ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ.
((KOLARA): ಬಂಗಾರಪೇಟೆ :ಬದಲಾದ ರಾಜಕೀಯ ಬೆಳವಣಿಗೆಯ ದೃವೀಕರಣದಿಂದ ಜೆಡಿಎಸ್ ಪಕ್ಷ ಎನ್.ಡಿ.ಎ. ಮೈತ್ರಿಕೂಟವನ್ನು ಬೆಂಬಲಿಸಲಾಗಿದ್ದು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಸಹಕಾರ ಸಹಭಾಗಿತ್ವದೊಂದಿಗೆ ಎನ್ ಡಿ ಎ ಅಭ್ಯರ್ಥಿಯನ್ನು ಜಯಗೊಳಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಜೆಡಿಎಸ್ ಚುನಾಯಿತ ಪ್ರತಿನಿಧಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ , ಪ್ರಧಾನಿ ಮೋದಿಯವರು ವಿಶ್ವದ ಸರ್ವ ಶ್ರೇಷ್ಠ ನಾಯಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಅವರು ಕೊಟ್ಟಂತ ಜನಪರ ಅಭಿವೃದ್ಧಿ ಯೋಜನೆಗಳು ದೇಶದಲ್ಲಿ ಮನೆ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಎನ್ ಡಿ ಎ ಮೈತ್ರಿ ಕೂಟವನ್ನು ಬೆಂಬಲಿಸಲು ನಿರ್ಧರಿಸಿದರು, ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಮೈತ್ರಿ ಧರ್ಮ ಮರೆತ ಕಾಂಗ್ರೆಸ್ ಮಾನಸಿಕ ಹಿಂಸೆ:
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗಿದ್ದು ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು, ಆದರೆ ಕಾಂಗ್ರೆಸ್ ತನ್ನ ಮೈತ್ರಿ ಧರ್ಮವನ್ನು ಮರೆತು ಕುಮಾರಸ್ವಾಮಿರವರಿಗೆ ನಿರಂತರವಾಗಿ ಮಾನಸಿಕ ಚಿತ್ರಹಿಂಸೆ ನೀಡಿದರು, 2019ರ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಚುನಾವಣೆ ಎದುರಿಸುವ ಭರವಸೆ ನೀಡಿ ತನ್ನ ಕುತಂತ್ರ ಬುದ್ಧಿಯಿಂದ ಕಾಂಗ್ರೆಸ್ ಪಕ್ಷ ಮೈತ್ರಿಯನ್ನು ಮೂಲೆಗುಂಪು ಮಾಡಿ ತುಮಕೂರು ಜಿಲ್ಲೆಯಲ್ಲಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದರು,
ಗ್ಯಾರೆಂಟಿ ಯೋಜನೆಗಳ ಅಮಲಿನಲ್ಲಿ ಅಭಿವೃದ್ಧಿ ಮರೆತ ಸರ್ಕಾರ:
ರಾಜ್ಯ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಯೋಚನೆಗಳ ಅನುಷ್ಠಾನಕ್ಕಾಗಿ ಜನತೆಯ ತೆರಿಗೆ ಹಣವನ್ನು ಬಳಕೆ ಮಾಡಿಕೊಂಡಿದ್ದು ಖಜಾನೆ ಖಾಲಿಯಾಗಿದೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ರಾಜ್ಯಾದ್ಯಂತ ವಿಶ್ಲೇಷಣೆ ಮಾಡುವುದಾದರೆ ಇದುವರೆಗೂ 692 ಜನ ರೈತರು ತೀವ್ರ ಬರಗಾಲದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರ ಸಾವಿನ ಬಗ್ಗೆ ತಿಂಚಿತ್ತು ಗಮನಕೊಡದ ರಾಜ್ಯ ಸರ್ಕಾರ ಮೌನ ವಹಿಸಿದೆ ಎಂದರು.
ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ಕಣ್ಮರೆ:
ರಾಜ್ಯದ ಜನರ ದಿಕ್ಕು ತಪ್ಪಿಸಲು ತಾತ್ಕಾಲಿಕವಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆಯೇ ಹೊರತು ಲೋಕಸಭಾ ಚುನಾವಣೆಯ ನಂತರ ಎಲ್ಲಾ ಗ್ಯಾರೆಂಟಿ ಯೋಜನೆಗಳು ಕಣ್ಮರೆಯಾಗಲಿವೆ, ಈಗಾಗಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಅಸಮಾಧಾನ ಹೊರ ಹಾಕುತ್ತಿರುವ ಪ್ರಸಂಗ ಕಾಣಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ತ್ಯಜಿಸಿ ಒಗ್ಗಟ್ಟಿನಿಂದ ಮುನ್ನುಗ್ಗಬೇಕು:
ಕಳೆದ ವಿಧಾನಸಭಾ ಚುನಾವಣೆಯ ಕೋಲಾರ ಜಿಲ್ಲೆಯ ರಾಜಕಾರಣವನ್ನು ಅವಲೋಕಿಸಿ ನೋಡಿದಾಗ ಜೆಡಿಎಸ್ ಪಕ್ಷ 4 ಲಕ್ಷ 85, ಸಾವಿರ ಮತಗಳನ್ನು ಪಡೆದುಕೊಂಡಿದೆ, ಬಿಜೆಪಿ 2 ಲಕ್ಷ ಮತಗಳನ್ನು ಪಡೆದುಕೊಂಡಿದೆ, ಈ ಹಿನ್ನಲೆಯಲ್ಲಿ ವರಿಷ್ಠ ನಾಯಕರು ಕೋಲಾರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡುವ ಸಾಧ್ಯತೆ ಇದೆ, ಆದಕಾರಣ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಆರೋಗ್ಯಕರವಾದ ಚುನಾವಣೆಯನ್ನು ಎದುರಿಸಬೇಕು, ಆ ಮೂಲಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಜಯಗಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಂಟಿ ಸಮಾವೇಶಕ್ಕೆ ವೇದಿಕೆ ಸನ್ನದ್ಧ:
ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಿದ್ದೇವೆ ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠ ನಾಯಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ರಾಜ್ಯದ್ಯಂತ ಎನ್.ಡಿ.ಎ. ಮೈತ್ರಿಕೂಟವನ್ನು ಬಲಪಡಿಸಲು ಸಮಾವೇಶಗಳನ್ನುವ ಹಮ್ಮಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ಮುಖಂಡರಾದ ಮಾಲೂರಿನ ಜಿ ರಾಮೇಗೌಡ, ಸಿ.ಎಂ.ಆರ್ .ಶ್ರೀನಾಥ್, ಮಂಗಮ್ಮ ಮುನಿಸ್ವಾಮಿ, ತಾಲೂಕು ಅಧ್ಯಕ್ಷ ಎಂ ಮುನಿರಾಜು, ವಡಗೂರು ರಾಮು, ಮರ್ಗಲ್ ಮುನಿಯಪ್ಪ, ಜೆಸಿಪಿ ನಾರಾಯಣಪ್ಪ, ನೆರಳ ಕೆರೆ ಶ್ರೀನಿವಾಸ್ ಗೌಡ ಆಕಾಶ್ ಗೌಡ, ಚಾಂದ್ ಪಾಷಾ, ನಾಗರಾಜು, ಪುರಸಭಾ ಮಾಜಿ ಸದಸ್ಯ ಶಿವಕುಮಾರ್, ಜೀತು, ಇದ್ದರು.
ವರದಿ: ವಿಷ್ಣು ಕೋಲಾರ