ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಅರಿಯಿರಿ
(CHIKKAMAGALURU): ಅಪಘಾತ, ಆನಾರೋಗ್ಯ ಸೇರಿದಂತೆ ಇತರೆ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತದ ಅವಶ್ಯಕತೆಯ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕು ಎಂದು ಉದ್ಯಮಿ, ಚಿತ್ರನಟ ಕಾಫಿ ಗಿರೀಶ್ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ ಕಾಫಿ ಗಿರಿ ಗೆಳೆಯರ ಬಳಗ ಗಣರಾಜ್ಯೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ರಕ್ತದಾನವು ಶ್ರೇಷ್ಠ ದಾನವಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತುವು ಬೇರೊಂದಿಲ್ಲ. ಹಲವು ಸಂದರ್ಭಗಳಲ್ಲಿ ರಕ್ತಕ್ಕೆ ಹಣ ನೀಡುತ್ತೇವೆ ಎಂದರೂ ಸಹ ರಕ್ತದ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ತುರ್ತು ಪರಿಸ್ಥಿತಿಗಳಲ್ಲಿ ರಕ್ತ ದೊರೆಯದೆ ಹಲವಾರು ಜನರು ಪ್ರಾಣ ತ್ಯಾಗ ಮಾಡಿದ ಉದಾಹರಣೆಗಳು ಸಹ ಇವೆ.
ಗ್ರಾಮೀಣ ಜನರಲ್ಲಿ ರಕ್ತದಾನ ಕುರಿತು ಪ್ರಮುಖವಾಗಿ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಖಾಂಡ್ಯ ಹೋಬಳಿಯ ಸಮಾನ ಮನಃಸ್ಥಿತಿಯುಳ್ಳ ಯುವಕರು ಒಗ್ಗೂಡಿ ಗೆಳೆಯರ ಬಳಗ ರಚನೆ ಮಾಡಿಕೊಂಡು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ.
ಶಿಬಿರದಲ್ಲಿ 300ಕ್ಕೂ ಅಧಿಕ ರಕ್ತದ ಯೂನಿಟ್ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. 200 ರಕ್ತದಾನಿಗಳು ನೋಂದಾಯಿಸಿಕೊಂಡಿದ್ದು ಆಯೋಜಕರ ನಿರೀಕ್ಷೆಯಂತೆ ಶಿಬಿರ ಯಶಸ್ವಿಯಾಗಲಿದೆ. ಸಂಗ್ರಹಿಸಿದ ರಕ್ತದ ಯೂನಿಟ್ಗಳನ್ನು ಚಿಕ್ಕಮಗಳೂರಿನ ರಕ್ತನಿಧಿ ಕೇಂದ್ರಕ್ಕೆ ನೀಡಲಾಗುತ್ತಿದ್ದು, ತುರ್ತು ಪರಿಸ್ಥಿತಿಗಳಲ್ಲಿ ನೂರಾರು ಜನರಿಗೆ ಇದು ಉಪಯೋಗಕ್ಕೆ ಬರಲಿದೆ.
ಖಾಂಡ್ಯ ಹೋಬಳಿಯ ವ್ಯಕ್ತಿಯೊಬ್ಬರಿಗೆ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಆ ಸಂದರ್ಭದಲ್ಲಿ 11 ಯುನಿಟ್ ರಕ್ತದ ಅವಶ್ಯಕತೆಯಿದ್ದು, ರೋಗಿಗೆ ನೀಡಲು ಶಿಬಿರಕ್ಕೆ ನೋಂದಾಯಿಸಿಕೊಂಡ ಆಯ್ದ 11 ಜನ ರಕ್ತದಾನಿಗಳನ್ನು ಕಾಯ್ದಿರಿಸಲಾಗಿದೆ. ಶಸ್ತçಚಿಕಿತ್ಸೆ ಸಂದರ್ಭದಲ್ಲಿ ನೇರವಾಗಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲಾಗುವುದು ಎಂದರು.
ಶತಾಯುಷಿ ಕುಂಬರಗೋಡಿನ ಹೂವಪ್ಪಗೌಡ ರಕ್ತದಾನ ಶಿಬಿರ ಉದ್ಘಾಟಿಸಿದರು. ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್, ವೈದ್ಯೆ ವಿದ್ಯಾ ಪ್ರಶಾಂತ್, ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಪ್ರಮುಖರಾದ ಪ್ರಶಾಂತ್ ಉಜ್ಜಿನಿ, ಚಂದ್ರಶೇಖರ್ ರೈ, ರಘುಪತಿ ಬಿದರೆ, ಎಸ್.ಪೇಟೆ ಸತೀಶ್, ಬಿ.ಸಿ.ಗುರುಮೂರ್ತಿ, ಚಾಕಲುಮನೆ ಪೂರ್ಣೇಶ್, ರಜಿತ್, ಚಾಕಲುಮನೆ ಪ್ರವೀಣ್, ಶೀಲಾವತಿ, ವಿನಯ್ ಉಜ್ಜಿನಿ, ಗೋಕುಲ್ ಸಾರ್ಗೋಡು ಮತ್ತಿತರರು ಹಾಜರಿದ್ದರು.