ಸಿನಿಮಾ ರೀತಿಯಲ್ಲಿ ಜೈಲಿನ ಒಳಗೆ ಮಾದಕ ವಸ್ತುಗಳು ಸಾಗಾಟ – ಮೂವರ ಬಂಧನ
( ಹಾಸನ – ಸೆ – 05 ) ಜಿಲ್ಲಾ ಉಪಕಾರಾಗೃಹದಲ್ಲಿದ್ದ ಕೈದಿಗಳ ಬಳಿ ಮಾದಕ ವಸ್ತುಗಳನ್ನು ಪತ್ತೆ ಮಾಡಿದ್ದ ಪೊಲೀಸರು, ಅವುಗಳನ್ನು ಜೈಲಿನ ಒಳಗೆ ಸಾಗಿಸಲೆತ್ನಿಸಿದ ಮೂವರನ್ನು ಬಂಧಿಸಿದ್ದಾರೆ.
ಸೇಬು ಮತ್ತು ಮೂಸಂಬಿ ಹಣ್ಣನ್ನು ಕೊರೆದು ಅದರ ಒಳಗೆ ಗಾಂಜಾ ಸೊಪ್ಪಿನ ಪ್ಯಾಕೆಟ್ಗಳನ್ನು ಇಟ್ಟು ಹೊರಭಾಗದಿಂದ ಸ್ಟಿಕ್ಕರ್ ಅಂಟಿಸಿದ್ದರು. ಬಳಿಕ ಆ ಹಣ್ಣುಗಳನ್ನು ಜೈಲಿನ ಕಾಂಪೌಂಡ್ ಒಳಗೆ ಎಸೆಯಲು ಸಂಚು ರೂಪಿಸಿದ್ದರು. ಇದರಂತೆ ಭಾನುವಾರ ಅಪರಾಹ್ನ ಗಾಂಜಾ ತುಂಬಿದ ಸೇಬು ಮತ್ತು ಮೂಸಂಬಿಗಳನ್ನು ಹಿಡಿದುಕೊಂಡು ಜೈಲಿನ ಹಿಂಭಾಗದಲ್ಲಿ ನಿಂತಿದ್ದರು. ಅಲ್ಲಿ ಆಚೀಚೆ ಸುಳಿದಾಡುತ್ತ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದರು.
ಬಂಧಿತರು ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೇಜ್ (28) ಪೆನ್ಶನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ (21) ಮತ್ತು ರಕೀಬ್ ಎಂದು ಗುರುತಿಸಲಾಗಿದೆ.
ಬಂಧಿತರು ಮಾದಕವಸ್ತುಗಳನ್ನು ಹಣ್ಣುಗಳಲ್ಲಿ ತುಂಬಿ ಜೈಲಿನ ಒಳಗೆ ಎಸೆದು ಕೈದಿಗಳಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನ ಸಮೀಪದ ಹಳೇ ಬಸವಣ್ಣ ವೃತ್ತದ ಬಳಿ ಈ ಮೂವರು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಇದು ಹಾಸನ ನಗರ ಪೊಲೀಸ್ ಠಾಣೆ ಪಿಎಸ್ಐ ರೇವಣ್ಣ ಮತ್ತು ಸಿಬ್ಬಂದಿಯ ಗಮನಸೆಳೆದಿತ್ತು. ಕೂಡಲೇ ಅವರಿದ್ದ ಕಡಗೆ ಹೋದಾಗ ಅಲ್ಲಿಂದ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಮೂರು ಸೇಬು, 2 ಮೂಸಂಬಿ ಹಣ್ಣು ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ ಒಳಗೆ ಮಾದಕ ವಸ್ತು ತುಂಬಿರುವುದು ಪತ್ತೆಯಾಗಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ, ಬಂಧಿತರು ಗಾಂಜಾ ತುಂಬಿದ ಹಣ್ಣುಗಳನ್ನು ಜೈಲಿನೊಳಗೆ ಇರುವ ಕೈದಿಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದುದನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಉಪಕಾರಾಗೃಹದ ಮೇಲೆ ಪೊಲೀಸರು 2 ಸಲ ದಾಳಿ ನಡೆಸಿ ಗಾಂಜಾ, ಮಾದಕವಸ್ತು, ಮಾರಕಾಸ್ತ್ರ, ಮೊಬೈಲ್ಗಳನ್ನು ವಶಪಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ಮೇಲಧಿಕಾರಿಗೂ ವರದಿ ನೀಡಿದ್ದರಿಂದ ಜೈಲಿನ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದಾದ ಬಳಿಕ ಜೈಲಿನ ಸುತ್ತಮುತ್ತ ಕಟ್ಟೆಚ್ಚರವಹಿಸಿದ್ದಾರೆ.
ಜೈಲಿನ ಕೈದಿಗಳಿಗೆ ಅವರ ಪರಿಚಯಸ್ಥರು ಜೈಲಿನ ಹಿಂಭಾಗದಲ್ಲಿರುವ ಸ್ಲಂನಿಂದ ಬೀಡಿ, ಸಿಗರೇಟ್, ಗಾಂಜಾ, ಗುಟ್ಕಾ ಸೇರಿ ಮಾದಕ ವಸ್ತುಗಳನ್ನು ಕಾಂಪೌಂಡ್ ಮೇಲಿಂದ ಎಸೆಯುತ್ತಿದ್ದರು. ಈ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಆರೋಪಿಗಳನ್ನು ಹಿಡಿಯಲು ಪೊಲೀಸರು ಮುಂದಾಗಿರಲಿಲ್ಲ ಎಂಬ ಆಕ್ಷೇಪಣೆ ಕೇಳಿಬಂದಿದೆ.