ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪುಣ್ಯ ಭೂಮಿ ಕರುನಾಡು.
(KOLARA): ಬಂಗಾರಪೇಟೆ: ಸಮೃದ್ಧ ಇತಿಹಾಸ, ಭವ್ಯ ಪರಂಪರೆ, ಸಂಸ್ಕೃತಿಯನ್ನು ಹೊಂದಿರುವ ಪುಣ್ಯ ಭೂಮಿ ಕರುನಾಡು. ಈ ನೆಲದಲ್ಲಿ ಜನ್ಮವೆತ್ತಿದ ನಾವೇ ಪುಣ್ಯವಂತರು ಎಂದು ಶಾಸಕ ಎಸ್. ಎನ್ ನಾರಾಯಣಸ್ವಾಮಿ ಸಂಸತ ವನ್ನು ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿಗಳಿಸಿರುವ ಆಲೂರು ವೆಂಕಟರಾಯರು 1905ರಲ್ಲೇ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದ್ದರು,1950 ರಲ್ಲಿ ಭಾರತವು ಗಣರಾಜ್ಯವಾಯಿತು. ನಂತರ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳು ರಚನೆಯಾದವು. ಇದು ಮೈಸೂರು ರಾಜ್ಯಕ್ಕೆ ಜನ್ಮ ನೀಡಿತು. ನವೆಂಬರ್ 1, 1956 ರಂದು ಮೈಸೂರು ಸಂಸ್ಥಾನವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶವನ್ನು ಒಳಗೊಂಡಿತ್ತು. ಉತ್ತರ ಕರ್ನಾಟಕದ ಜನರು ಮೈಸೂರು ಹೆಸರನ್ನು ಉಳಿಸಿಕೊಳ್ಳಲು ಒಲವು ತೋರಲಿಲ್ಲ. ಏಕೆಂದರೆ ಇದು ಹಿಂದಿನ ಸಂಸ್ಥಾನದ ಮತ್ತು ಹೊಸ ರಾಜ್ಯದ ದಕ್ಷಿಣ ಪ್ರದೇಶಗಳೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಈ ಹಿನ್ನೆಲೆಗಳಿಂದ ರಾಜ್ಯದ ಹೆಸರನ್ನು ಕರ್ನಾಟಕ ಎಂದು ನವೆಂಬರ್ 1 ರಂದು 1973 ರಂದು ಬದಲಾಯಿಸಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ಡಿ ದೇವರಾಜ್ ಅರಸು ರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡು 51 ವರ್ಷ ಪೂರ್ಣಗೊಂಡಿರುವ ಸುದಿನ ಈ ದಿನ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ,
ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜೊತೆಗೆ, ಇತರರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ, ಯಾವುದೇ ಜಾತಿ, ಧರ್ಮ, ಭಾಷೆಯವರೂ ಕೂಡ ಕನ್ನಡಿಗರೇ ಆಗುತ್ತಾರೆ.
ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಗಳಾಗಬೇಕು. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನು ಕಲಿಯಬೇಡಿ ಎಂದು ಹೇಳುವುದಿಲ್ಲ. ಬೇರೆ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಿ, ಆದರೆ ಕನ್ನಡದಲ್ಲಿ ಮಾತನಾಡುವುದನ್ನು ಮರೆಯಬೇಡಿ ಎಂದು ಕರೆ ನೀಡಿದರು.
ಕನ್ನಡದ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ, ಗಡಿ ಭಾಗದ ತಾಲ್ಲೂಕಿನಲ್ಲಿ ಕನ್ನಡವನ್ನು ಕಟ್ಟುವ, ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಹಾಗೇಯೇ
ಕರ್ನಾಟಕದ ಏಕತೆ ಮತ್ತು ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಂಡ ದಾರ್ಶನಿಕರನ್ನು ನೆನಪಿಸಿಕೊಳ್ಳೋಣ. ಏಕತೆ, ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ಅವರ ಪರಂಪರೆಯನ್ನು ಗೌರವಿಸೋಣ ಹಾಗೂ ಕನ್ನಡ ಬೆಳವಣಿಗೆ ಶ್ರಮಿಸೋಣ ಮತ್ತು ಕನ್ನಡ ಭಾಷೆ, ಕನ್ನಡ ನೆಲದ ಬಗ್ಗೆ ನಮ್ಮೆಲ್ಲರಿಗೂ ಅಪಾರ ಹೆಮ್ಮೆ, ಅಭಿಮಾನ, ಭಕ್ತಿ. ಕನ್ನಡಾಂಬೆಯ ಮಕ್ಕಳಾದ ನಾವು ಕರ್ನಾಟಕದ ಹಿರಿಮೆಯನ್ನು ಎತ್ತಿ ಮೆರೆಯುತ್ತೇವೆ. ಕನ್ನಡ ನಾಡು ಹಲವು ವೈವಿಧ್ಯಗಳ ಬೀಡಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಎಂ.ಜಿ ಗೋವಿಂದ, ಆರಕ್ಷಕ ವೃತ್ತ ನಿರೀಕ್ಷಕ ನಂಜಪ್ಪ,ಷಂಶುದ್ದೀನ್ ಬಾಬು , ರಂಗರಾಮಯ್ಯ, ರಾಜೇಂದ್ರ ಸಿಂಹ,
ಮುರಳಿ ಪ್ರಸಾದ್, ವೈ ವಿ ರಮೇಶ, ಕಾರಹಳ್ಳಿ ವೆಂಕಟೇಶ್,ಹೇಮಂತ್ ಕನ್ನಡ ಸಂಘದ ಸದಸ್ಯರು ಕಾರ್ಯಕರ್ತರು ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ