ಜಿಲ್ಲೆನ್ಯೂಸ್

ಸಾಹಿತ್ಯಕೆ ಅಂತಃಕರಣದ ಒಳಗಣ್ಣು ತೆರೆಸುವ ಶಕ್ತಿಯಿದೆ: ಸೂರಿ ಶ್ರೀನಿವಾಸ್

ಸಾಹಿತ್ಯಕೆ ಅಂತಃಕರಣದ ಒಳಗಣ್ಣು ತೆರೆಸುವ ಶಕ್ತಿಯಿದೆ: ಸೂರಿ ಶ್ರೀನಿವಾಸ್

(CHIKKAMAGALURU): ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನರಸಿಂಹರಾಜಪುರ ವತಿಯಿಂದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಬಾಳೆಹೊನ್ನೂರು ಇಲ್ಲಿ ಹಾ ಮಾ ನಾಯಕ ಸಾಹಿತ್ಯ, ಬದುಕು ಬರಹ, ಕುರಿತಾದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ಓದುವ ಕಾಲದಲ್ಲಿ ಹತ್ತು ವರ್ಷ ತಲೆ ತಗ್ಗಿಸಿ ಓದಿದರೆ, ಮುಂದಿನ ಬದುಕು ತಲೆಯೆತ್ತಿ ನಡೆಯಬಹುದು ಎಂದರು. ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯದ ಒಳಹೊರಣಗಳನ್ನ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ. ಸಂಗೀತ ಸಾಹಿತ್ಯ ಕ್ರೀಡೆ ನಾಟಕ ನಾಟ್ಯ ಇವನ್ನು ಇಷ್ಟ ಪಟ್ಟರೆ ಅವು ನಮ್ಮ ಬದುಕಿನ ಕಣ್ಣು ತೆರೆಸುತ್ತದೆ ಎಂದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ದತ್ತಿ ಉಪನ್ಯಾಸ ನೀಡಿದ ಸಾಹಿತಿ ಶ್ರೀಮತಿ ಚಂದ್ರಕಲಾ ಹಾ. ಮಾ ನಾಯಕ್ ಅವರು ಕನ್ನಡ ಸಾಹಿತ್ಯದ ಅವಿಸ್ಮರಣೀಯ ಮುತ್ತಿನಂತೆ. ಕನ್ನಡ ಸಾಹಿತ್ಯ ಲೋಕದ ತಾಪಮಾನ ಅಳೆಯುವ ಮಾಪನ, ಹಾ, ಮಾ ನಾಯಕ ಎಂದು ಕಾರಂತರು ಹೇಳಿದ್ದಾರೆ. ಅವರು ತೀರ್ಥಹಳ್ಳಿಯ ಪಕ್ಕದ ಹಾರೋಗದ್ದೆಯಲ್ಲಿ ಹುಟ್ಟಿದ ನಾಯರಿಗೆ ವಿದ್ಯಾರ್ಥಿ ದೆಸೆಯಲ್ಲಿ ಸಾಹಿತ್ಯ ಆಸಕ್ತಿ ಇತ್ತು. ಮುಂದೆ ಮೈಸೂರಿನಲ್ಲಿ ಶಿಕ್ಷಣ ಪಡೆದರು, ಕಮಕೋಡು ನರಸಿಂಹ ಶಾಸ್ತ್ರಿ ಅವರ ಗರಡಿಯಲ್ಲಿ ಬೆಳೆದವರು. ತಮ್ಮ ಅಕ್ಕ ಪಕ್ಕದ ಸಂಗತಿಗಳ ಕುರಿತು ಬರೆಯಲು ಆರಂಬಿಸಿದರು. ಬಾಳ್ ನೋಟಗಳು, ಸಂಸ್ಕೃತಿ, ಸುಕೃತಿ ಹೆಸರಿನ ಬರಹಗಳ ಬರೆದಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಂಟು ಸುದೀರ್ಘ ಸಂಪುಟಗಳನ್ನು ರಚಿಸಿಕೊಟ್ಟ ಶ್ರೇಯ ಹಾಮಾ ನಾಯಕ್ ಅವರದ್ದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅಂಕಣ ಬರಹಕ್ಕೆ ಪಡೆದುಕೊಂಡವರು.

ಆಶಯ ನುಡಿ ಮಾತನಾಡಿದ ಶ್ರೀ ಕೆ, ಟಿ ವೆಂಕಟೇಶ್ ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ನೆಲ ಜಲ ಭಾಷೆಗೆ ಅನ್ಯಾಯವಾದಾಗ ಸಿಡಿದು ನಿಲ್ಲುತ್ತದೆ. ಕನ್ನಡದ ಉಳಿವು ಬೆಳವಣಿಗೆಗೆ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಸಾಹಿತ್ಯ ಬೆಳವಣಿಗೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ನೆಡೆಸುತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದತ್ತಿ ದಾನಿಗಳಾದ ಪಟೇಲ್ ಬಿಟಿ ಮಂಜಪ್ಪ ಗೌಡರ ಪುತ್ರ ಬೀ.ಎಂ ಜಯರಾಂ ಅವರು ಮಾತನಾಡಿ ,ನಮ್ಮ ತಂದೆ ಕನ್ನಡ ಸಾಹಿತ್ಯ ಮಲೆನಾಡಿನ ಜನರಿಗೆ ತಲುಪಲಿ ಎಂಬುವ ಕಾರಣಕ್ಕೆ ದತ್ತಿ ನೀಡಿದ್ದಾರೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪೂರ್ನೇಶ್ ಅವರು ಮಾತನಾಡಿ ದತ್ತಿ ಉಪನ್ಯಾಸದ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಾ ಇದೆ. ನಾವು ನವೆಂಬರ್ ಕನ್ನಡಿಗರು ಆಗದೆ, ಭಾಷೆಯನ್ನು ಗೌರವಿಸುವ ಕಾರ್ಯ ಮಾಡಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಮಾತನಾಡಿ ಮನುಷ್ಯನಿಗೆ ಬೇಕಾಗಿರುವುದು ತಾಳ್ಮೆ, ತಾಳ್ಮೆ ಗಳಿಸಲು ಸಾಹಿತ್ಯ ಪೂರಕವಾಗಿ ಇರುತ್ತದೆ. ಸಾಹಿತ್ಯ ಪರಿಷತ್ ನಮ್ಮ ಕಾಲೇಜಿನಲ್ಲಿ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ , ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು. ಪರಿಷತ್ ಸದಸ್ಯೆ ಲತಾ ಪ್ರಾರ್ಥಿಸಿ ಹೋಬಳಿ ಅಧ್ಯಕ್ಷರಾದ ರತ್ನಾಕರ ಗಡಿಗೇಶ್ವರ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Scan the code