ಕುವೆಂಪು ವಿವಿ: ಡಾ. ಬಾಬುಜಗಜೀವನ್ರಾಂ ಜಯಂತಿ ಆಚರಣೆ ಚುನಾವಣಾ ನೀತಿ ಸಂಹಿತೆ ಹಿನ್ನಲೆ: ಸರಳ ಆಚರಣೆಗೆ ಒತ್ತು
(SHIVAMOGA): ಡಾ. ಬಾಬು ಜಗಜೀವನ್ರಾಮ್ ಆಧುನಿಕ ಭಾರತದ ಕರ್ತೃ
ಶಂಕರಘಟ್ಟ: ಡಾ. ಬಾಬು ಜಗಜೀವನ್ರಾಮ್ ಓರ್ವ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲದೇ ಆಧುನಿಕ ಭಾರತ ನಿರ್ಮಾಣದ ಕರ್ತೃ ಎಂದು ಕುವೆಂಪು ವಿವಿಯ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಡಾ. ಬಾಬುಜಗಜೀವನ್ರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶುಕ್ರವಾರ ಡಾ. ಬಾಬುಜಗಜೀವನ್ರಾಮ್ ಅವರ 117ನೇ ಜನ್ಮದಿನಾಚರಣೆಯನ್ನು ಅಧ್ಯಯನ ಕೇಂದ್ರದ ಕಚೇರಿಯಲ್ಲಿ ಸರಳವಾಗಿ ಆಯೋಜಿಸಲಾಗಿತ್ತು. ಹುತಾತ್ಮರಿಗೆ ಪುಷ್ಟನಮನ ಸಲ್ಲಿಸಿ ಮಾತನಾಡಿದ ಕುಲಸಚಿವರು, ಡಾ. ಬಾಬುಜಿ ಭಾರತದ ಸ್ವಾತಂತ್ರ ಹೋರಾಟದಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ್ದಲ್ಲದೇ, ಸ್ವಾತಂತ್ರ ಭಾರತದಲ್ಲಿ ಹಲವು ಸಚಿವಾಲಯಗಳ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿ ಯಶಸ್ಸು ಗಳಿಸಿದವರು ಎಂದರು.
ಬಿಹಾರ ಮೂಲದ ಬಾಬು ಜಗಜೀವನ್ರಾಮ್ ಅತ್ಯುತ್ತಮ ವಿದ್ಯಾಭ್ಯಾಸ ಹಿನ್ನಲೆಯೊಂದಿಗೆ ಓದಿನಲ್ಲಿ ಸದಾ ಮುಂದಿರುತ್ತಿದ್ದರು. ಸ್ವಾತಂತ್ರ ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. ನಂತರದಲ್ಲಿ ರಚನೆಯಾದ ಸರ್ಕಾರಗಳಲ್ಲಿ ಕಾರ್ಮಿಕ ಸಚಿವ, ಸಾರಿಗೆ ಮತ್ತು ರೇಲ್ವೇ ಸಚಿವ, ಸಂವಹನ ಖಾತೆ ಸಚಿವ ಹಾಗೂ ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಹಾಗೂ ದೇಶದ ಕೃಷಿ ಆಧುನೀಕರಣಕ್ಕೆ ಕಾರಣರಾದವರು. 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿದ್ದು, ಬಾಂಗ್ಲಾದೇಶ ರಚನೆಗೆ ಕಾರಣರಾದರು. ಆಖಿಲ ಭಾರತ ಶೋಷಿತ ವರ್ಗಗಳ ಸಮಿತಿಯನ್ನು ರಚಿಸಿ ಅಸ್ಪೃಷ್ಯತೆ ಹೊಗಲಾಡಿಸಲು ಶ್ರಮಿಸಿ ಸಾಮಾಜಿಕ ನ್ಯಾಯಕ್ಕಾಗಿ ಮಹತ್ತರ ಕೊಡುಗೆ ನೀಡಿದವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ಸತ್ಯಪ್ರಕಾಶ್ ಎಂ ಆರ್, ಸಮಾಜವಿಜ್ಞಾನ ನಿಖಾಯದ ಡೀನ್ ಪ್ರೊ ಗುರುಲಿಂಗಯ್ಯ ಎಂ, ಮಾನವ ಸಂಪನ್ಮೂಲ ವಿಭಾಗದ ಡಾ. ಮಂಜುನಾಥ್ ಕೆ ಆರ್, ಡಾ. ನಲ್ಲಿಕಟ್ಟೆ ಸಿದ್ಧೇಶ್ ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.