ಕರ್ಕೇಶ್ವರ ಗ್ರಾಪಂ: ಮತ್ತೊಂದು ಕೆಎಫ್ಡಿ ದೃಢ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕರ್ಕೇಶ್ವರ ಗ್ರಾಪಂನ ಹುಣಸೇಕೊಪ್ಪ-ಗೋಣಿಕೊಪ್ಪ ಎಂಬ ಗ್ರಾಮದ ಪುರುಷರೊಬ್ಬರಿಗೆ ಕೆಎಫ್ಡಿ ಸೋಂಕು (ಮಂಗನ ಕಾಯಿಲೆ) ತಗುಲಿರುವುದು ದೃಢಪಟ್ಟಿದೆ.
ಹುಣಸೇಕೊಪ್ಪ-ಗೋಣಿಕೊಪ್ಪದ 58ವರ್ಷದ ಕೃಷಿಕರೊಬ್ಬರಿಗೆ ಕಳೆದ ಎರಡು ದಿನಗಳಿಂದ ಜ್ವರ ಬಾಧೆ ಕಾಣಿಸಿಕೊಂಡಿದ್ದು ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಪರೀಕ್ಷೆಗೆ ಒಳಪಟ್ಟಾಗ ಕೆಎಫ್ಡಿ ಸೋಂಕು ತಗುಲಿರುವುದು ಖಚಿತಗೊಂಡಿದೆ.
ಸೋಂಕು ತಗುಲಿರುವ ವ್ಯಕ್ತಿ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯಯುತವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಸೋಂಕು ಪತ್ತೆಯಾದ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ, ಡಿಎಂಪಿಎ ತೈಲವನ್ನು ವಿತರಿಸಿ, ಆರೋಗ್ಯ ಪರೀಕ್ಷೆ ನಡೆಸಿದ್ದಾರೆ.
ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ದಾಖಲಾಗುತ್ತಿರುವ ಕೆಎಫ್ಡಿ ಸೋಂಕಿನ ಎರಡನೇ ಪ್ರಕರಣ ಇದಾಗಿದ್ದು, ಕಳೆದ ವಾರ ಕರ್ಕೇಶ್ವರದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢವಾಗಿತ್ತು. ವರ್ಷದ ಮೊದಲ ತಿಂಗಳಿನಲ್ಲಿಯೇ ಸೋಂಕಿನ ಅಬ್ಬರ ಹೆಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.