎಲ್ಲರೂ ಕುವೆಂಪು ರಂಗಮಂದಿರದಲ್ಲಿ ತಯಾರಾಗಿ ಬಂದಿದ್ದಾರೆ, ಅಮರ್ ಜವಾನ್ ಸಿದ್ಧಪಡಿಸಿದ ಚಂದನ್ ರೀತ್ ಕೂಡ ತಾನೇ ತಯಾರಿಸಿದ. ಜೊತೆಗೆ ಅದನ್ನು ಹಿಡಿಕೊಳ್ಳುವುದು, ಅಲ್ಲಿಂದ ಬರುವುದು, ಇಲ್ಲಿಗೆ ಬಂದಾಗ ಏನು ಮಾಡಬೇಕಿದೆ ಎಂಬೆಲ್ಲ ವಿಷಯಗಳನ್ನು ನವ್ಯ-ನಿತ್ಯ ಇಬ್ಬರಿಗೂ ಹೇಳಿ, ಅಭ್ಯಾಸವನ್ನು ಮಾಡಿಸಿದನು. ‘ನೋಡಿ ರಂಗಮಂದಿರಕ್ಕೆ ಬರುತ್ತಿದ್ದಂತೆ ನೀವು ಸಿದ್ಧರಾಗಿರಬೇಕು. ಅವರು ಬಂದೊಡನೆ ನಿಮ್ಮ ಹಿಂದೆ ನಿಲ್ಲುತ್ತಾರೆ. ಇಬ್ಬರೂ ನಿಧಾನವಾಗಿ ಹೆಜ್ಜೆ ಹಾಕುತ್ತ ಮುಂದಕ್ಕೆ ಸಾಗಬೇಕು. ಇತರ ಗಣ್ಯರು ನಿಮ್ಮ ಹಿಂದೆಯೇ ಬರುತ್ತಾರೆ. ಅಮರ್ ಜವಾನ್ ಬಳಿ ಇಬ್ಬರೂ ತಿರುಗಿ ರೀತ್ ಅನ್ನು ಅವರು ಹಿಡಿದಾಗ ನೀವಿಬ್ಬರು ಒಂದೊಂದು ಹೆಜ್ಜೆ ಹಿಂದಕ್ಕೆ ಸರಿದು ನಿಲ್ಲಬೇಕು. ಅದಾಗ ನಂತರ ಎಲ್ಲರೂ ಸಲ್ಯೂಟ್ ಮಾಡುತ್ತಾರೆ. ನೀವು ಹಾಗೆಯೇ ಇರಬಹುದು’ ಎಂಬ ಮಾತುಗಳನ್ನು ಹೇಳಿದ್ದಾಯಿತು. ನಿಗಧಿತ ಸಮಯಕ್ಕೆ ಅತಿಥಿಗಳು ಹೊರಭಾಗದಿಂದ ಬರುವಾಗ ಮಕ್ಕಳ ಬ್ಯಾಂಡ್ ತಂಡದ ಶಬ್ಧ ಕೇಳುತ್ತಿದ್ದಂತೆ ಒಳಗಿದ್ದವರೆಲ್ಲ ಸಿದ್ಧರಾದರು. ಕ್ಯಾಪ್ಟನ್ ನವೀನ್ ನಾಗಪ್ಪ ಅವರು ರಂಗಮಂದಿರದ ಒಳಗೆ ಪ್ರವೇಶಿಸುತ್ತಿದ್ದಂತೆ ಸಂಭ್ರಮ ಹೆಚ್ಚಾಯಿತು. ಘೋಷಣೆಗಳು ಕೇಳಿಬರುತ್ತಿದ್ದವು. ವೇದಿಕೆಗೆ ಬಂದಾಗ ಎಲ್ಲರೂ ಎದ್ದು ನಿಂತರು. ದೇಶಕ್ಕಾಗಿ ಮಡಿದ ವೀರಯೋಧರೆಲ್ಲರನ್ನು ಪ್ರತಿನಿಧಿಸುವ ಅಮರ್ ಜವಾನ್ ಗೆ ರೀತ್ ಸಲ್ಲಿಸಿ ಗೌರವ ನೀಡೋಣ ಎಂದಾಗ ರೀತ್ ಹಿಡಿದು ಸಾಗಿ ಅದನ್ನು ಅತಿಥಿಗಳಿಗೆ ನೀಡಿ ಅವರು ಅಮರ್ ಜವಾನ್ ಗೆ ಸಲ್ಲಿಸಿ ಸಲ್ಯೂಟ್ ಮಾಡಿದರು. ಒಂದು ಕ್ಷಣ ಇಡೀ ರಂಗಮಂದಿರದ ತುಂಬಾ ಮೌನ ಆವರಿಸಿತ್ತು. ನಂತರ ದೀಪ ಬೆಳಗಿಸುವುದಿತ್ತು. ಎಲ್ಲಾ ಅತಿಥಿಗಣ್ಯರೊಡನೆ ಇದ್ದ ನಿತ್ಯ-ನವ್ಯಳನ್ನು ಮುಖ್ಯೋಪಾಧ್ಯಾಯರು ಕರೆದು ‘ನೀವು ಕೂಡದೀಪ ಬೆಳಗಿಸಿ’ ಎಂದಾಗ ಇವರ ಸಂತೋಷಕ್ಕೆ ಪಾರವೇ ಇಲ್ಲ. ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ದೀಪ ಬೆಳಗಿಸಲ ಈ ಮಕ್ಕಳಿಗೂ ಸೂಚಿಸಿದಾಗ ಇಬ್ಬರೂ ಖುಷಿಯಿಂದ ದೀಪಬೆಳಗಿಸಿದ್ದಾರೆ.
ನಂತರ ವೇದಿಕೆಯ ಮುಂಭಾಗದಲ್ಲಿ ಬಂದು ಕುಳಿತರು. ಮಕ್ಕಳಿಂದ ಕಾರ್ಯಕ್ರಮಗಳ ಆರಂಭ. ಮಧ್ಯದಲ್ಲಿ ನವೀನ್ ನಾಗಪ್ಪ ಅವರ ಮಾತುಗಳು. ಸುಮಾರು ಒಂದುಗಂಟೆಗೂ ಹೆಚ್ಚು ಸಮಯ ಮಾತನಾಡಿದರು. ಅವರ ಮಾತಿಗೆ ಪ್ರತಿಯೊಬ್ಬರ ಉದ್ಘಾರವು ರಂಗಮಂದಿರದ ಒಳಗೆಲ್ಲಾ ಕೇಳುತ್ತಿತ್ತು. ಅವರ ಮಾತಿಗೆ ಮಿಡಿದಿದ್ದಾರೆ, ಚಪ್ಪಾಳೆ ತಟ್ಟಿದ್ದಾರೆ, ಕಣ್ಣಂಚಲ್ಲಿ ನೀರನ್ನು ತುಂಬಿಕೊಂಡಿದ್ದಾರೆ. ಸೈನಿಕರ ಬಗೆಗೆ ಇದ್ದ ಗೌರವ, ಅಭಿಮಾನ ದುಪ್ಪಟ್ಟಾಗಿದೆ. ಅವರು ಮಾತು ಮುಗಿಸಿದಾಗ ಎಲ್ಲರಿಗೂ, ‘ಇನ್ನೂ ಒಂದಿಷ್ಟು ಸಮಯ ಮಾತನಾಡಬೇಕಿತ್ತು’ ಎಂದೆನಿಸಿದು ಮಾತ್ರ ಸುಳ್ಳಲ್ಲ.
‘ಅತಿಥಿಗಳ ಜೊತೆಗೆ ಫೋಟೋ ತೆಗೆಸಿಕೊಳ್ಳಲು ನನಗೇ ಅವಕಾಶ ಸಿಗಲಿಲ್ಲ. ನಿಮ್ಮದು ಅದೃಷ್ಟ ಅವರ ಜೊತೆಗೆ ಇದ್ದು, ದೀಪ ಬೆಳಗಿಸಿದ್ದೀರಿ’ ಎಂದಾಗ ಇಬ್ಬರೂ ‘ನಮ್ಮ ಜೀವನದಲ್ಲಿ ಇದೊಂದು ಮರೆಯದ ಸಮಯ’ ಎಂದಾಗ ಅವರ ಕಣ್ಣಲ್ಲಿ ಕಂಡದ್ದು ‘ದೇಶಕ್ಕಾಗಿ ಒಳ್ಳೆಯದನ್ನು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಕೆಡುಕನ್ನಂತೂ ಮಾಡಲು ಸಾಧ್ಯವೇ ಇಲ್ಲ’ ಎಂಬುದು. ಅವಕಾಶ ಸಿಕ್ಕಾಗ ಸರಿಯಾಗಿ ಬಳಸಿಕೊಂಡರೆ ಆ ಸಮಯ ಎಂದಿಗೂ ಮರೆಯಲಾಗ ಅಮೃತಘಳಿಗೆಯೇ ಸರಿ…