ಚಿಕ್ಕಮಗಳೂರುನ್ಯೂಸ್

ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ


(CHIKKAMAGALURU): ಇಲ್ಲಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಹದಿನೈದನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಮಂಗಳವಾರ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ನವರಾತ್ರಿಯ ಆರನೇ ದಿನ ಆಶ್ವಯುಜ ಶುದ್ಧ ಪಂಚಮಿಯ ಮೂಲಾ ನಕ್ಷತ್ರದ ದಿನ ದುರ್ಗೆಯು ವಿಷ್ಣುರೂಪಿಣಿಯಾಗಿ, ಇಂದ್ರಾಣಿಯಾಗಿ ದೇವತೆಗಳಿಗೆ ದರ್ಶನ ನೀಡಿದ ದಿನವೆಂದು ಪುರಾಣದಲ್ಲಿ ಉಲ್ಲೇಖವಿದ್ದು, ಈ ದಿನ ಸರಸ್ವತಿ ಪೂಜಾ ದಿನವಾಗಿರುವುದದರಿಂದ ಪುಟ್ಟ ಮಕ್ಕಳಿಗೆ ಪ್ರಥಮವಾಗಿ ಅಕ್ಷರಾಭ್ಯಾಸ ಮಾಡಿಸಿದಲ್ಲಿ ಆ ಮಕ್ಕಳು ಸಿದ್ಧ, ಬುದ್ಧಿವಂತರಾಗಿ, ವಿದ್ಯಾಸಂಪನ್ನರಾಗಿ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂಬ ನಂಬಿಕೆ ಇದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಅಕ್ಷರಾಭ್ಯಾಸ ಕಾರ್ಯ ನಡೆಸಿದ್ದು, ಐದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಅಕ್ಷರಾಭ್ಯಾಸದ ಪ್ರಯುಕ್ತ ದೇವಿಯನ್ನು ಶಾರದಾ ಮಾತೆಯ ರೂಪದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹಾಗೂ ಮಕರವಾಹಿನಿ ವಾರುಣಿ ರೂಪಿಣಿ ಪೂಜಾ ಪಾರಾಯಣ ನಡೆಸಲಾಯಿತು. ಅರ್ಚಕರಾದ ಸುಬ್ರಹ್ಮಣ್ಯಭಟ್ ಮತ್ತು ಸಂಗಡಿಗರು ಅಕ್ಷರಾಭ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿಯ ನೇತೃತ್ವ ವಹಿಸಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಖಜಾಂಚಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ರೆನ್ನಿ ದೇವಯ್ಯ, ಚೈತನ್ಯ ವೆಂಕಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ಎಚ್.ಎಚ್.ಕೃಷ್ಣಮೂರ್ತಿ ಮತ್ತಿತರರು ಇದ್ದರು.


ನಾಳೆ ಇಂದ್ರಾಣಿ ರೂಪಿಣಿ ಪೂಜಾ ಪಾರಾಯಣ
ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ನವರಾತ್ರಿ ಮಹೋತ್ಸವದ ಅಂಗವಾಗಿ ಅ.೯ರ ಬುಧವಾರ ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಮೃಗವಾಹಿನಿ, ಇಂದ್ರಾಣಿ ರೂಪಿಣಿ ಪೂಜಾ ಪಾರಾಯಣ ನಡೆಯಲಿದೆ.
ಸಂಜೆ ೬ರಿಂದ ೭.೪೫ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ ೮ರಿಂದ ಲಯನ್ ಕಿಶೋರ್ ಡಿ.ಶೆಟ್ಟಿ ನಿರ್ದೇಶನದಲ್ಲಿ ಶ್ರೀಲಲಿತೆ ಕಲಾವಿದರಿಂದ ಗರುಡ ಪಂಚಮಿ ಎಂಬ ತುಳು ನಾಟಕ ನಡೆಯಲಿದೆ.

Leave a Reply

Your email address will not be published. Required fields are marked *

Scan the code