ಶಿವಮೊಗ್ಗ ಜಿಲ್ಲಾ ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಗರದ ಕುಮಾರಿ ಮಾನ್ವಿ ಕರೂರು ಆಯ್ಕೆ
(SHIVAMOGA): ಸಾಗರ- ಸಾಗರದ ಮಣ್ಣಿನ ನೆಲದಲ್ಲಿ ಸಾಹಿತ್ಯದ ಕಂಪು ಇದೆ ಎಂದು ಸಾಗರದ ಬಿಇಓ ಈ.ಪರಶುರಾಮಪ್ಪ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಾಗರ ಇವರು ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವ ಕುಮಾರಿ ಮಾನ್ವಿ ಕರೂರು ಇವರನ್ನು ಆಹ್ವಾನಿಸುವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿ ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಅಂತಹ ಪ್ರತಿಭೆಯನ್ನು ಹೊರಹಾಕುವ ಕೆಲಸ ಆಗಬೇಕಾಗಿದೆ, ನಿರಂತರ ಪರಿಶ್ರಮದಿಂದ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕುವ ಕೆಲಸ ಆಗಬೇಕಾಗಿದೆ ಎಂದವರು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ.ಟಿ.ಸ್ವಾಮಿ ಮಾತನಾಡಿ ಸಾಗರದಲ್ಲಿ ಸಾಕಷ್ಟು ಪ್ರತಿಭವಾಂತರಿದ್ದಾರೆ, ಪ್ರತಿಭೆ ಯಾರ ಸೊತ್ತು ಅಲ್ಲ, ತಮ್ಮೊಳಗಿನ ಪ್ರತಿಭೆಯನ್ನು ಹೊರಹಾಕುವ ಕೆಲಸ ಮಾಡಬೇಕಾಗಿದೆ, ಮೊದಲು ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಬೇಕು.ನೆಲದ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು, ನಮಗೆ ನಾವೆ ಶಕ್ತಿಯನ್ನು ತುಂಬಿಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದರು.
ಸೆಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ತೆರೆಸಾ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಪ್ರಮುಖರಾದ ಕಸ್ತೂರಿ ಸಾಗರ, ಬಿ.ಡಿ.ರವಿಕುಮಾರ್, ಚಂದ್ರಶೇಖರ್ ಸಿರಿವಂತೆ, ಎಸ್.ಡಿ.ಸತ್ಯನಾರಾಯಣ, ಪರಮೇಶ್ವರ ಕರೂರು, ಪೂರ್ಣಿಮಾ ಕರೂರು, ಉಮೇಶ್, ಸ್ಟ್ಯಾನಿ ಲೋಪೀಸ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ