ಸೈನಿಕರ ತ್ಯಾಗದಂತೆ ಅರ್ಜುನ ಆನೆಯದ್ದು ವೀರ ಮರಣ ಹು
(CHIKKAMAGALURU): ಬಾಳೆಹೊನ್ನೂರು: ಗಡಿ ಕಾಯುವ ಸೈನಿಕರು ತುರ್ತು ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ವೀರ ಮರಣ ಹೊಂದುವoತೆ ಮೈಸೂರು ಅಂಬಾರಿ ಆನೆ ಅರ್ಜುನನು ವೀರ ಮರಣ ಹೊಂದಿದ್ದಾನೆ ಎಂದು ಎನ್.ಆರ್.ಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಚೈತನ್ಯ ವೆಂಕಿ ಹೇಳಿದರು.
ಪಟ್ಟಣದ ಜೇಸಿ ವೃತ್ತದಲ್ಲಿ ಟ್ರಾಕ್ಟರ್ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ವೀರ ಮರಣ ಹೊಂದಿದ ಅಂಬಾರಿ ಆನೆ ಅರ್ಜುನನಿಗೆ ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಸತತ ಎಂಟು ವರ್ಷಗಳ ಕಾಲ ನಾಡದೇವತೆ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ಸೇವೆ ಸಲ್ಲಿಸಿದ ಅರ್ಜುನನ ಕಾರ್ಯ ಯಾರೂ ಮರೆಯಲಾಗದ್ದು. ಪುಂಡ ಕಾಡಾನೆ ಸೆರೆ ಸಂದರ್ಭದಲ್ಲಿ ಅಚಾನಕ್ ಆಗಿ ಎದುರಾದ ದಾಳಿಯಲ್ಲಿ ಇತರೆ ಮೂರು ಸಾಕಾನೆಗಳು ಹಾಗೂ ಮಾವುತರು, ಅರಣ್ಯ ಸಿಬ್ಬಂದಿಗಳ ಪ್ರಾಣ ಉಳಿಸಿ ವೀರಾವೇಶದಿಂದ ಹೋರಾಡಿ ತನ್ನ ಪ್ರಾಣವನ್ನು ತೆತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ.
ಪರಿಸರ ಸಮತೋಲನವಿರಲು ಪ್ರಾಣಿಗಳು, ಮಾನವರ ಸಹಕಾರ ಅಗತ್ಯವಾಗಿದೆ. ಇಬ್ಬರೂ ಒಟ್ಟಾದರೆ ಮಾತ್ರ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಿದೆ. ಪ್ರಕೃತಿಯ ಉಳಿವಿಗೂ ಪ್ರಾಣಿಯ ಕೊಡುಗೆ ಅತ್ಯಂತ ಹೆಚ್ಚು ಇರಲಿದೆ. ಇಂತಹ ಪ್ರಾಣಿ ಸಂಕುಲದ ಆನೆ ನಮ್ಮನ್ನು ಅಗಲಿರುವುದು ವಿಶಾದನೀಯವಾಗಿದೆ.
ರಾಜ್ಯ ಸರ್ಕಾರ ಮೈಸೂರಿನ ಚಾಮುಂಡೇಶ್ವರಿ ದೇಗುಲದ ಸುತ್ತಮುತ್ತಲಿನ ಯಾವುದಾದರೂ ಪ್ರದೇಶದಲ್ಲಿ ಅರ್ಜುನನ ಸ್ಮಾರಕ, ಉದ್ಯಾನವನ ನಿರ್ಮಾಣ ಮಾಡಬೇಕು ಎಂಬುದು ಅರ್ಜುನನ ಅಭಿಮಾನಿಗಳ ಒತ್ತಾಸೆಯಾಗಿದೆ. ಮುಂದಿನ ದಿನಗಳಲ್ಲಿ ವಿಶೇಷತೆಯಿಂದ ಕೂಡಿದ ಅರ್ಜುನನ ಸ್ಮಾರಕ ನಿರ್ಮಾಣವಾಗಿ ಅದು ಪ್ರವಾಸಿ ತಾಣವಾಗಬೇಕು. ಎಲ್ಲರ ನೆನಪಿನಲ್ಲಿ ಅರ್ಜುನ ಸದಾ ಇರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಅಂಬಾರಿ ಆನೆ ಅರ್ಜುನನ ದಿಢೀರ್ ನಿಧನ ಎಲ್ಲರ ಮನಸ್ಸನು ತೀವ್ರ ಘಾಸಿಗೊಳಿಸಿದೆ. ಹಲವರು ಇನ್ನೂ ಸಹ ಆ ನೋವಿನಿಂದ ಹೊರಬಂದಿಲ್ಲ. ಸಕಲೇಶಪುರ ಭಾಗದಲ್ಲಿ ಪುಂಡಾನೆ ಹಾವಳಿಯಿಂದ ಜನರಿಗೆ ಉಂಟಾದ ತೊಂದರೆಯನ್ನು ನಿವಾರಿಸಲು ಅದರ ಸೆರೆಗಾಗಿ ಬಂದಿದ್ದ ಅರ್ಜುನ ಕಾರ್ಯಾಚರಣೆಯಲ್ಲಿ ಯಶಸ್ಸು ಕಾಣದೆ ಮೃತಪಟ್ಟಿರುವುದು ಕನ್ನಡಿಗರಿಗೆ ನೋವು ತಂದಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅರ್ಜುನನ ಜನನ ಇದೇ ನಾಡಿನಲ್ಲಾಗಬೇಕು ಎಂಬುದು ಹಲವರ ಆಶಯವಾಗಿದೆ ಎಂದರು.
ಟ್ರಾಕ್ಟರ್ ಚಾಲಕರ ಸಂಘದ ಅಧ್ಯಕ್ಷ ತಿಪ್ಪೇಶ್ ಅಕ್ಷರನಗರ, ಸಂಘದ ಸದಸ್ಯರಾದ ಅಣ್ಣಪ್ಪ, ಅಂತೋಣಿ, ಭೋಜಪೂಜಾರಿ, ರಾಜು, ಲಕ್ಷ್ಮಣ್, ಮುಕುಂದ, ಮಹೇಶ್, ಕುಮಾರ್, ಅಭಿಲಾಶ್, ಅಬೂಬಕರ್ ಸಿದ್ದಿಕ್, ಶರತ್ ಮತ್ತಿತರರು ಹಾಜರಿದ್ದರು.