ದೇಶಮನರಂಜನೆ

“ಕಲ್ಯಾಣದ ಬಾಗಿಲು” … ಮುಂದೆ..

“ಕಲ್ಯಾಣದ ಬಾಗಿಲು” … ಮುಂದೆ..


ಶಿಷ್ಯರೊಡನೆ ಝೆನ್ ಗುರು ಮತ್ತು ಶಿಷ್ಯರು ನಡೆದು ಹೋಗುತ್ತಿದ್ದರು ದಾರಿಯ ಪಕ್ಕದಲ್ಲಿ ಒಬ್ಬ ಬುದ್ಧ ಭಿಕ್ಕು ಬುದ್ಧನನ್ನು ಆರಾಧಿಸುತ್ತಿದ್ದನಂತೆ. ಅದನ್ನು ಕಂಡ ಶಿಷ್ಯರು ನಿಂತರು.
ಗುರು: (ತಕ್ಷಣ )” ಇಲ್ಲಿ ಮಾತ್ರ ಬುದ್ಧನಿದ್ದಾನೆ, ಅಲ್ಲಿ ಇಲ್ಲ ಎನ್ನುವುದೆಲ್ಲ ಸುಳ್ಳು, ಸುಮ್ಮನೆ ಮುಂದೆ ನಡೆಯಿರಿ” ಶಿಷ್ಯನೊಬ್ಬ: ” ಬುದ್ಧನನ್ನು ಆರಾಧಿಸುವುದರಲ್ಲಿ ಒಳ್ಳೆಯದೇನು ಇಲ್ಲವೆ?”
ಗುರು: ” ಏನೂ ಇಲ್ಲದಿರುವುದು ಒಳ್ಳೆಯದಕ್ಕಿಂತ ಒಳ್ಳೆಯದು ಮುಂದಕ್ಕೆ ನಡೆಯಿರಿ”
” ಮನಸ್ಸಿನಲ್ಲಿ ಯಾವ ಯೋಚನೆಯೂ ಇಲ್ಲದಿರುವುದು ಸರಿಯಲ್ಲವೆ?”
“ನಿನ್ನ ಆ ಯೋಚನೆಯನ್ನು ಆಚೆ ಒಗೆದುಬಿಡು.”
ಶಿಷ್ಯ: “ಏನೂ ಇಲ್ಲದಿರುವಾಗ ಏನನ್ನು ಒಗೆಯಬೇಕು?,” ಗುರು: “ಅಯ್ಯೋ ಮೂರ್ಖ ಆ ಏನೂ ಇಲ್ಲದಿರುವ ಯೋಚನೆಯನ್ನು ಯಾತಕ್ಕೆ ಹೊತ್ತುಕೊಂಡು ಓಡಾಡುತ್ತಿದ್ದೀಯಾ?”
ಏನೂ ಇಲ್ಲದಿರುವುದರ ತೂಕ ಜಾಸ್ತಿ, ಸರಹನ ಮಾತಿನಂತೆ,

” ಸಿದ್ಧನಾಗಿಲ್ಲದಿರಲು ಸಿದ್ಧನಾಗಿರು,
ಅಭದ್ರತೆಯಲ್ಲಿ ಭದ್ರವಾಗಿರು.
ನಿನ್ನ ಮನಸನ್ನು ಅಲಂಕರಿಸಬೇಡ.
ಏನನ್ನೂ ಹೊತ್ತು ತರಬೇಡ, ನಿನ್ನನ್ನಂತೂ ಬೇಡವೇ ಬೇಡ.
ಎಲ್ಲ ಕೆಳಗಿಟ್ಟು ನೀನಿರುವಂತೆ ಬಾ.”
• ಸರಹಪಾದ


“ಮಣಿಯನೆಣಿಸಿ ದಿನವ ಕಳೆಯಲುಬೇಡ,
ಕಣಿಯ ಪೂಜಿಸಿ ದಿನವ ಕಳೆಯಲುಬೇಡ,
ಕ್ಷಣವಾದಡೆಯೂ ಆಗಲಿ ನಿಜವ ನೆನಹೇ ಸಾಕು,
ಕ್ಷಣಾರ್ಧವಾದಡೆಯೂ ಆಗಲಿ ನಿಜವ ನೆನಹೇ ಸಾಕು,
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ ಗೊಗೇಶ್ವರ?
• ಅಲ್ಲಮ

ಬದುಕಿನಲ್ಲಿ ಮತ್ತು ಕಾವ್ಯ- ಕಲೆಗಳಲ್ಲಿ ಸ್ಥಗಿತ ಮೌಲ್ಯ ಗಳನ್ನು ನಿರಾಕರಿಸಿ ಚಲನಶೀಲರಾಗಲು ಅಗತ್ಯವಾದ ಮೀಮಾಂಸೆಯನ್ನು ಭಾರತೀಯ ಶ್ರಮಣಧಾರೆಗಳು ಒದಗಿಸಿಕೊಟ್ಟಿವೆ.
ಇಂದ್ರಿಯಾತೀತ ಅನುಭವಗಳನ್ನು ಕಲೆ ಒಳಗೊಳ್ಳುವುದಾದರೆ ಅವುಗಳು ಕೂಡ ಇಂದ್ರಿಯಗಳ ಮೂಲಕವೇ ನಮಗೆ ದೊರಕಬೇಕು. ನಮಗೆ ದಕ್ಕಿದ ಅನುಭವಗಳು ಶುದ್ದವೋ ಎಂದು ತೀರ್ಮಾನಿಸುವುದು ಹೇಗೆ? ಯಾವ ಮೂಲ ಆಕರದಿಂದ ಈ ಲೋಕ ಉಂಟಾಗಿದೆಯೋ ಆ ಮೂಲ ಆಕರದೊಂದಿಗೆ ಐಕ್ಯವನ್ನು ಸಾಧಿಸಿದರೆ, ಅದು ಶುದ್ಧ ಅನುಭವ ಎನ್ನುವುದು ‘ ಭಾರತೀಯ ‘. (ಸಂಸ್ಕೃತ )ಕಾವ್ಯ ಮೀಮಾಂಸೆಯ ಪ್ರಧಾನ ನಿಲುವು. ಈ ಲೋಕ ಸಮಸ್ತಕ್ಕೂ ಪ್ರಾರಂಭವೊಂದಿದೆ, ಅದೆಲ್ಲವೂ ಒಂದರಿಂದಲೇ ಉಂಟಾಗಿದೆ, ಅದೇ ಅದರ ನಡೆಯನ್ನು ನಿಯಂತ್ರಿಸುತ್ತಿದೆ ಮತ್ತು ಎಲ್ಲವೂ ಅದರಲ್ಲೇ ಲೀನವಾಗುತ್ತದೆ, ಎಂದು ಪ್ರತಿಪಾದಿಸುತ್ತದೆ. ಇದು ಕೇವಲ ಕಲೆ ಕಾವ್ಯಗಳ ಅಭಿವ್ಯಕ್ತಿಯನ್ನು ಮಾತ್ರ ವ್ಯಾಖ್ಯಾನಿಸದೆ, ಜಿವನಕ್ರಮವನ್ನೂ ನಿಯಂತ್ರಿಸುತ್ತದೆ. ಹಾಗಾಗಿ ನಮ್ಮ ಬದುಕು ಮತ್ತು ಅಭಿವ್ಯಕ್ತಿ ಒಂದೇ ಆಕರದಿಂದ ನಿರ್ದೇಶಿತ ವಾಗಿರುತ್ತದೆ. ಇಲ್ಲಿ ಒಬ್ಬ ಕಲಾವಿದನಾಗಲೀ, ಕವಿಯಾಗಲೀ, ಅನುಭಾವಿ ಸಾಧಕನಾಗಲೀ ತೆಗೆದು ಕೊಳ್ಳುವ ನಿಲುವು ಬಹಳ ಮುಖ್ಯವಾಗುತ್ತದೆ. ಕವಿ, ಕಲಾವಿದನೊಬ್ಬ ತನ್ನ ಸೃಜನಶೀಲ ಕಲೆ, ಕಾವ್ಯದ ಮೂಲಕ ಮಾಡಬಯಸುವ ಸಾಂಸ್ಕೃತಿಕ ರಾಜಕಾರಣವನ್ನು ಇದು ತೀರ್ಮಾನಿಸುತ್ತದೆ. ದರ್ಶನವೊಂದಕ್ಕೆ ನಿಜವಾದ ಸವಾಲು ಲೋಕಸಂದರ್ಭವೊಂದನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ದೊರಕಿಸಿಕೊಡುವುದು.
ಪಾಶ್ಚಾತ್ಯ ಮತ್ತು ಭಾರತೀಯ ಮೀಮಾಂಸೆಗಳೆರಡನ್ನೂ ಇಂದಿಗೂ ನಿಯಂತ್ರಿಸುತ್ತಿರುವ ಸಂಗತಿಗಳೆಂದರೆ
‘ಆದಿ ಕಾರಣ’ ಮತ್ತು ‘ಶಾಶ್ವತ ಪರಿಣಾಮ’ ದ ಬಗೆಗಿನ ನಂಬಿಕೆಗಳು. ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ಪ್ಲೇಟೋ – ಅರಿಸ್ಟಾಟಲ್ ಪ್ರಣೀತ ದೈವಮೂಲವಾದ ಮತ್ತು’ ಇರುವಿಕೆ ‘ ಯ ನಿಲುವು ನಿಯಂತ್ರಿಸುತ್ತದೆ. ಹಾಗೆಯೇ ಭಾರತೀಯ ಕಾವ್ಯ ಮೀಮಾಂಸೆಯಯನ್ನು ವೇದೋಪನಿಷತ್ತುಗಳು ಮತ್ತು ಕಾಶ್ಮೀರ ಶೈವದ ಪ್ರತ್ಯಭಿಜ್ಞಾತತ್ವಗಳು ಮತ್ತದೇ ದೈವಮೂಲವಾದ ಮತ್ತು ಇರುವಿಕೆಯ ನಿಲುವಿನ ಮೂಲಕ ನಿಯಂತ್ರಿಸುತ್ತವೆ.

ಈ ಲೋಕವು ಈಗಾಗಲೇ ಸಿದ್ಧಗೊಂಡು ಇದೆ- ಎಂಬ “ಇರುವಿಕೆ” ಯ ನಿಲುವನ್ನು ಹೊಂದಿರುವ ಮೀಮಾಂಸಾ ಪ್ರಸ್ಥಾನಗಳೂ ಒಂದು ಪಕ್ಷವಾದರೆ, ಈ ಲೋಕವು ಆಗುತ್ತಲೇ ಇರುವ ಪ್ರಕ್ರಿಯೆ ಮಾತ್ರ ಇಲ್ಲಿ ಆಗಿ ಇರುವುದು ಯಾವುದೂ ಇಲ್ಲ – ಎಂಬ ನಿಲುವನ್ನು ಹೊಂದಿರುವ ಇನ್ನೊಂದು ಗುಂಪು ಭಾರತೀಯ ಶ್ರಮಣಧಾರೆಗಳು ಲೋಕವನ್ನು ಆಗುವಿಕೆ ಎಂದು ವಿವರಿಸುತ್ತದೆ.
ಪಾಶ್ಚಾತ್ಯರಲ್ಲಿ ಪ್ಲೇಟೋ ಅರಿಸ್ಟಾಟಲ್ ಅವರಿಗಿಂತಲೂ ಮೊದಲೇ ಬಂದ ಹೆರಾಕ್ಲೀಟಸ್ ಲೋಕವನ್ನು ” ಆಗುವಿಕೆ ” ಎಂದು ವಿವರಿಸಿದನು. ನಂತರ ಬಂದ ಪ್ಲೇಟೋ ಅರಿಸ್ಟಾಟಲ್ ಮುಂತಾದವರ ಚಿಂತನೆಗಳು ಹೆರಾಕ್ಲೀಟಸ್ ನ ಆಗುವಿಕೆಯ ನಿಲುವನ್ನಾಧರಿಸಿದ ಪ್ರಕ್ರಿಯಾ ಮೀಮಾಂಸೆಯನ್ನು ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾದವು. ಹೆರಾಕ್ಲೀಟಸ್ ಲೋಕವನ್ನು “ಆಗುವಿಕೆ” ಎಂದು ವಿವರಿಸಿದರೆ, ಪ್ಲೇಟೋ- ಅರಿಸ್ಟಾಟಲ್ ಲೋಕವನ್ನು “ಇರುವಿಕೆ” ಎಂದು ವಿವರಿಸಿದರು; ಈ ಲೋಕವನ್ನು ಭ್ರಮೆಯೆಂದು ಕರೆದು ಮೊತ್ತೊಂದು ಆದರ್ಶನಿಜದಕಲ್ಪನೆಯನ್ನು ಮುಂದಿಟ್ಟರು.
ಆಗುವಿಕೆಯ ನಿಲುವನ್ನು ಮುಂದಿಟ್ಟ ಬೌದ್ಧ ಮುಂತಾದ ಭಾರತೀಯ ಶ್ರಮಣಧಾರೆಗಳ ಮೀಮಾಂಸೆಯನ್ನು ಇಲ್ಲಿಂದ ಆಚೆಗಟ್ಟುವ, ಅಟ್ಟುತ್ತಲೇ ಇರುವ ಸಾಂಸ್ಕೃತಿಕ ರಾಜಕಾರಣದಿಂದಾಗಿ ಅವುಗಳನ್ನು ಜನರ ಮುಂದಿಡುವ ಪ್ರಯತ್ನಗಳು ನಡೆಯಬೇಕು.

“ಕೊನೆ ಮೊದಲಿಲ್ಲದುದಕ್ಕೆ ಮಧ್ಯವೆಂಬುದು
ಹೇಗಿರಲು ಸಾಧ್ಯ? ಆದುದರಿಂದ
ಕೊನೆ, ಮೊದಲು ಅಥವಾ ಮಧ್ಯ
ಎಂದು ಗುರುತಿಸುವ ಕ್ರಮ ಸಲ್ಲ.”
• ನಾಗಾರ್ಜುನ.. (ಮೂ.ಮ.ಕಾರಿಕಾ.)

“ಆದಿಯ ಸಂಗದಿಂದಾದವನಲ್ಲ
ಸಂಗ ಸುಖದೊಳಗಿದ್ದವನಲ್ಲ
ಇಬ್ಬರ ಸಂಗದಿಂದಾದವನಲ್ಲ
ರವಿಶಶಿಯ ಬೆಳಗಿನಿಂದ ಬೆಳೆದವನಲ್ಲ
ನಾದ ಬಿಂದು ಕಳೆ ಹುಟ್ಟುದ ಮುನ್ನ ಅಲ್ಲಿಂದತ್ತತ್ತ ಗುಹೇಶ್ವರ
. . • ಅಲ್ಲಮ

ಕಲಾವಿದನೊಬ್ಬ ತಾನೇ ಸಂಕೇತಗಳನ್ನು ನಿರಸನಗೊಳಿಸುತ್ತ ಸಾಗುವ ಕಲಾವಿದರು ತುಂಬಾ ಕಡಿಮೆ.ನಮ್ಮ ಸುತ್ತಲಿನ ಅನೇಕ ಕಲಾವಿದರಿಗೆ ಇದೊಂದು ಸಮಸ್ಯೆಯಾಗಿದೆ. ತಾವೇ ಸೃಷ್ಟಿಸಿದ ಮುದ್ರೆ ನಂತರ ಬೃಹತ್ತಾಗಿ ಬೆಳೆದು ತಾವೇ ಅದರಲ್ಲಿ ಬಂಧಿಯಾಗಿ ಹೊರಬರಾಲಾರದೆ “.. ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೆ ಮನೆಯ ಮಾಡಿ ಸುತ್ತಿ ಸುತ್ತಿ ಸಾವಂತೆ… ಬರಬರುತ್ತಾ ಆ ಮುದ್ರೆ ಮಾತ್ರ ಉಳಿದು ಕಲಾವಿದನೇ ನಾಪತ್ತೆಯಾಗುತ್ತಾನೆ.

ಹೆಜ್ಜೆ ಗುರುತನ್ನು ಉಳಿಸದ ನಡೆ
ಲೋಪಗಳನ್ನು ಉಳಿಸದ ನುಡಿ
ಕೇವಲ ಮಣಿಗಳನ್ನು ಎಣಿಸದ ಎಣಿಕೆ
ಬೀಗ ಹಾಕದ ಭದ್ರತೆ
ಗಂಟುಗಳಿಲ್ಲದ ಬಿಗಿ ಕಟ್ಟು
ಇವುಗಳಂತೆ ಗುರುವಿನ ನಡೆ
ತನಗೆನ್ನದೆ ಎಲ್ಲರಿಗೆ ಕೊಟ್ಟದು ತನ್ನದು
ಹಚ್ಚಿಟ್ಟ ದೀಪದಂತೆ
ಅರಿತವರು ನೀಡುವ ಅರಿವು
ಅರಿಯದವರು ಪಡೆದ ಅರಿವು
ಗುರುವೆಂಬ ಭಾರವಿಲ್ಲ
ಶಿಷ್ಯರೆಂಬ ಮಮಕಾರವಿಲ್ಲ
ವಿವೇಕಿಗಳಿಗೆ ಮಾತ್ರ ಗುಹ್ಯಾತಿಗುಹ್ಯವು ಪರಿಪೂರ್ಣ ಜ್ಞಾನ
ಇದನ್ನೆ ದಾವ್ ನ ದರ್ಶನ ಎನ್ನುವುದು.
• ಲವ್ ತ್ಸು
( ಆಕರ: ಎಸ್. ಎನ್. ಬೂದಾಳು)

ತಂಡ:- ಶಿವ ಸಂಚಾರ (ಸಾಣೇಹಳ್ಳಿ)
ನಾಟಕ:- ಕಲ್ಯಾಣದ ಬಾಗಿಲು
ರಚನೆ :- ಡಾ. ಎಸ್.ನಟರಾಜ್ ಬೂದಾಳು
ರಂಗ ವಿನ್ಯಾಸ:- ಮನುಚಕ್ರವರ್ತಿ. ಕೆ. ಎನ್
ಸಹ ನಿರ್ದೇಶನ :- ದಿಲೀಪ್ ಕುಮಾರ್. ಆರ್
ಪರಿಕಲ್ಪನೆ / ಸಂಗೀತ / ನಿರ್ದೇಶನ :-
ಸಿ. ಬಸವಲಿಂಗಯ್ಯ

ಇದೇ ನವೆಂಬರ್ ನಿಂದ ಪ್ರದರ್ಶನಗಳು ನಿರೀಕ್ಷಿಸಿ…………..

Leave a Reply

Your email address will not be published. Required fields are marked *

Scan the code