ನ್ಯೂಸ್ಮಲೆನಾಡು

ಪಶ್ಚಿಮ ಘಟ್ಟದ ನದಿ ಮೂಲಗಳಿಗೆ ಜಾಥಾ, ಸಮೀಕ್ಷೆ-ವೃಕ್ಷ ಲಕ್ಷ ಆಂದೋಲನದ ವಿನೂತನ ಕಾರ್ಯಕ್ರಮ. ಮೇ 21,22 ರಂದು

ಪಶ್ಚಿಮ ಘಟ್ಟದ ನದಿ ಮೂಲಗಳಿಗೆ ಜಾಥಾ, ಸಮೀಕ್ಷೆ-ವೃಕ್ಷ ಲಕ್ಷ ಆಂದೋಲನದ ವಿನೂತನ ಕಾರ್ಯಕ್ರಮ. ಮೇ 21,22 ರಂದು

(SHIVAMOGA): ಸೊರಬ :ವೃಕ್ಷ ಲಕ್ಷ ಆಂದೋಲನ, ಜೀವವೈವಿಧ್ಯ ಮಂಡಳಿ, ಪರಿಸರ ಜಾಗೃತಿ ಟ್ರಸ್ಟ್ ಹಾಗೂ ಜೀವವೈವಿಧ್ಯ ಸಮಿತಿಗಳ ಸಹಯೋಗದಲ್ಲಿ ಹಲವು ಜೀವವೈವಿಧ್ಯ ಸಂರಕ್ಷಣಾ ಕಾರ್ಯಗಳಿಗೆ ಚಾಲನೆ, ತಳಮಟ್ಟದ ಜಂಟಿ ಕಾರ್ಯಕ್ರಮಗಳು, ಜೀವವೈವಿಧ್ಯ ಜಾಗೃತಿ ಜಾಥಾ ಇದೇ 21, 22 ಮೇ 2024 ರಂದು  ಅಂತರಾಷ್ಟ್ರೀಯ ಜೀವ ವೈವಿಧ್ಯ ದಿನದ ಅಂಗವಾಗಿ ನಡೆಯಲಿದೆ.


ಜೀವ ವೈವಿಧ್ಯ ಮಂಡಳಿ, ಅರಣ್ಯ, ಕಂದಾಯ ಮುಂತಾದ ಇಲಾಖೆಗಳ ಅಧಿಕಾರಿಗಳು, ಪರಿಸರ ಕಾರ್ಯಕರ್ತರೊಂದಿಗೆ ರಚನಾತ್ಮಕ ಜೀವವೈವಿಧ್ಯ ಕಾರ್ಯಯೋಜನೆಗಳ ಕುರಿತು ಕಾರ್ಯಕ್ರಮವಿದ್ದು, ಮೇ 21 ರಂದು ಬೆಳಿಗ್ಗೆ 9 ಘಂಟೆಗೆ ಯಲ್ಲಾಪುರ ತಾಲೂಕ ಬೇಡ್ತಿ ನದೀ ಸೇತುವೆಯ ಬಳಿ
ಹುಲಿಯಪ್ಪ ದೇವರ ಸನ್ನಿದಿಯಲ್ಲಿ ಜಾಥಾ ಉಧ್ಘಾಟನೆ ಆಗಲಿದೆ.
ಅಂದೇ ಬೆಳಿಗ್ಗೆ 10.30 ಘಂಟೆಗೆ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷಿ ಜಯಂತಿ ನಿಮಿತ್ತ ಶ್ರೀ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ದೇವರಕಾಡು ಘೋಷಣೆ, ಬೆಟ್ಟ ವನೀಕರಣ ಯೋಜನೆ ಮತ್ತು ಸಸ್ಯ ಲೋಕ ಪುನಃಶ್ಚೇತನ ಯೋಜನೆಗಳಿಗೆ ಚಾಲನೆ, ಬಿ.ಎಂ.ಸಿ. ವರದಿ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಜೀವ ವೈವಿಧ್ಯ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ತಾಲೂಕ ಪಂಚಾಯತ, ಸೋಂದಾ ಜೀವ ವೈವಿಧ್ಯ ಸಮಿತಿಯವರು ಇರುತ್ತಾರೆ.

ನಂತರ 2 ಘಂಟೆಗೆ ವೃಕ್ಷಲಕ್ಷ ಜಾಥಾ ಸಹಸ್ರಲಿಂಗಕ್ಕೆ ಶಾಲ್ಮಲಾ ನದೀ ಪ್ರದೇಶಕ್ಕೆ ಭೇಟಿ ನೀಡಲಿದೆ. ಭೈರುಂಭೆ ಪಂಚಾಯತ ಜೀವವೈವಿಧ್ಯ ಸಮಿತಿಯವರು ಬರಲಿದ್ದಾರೆ. ಮಧ್ಯಾಹ್ನ ೩ ಘಂಟೆಗೆ ಶಿರಸಿ ಶಂಕರ ಹೊಂಡ, ಅಘನಾಶಿನಿ ನದೀ ಮೂಲಕ್ಕೆ ಭೇಟಿ ನೀಡುವ ಜೀವವೈವಿಧ್ಯ ಜಾಥಾ ಶಿರಸಿ ನಗರ ಸಭೆಯ ಜೀವವೈವಿಧ್ಯ ಸಮಿತಿ ಜೊತೆ ಸಂವಹನ ನಡೆಸಲಿದೆ.
ಮಧ್ಯಾಹ್ನ 4.30 ಘಂಟೆಗೆ ವೃಕ್ಷ ಜಾಥಾ ತಂಡ ಸಿದ್ದಾಪುರ ತಾಲೂಕ ಹಣಜೀಬೈಲ ನಾಟೀವೈದ್ಯ ಶ್ರೀ ಎಮ್.ಎನ್. ಹೆಗಡೆ ಅವರನ್ನು ಭೇಟಿ ಮಾಡಿ ಅಭಿನಂದಿಸಲಿದೆ. ಸಂಜೆ 5.30ಕ್ಕೆ ಸೊರಬ ಸಮೀಪ ದಂಡಾವತಿ ಸಂರಕ್ಷಣಾ ಅಭಿಯಾನದಲ್ಲಿ ಜಾಥಾ ಪಾಲ್ಗೊಳ್ಳಲಿದೆ. ಪರಿಸರ ಜಾಗೃತಿ ಟ್ರಸ್ಟ್ ಸದಸ್ಯರು ಇರುತ್ತಾರೆ. ವರದಾ ತೀರದ ಅಂದವಳ್ಳಿ ಅರಣ್ಯ ನಾಶ ಸ್ಥಳಕ್ಕೆ ಭೇಟಿ ನೀಡಲಿದೆ. ಗ್ರಾಮದ ಜನತೆ ಕಾನು ಅರಣ್ಯ ಸಂರಕ್ಷಣಾ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ.


ಮರುದಿನ 22-5-2024 ರಂದು ಬೆಳಿಗ್ಗೆ 8.30ಕ್ಕೆ ವರದಹಳ್ಳಿಯ ವರದಾಶ್ರಮದ ಪವಿತ್ರ ತೀರ್ಥಕ್ಕೆ ಭೇಟಿ ನೀಡಲಿದೆ. ದೇವರಕಾಡು ಹಾಗೂ ಗೋಶಾಲೆ, ಮಂಕಳಲೆ ಗ್ರಾಮದ ಹಸಿರು ಬೆಟ್ಟ ಪ್ರದೇಶಕ್ಕೆ ಜೀವ ವೈವಿಧ್ಯ ಕಾರ್ಯಕರ್ತರ ತಂಡ ಭೇಟಿ ನೀಡಿ ಗ್ರಾಮ ಜನರು ಹಾಗೂ ಜೀವ ವೈವಿಧ್ಯ ಸಮಿತಿ ಜೊತೆ ಬೆಟ್ಟ ರಕ್ಷಣೆಗೆ ಜೊತೆಗೂಡಲಿದೆ. 10 ಘಂಟೆಗೆ ಶ್ರೀ ನಾಗೇದ್ರ ಸಾಗರ ಅವರ ಜೇನು ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಲಿದೆ. ವರದಾ ಮೂಲದಲ್ಲಿ ದೇವರಕಾಡು ಸಂರಕ್ಷಣಾ ಪುನರ್ ಸಂಕಲ್ಪ ಮಾಡಲಿದೆ.

ಅಲ್ಲಿ ಹೆಗ್ಗೋಡು ಪಂಚಾಯತ ಜೀವವೈವಿಧ್ಯ ಸಮಿತಿಯವರ ಭೇಟಿ ಆಗಲಿದೆ. 12 ಗಂಟೆಗೆ ಹೊಸನಗರ ತಾಲೂಕಿನ ಅಮ್ಮನಘಟ್ಟಕ್ಕೆ ಭೇಟಿ ನೀಡುವ ವೃಕ್ಷ ಜಾಥಾ ಪಂಚನದಿಗಳ ಉಗಮಸ್ಥಳ ಜೀವ ವೈವಿಧ್ಯ ತಾಣದ ಸಂರಕ್ಷಣಾ ತಂತ್ರ ರೂಪಿಸಲು ವೃಕ್ಷ ವೇದಿಕೆ, ಅರಣ್ಯ ಸಮಿತಿ,
ಬಿ.ಎಂ.ಸಿ. ಜೊತೆ ಬೆಟ್ಟದ ಬುಡದಲ್ಲಿ ಸಮಾಲೋಚಿಸಲಿದೆ. ಮಧ್ಯಾಹ್ನ 1 ಘಂಟೆಗೆ ಹುಂಚ ಪಂಚಾಯತ ಜೀವವೈವಿಧ್ಯ ಸಮಿತಿ, ಭೂಮಿ ಸಂರಕ್ಷಣಾ ಸಮಿತಿ ಜೊತೆ, ವಿ.ಎಫ್.ಸಿ. ಜೊತೆ ಕುಮಧ್ವತಿ ನದೀ ಮೂಲಕ್ಕೆ ಭೇಟಿ ನೀಡಲಿದೆ. 2.45 ಘಂಟೆಗೆ ಶರಾವತಿ ನದೀ ಮೂಲದಲ್ಲಿ ಸ್ಥಳೀಯರ ಜೊತೆ ಜೀವವೈವಿಧ್ಯ ಪವಿತ್ರ ವನ ನಿರ‍್ಮಾಣದ ನಿರ್ಧಾರ ಮಾಡಲಿದೆ.
ಸಂಜೆ 4-30 ಕ್ಕೆ ಜಾಥಾದವರು ತೀರ್ಥಹಳ್ಳಿ ತಾಲೂಕ ಪಂಚಾಯತದಲ್ಲಿ ನದೀ ಅರಣ್ಯ,ಕಾನು ಅರಣ್ಯಗಳ ಕುರಿತು ಜಂಟಿ ಸಮಾಲೋಚನಾ ಸಭೆ ನಡೆಸಲಿದೆ. ಜಾಥಾ ಸಮಾರೋಪ ತುಂಗಾನದೀ ತೀರದಲ್ಲಿ ಪುರುಷೋತ್ತಮರಾವ್ ಕೃಷಿ ನಿವಾಸದಲ್ಲಿ ಸಂಜೆ 6 ಘಂಟೆಗೆ ನಡೆಯಲಿದೆ.
ಬೇಡ್ತಿ ನದೀ ತೀರದಿಂದ ಆರಂಭವಾಗುವ ವೃಕ್ಷಲಕ್ಷ ಜೀವವೈವಿಧ್ಯ ಜಾಥಾ ಶಾಲ್ಮಲಾ ಅಘನಾಶಿನಿ, ವರದಾ, ಶರಾವತಿ, ಕುಮದ್ವತಿ, ದಂಡಾವತಿ, ತುಂಗಾ ನದೀ ಮೂಲಗಳಿಗೆ, ಕಣಿವೆಗಳಿಗೆ ಭೇಟಿ ನೀಡಲಿದೆ ಎಂದು ಜೀವವೈವಿಧ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ: ಮಧು ರಾಮ್

Leave a Reply

Your email address will not be published. Required fields are marked *

Scan the code