ಕನ್ನಡ ಸಂಘದ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ
(KOLARA): ಬಂಗಾರಪೇಟೆ: ತಾಲೂಕಿನಲ್ಲಿ 40 ವರ್ಷಗಳಿಂದ ಇತಿಹಾಸವಿರುವ ಕನ್ನಡ ಸಂಘ ಬಂಗಾರಪೇಟೆಯಲ್ಲಿ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಕನ್ನಡಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೆವು, ಆದರೆ ಹಲವು ವರ್ಷಗಳಿಂದ ಕನ್ನಡ ಭವನವನ್ನು ಅಧ್ಯಕ್ಷರು ಕಟ್ಟುತ್ತೇವೆ ಕಟ್ಟುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.ಹೊರತು ಇಲ್ಲಿಯವರೆಗೂ ಭವನ ನಿರ್ಮಾಣವಾಗಿಲ್ಲ,ನಮ್ಮ ಶಾಸಕರಾದ ಎಸ್ಎನ್ ನಾರಾಯಣಸ್ವಾಮಿ ನೇತೃತ್ವದಲ್ಲಿ ನೂತನ ಕಟ್ಟಡ ಕಟ್ಟಲು, ಹಳೆ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ ಎಂದು ಕನ್ನಡ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ರಂಗ ರಾಮಯ್ಯ ತಿಳಿಸಿದರು.
ಪಟ್ಟಣದ ಗಂಗಮ್ಮನಪಾಳ್ಯದ ರಸ್ತೆಯಲ್ಲಿ ಇರುವ ಕನ್ನಡ ಸಂಘದ ಹಳೆಯ ಕಟ್ಟಡ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆ ವತಿಯಿಂದ ವಿಶಾಲವಾದ ನಿವೇಶನವನ್ನು ಕೊಟ್ಟು ಸುಮಾರು 40 ವರ್ಷಗಳು ಕಳೆದರೂ ಕಟ್ಟಡ ನಿರ್ಮಾಣ ಕ್ಕೆ ಕನ್ನಡ ಸಂಘ ಮುಂದಾಗದೆ ಇರುವ ಕಾರಣ ಪುರಸಭೆಯ ಕಛೇರಿಯಲ್ಲಿ ಶಾಸಕರ ನೇತೃತ್ವದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳನ್ನು ಕರೆಸಿ ಚರ್ಚೆ ನಡೆಸಲಾಯಿತು. ಈ ವೇಳೆ ಕನ್ನಡ ಭವನವನ್ನು ಶಾಸಕರ ನೇತೃತ್ವದಲ್ಲಿ ಕಟ್ಟಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯೋತ್ಸವ ದಿನದಂದು ಶಾಸಕರು ತಿಳಿಸಿದ್ದಾರೆ. ಜನವರಿ 2025 ರಂದು ನೂತನ ಕನ್ನಡ ಭವನವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಹಯೋಗದಲ್ಲಿ ಶಂಕು ಸ್ಥಾಪನೆ ನೆರೆವೇರಿಸಲಾಗುವುದು ಎಂದು ತಿಳಿಸಿದ್ದಾರೆ.ಅದರಂತೆ ಇಂದು ಹಳೆ ಕಟ್ಟಡವನ್ನು ತೆರುವುಗೊಳಿಸಲು ಕಾರ್ಯಾಚರಣೆ ಪ್ರಾರಂಭವಾಗಿದೆ ಇದರಿಂದ ತಾಲೂಕಿನ ಕನ್ನಡ ಅಭಿಮಾನಿಗಳಿಗೆ ಸಂತಸದ ತಂದಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ವೆಂಕಟೇಶ್ ಮಾತನಾಡಿ,ಬಂಗಾರಪೇಟೆ ತಾಲ್ಲೂಕು ಆಂದ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿನಾಡು ನಮ್ಮದಾಗಿದೆ. ಆದರೆ 40ವರ್ಷಗಳಿಂದ ಕನ್ನಡ ಭವನ ನಿರ್ಮಾಣವಾಗುತ್ತದೆ ಎಂದು ಕಾಯುತ್ತಿದ್ದೆವು ಇದುವರೆಗೂ ಸಹ ಕನ್ನಡ ಭವನ ನಿರ್ಮಾಣ ಆಗದೆ ಇರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಪುರಸಭೆ ಕಚೇರಿಯಲ್ಲಿ ಈಗಾಗಲೇ ಕನ್ನಡ ಭವನವನ್ನು ನಿರ್ಮಿಸಲು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಾಗೂ ಎಲ್ಲಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಶಾಸಕ ಎಸ್ಎನ್ ನಾರಾಯಣಸ್ವಾಮಿ ರವರೇ ಕನ್ನಡ ಭವನವನ್ನು ನಿರ್ಮಾಣ ಮಾಡಬೇಕೆಂದು ಎಲ್ಲರೂ ಒಮ್ಮತದಿಂದ ಸೂಚಿಸಿದ್ದಾರೆ. ಅದರಂತೆ ಇಂದು ಹಳೆ ಕಟ್ಟಡವನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ ಮುಂಬರುವ ಜನವರಿ 1ರಂದು ಭವನ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಬಾಬುಲಾಲ್, ಮುಖಂಡರಾದ ಕಿಟ್ಟಣ್ಣ, ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಚಿನ್ನಿ ವೆಂಕಟೇಶ್, ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ