Newsಚಿಕ್ಕಮಗಳೂರು

ಆಚರಣೆಗಳ ಮೂಲಕ ಬದುಕು ಕಟ್ಟಿಕೊಳ್ಳುವ ಕೆಲಸ ಜೇಸಿಐನಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಆಚರಣೆಗಳ ಮೂಲಕ ಬದುಕು ಕಟ್ಟಿಕೊಳ್ಳುವ ಕೆಲಸ ಜೇಸಿಐನಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ


(CHIKKAMAGALURU): ಗಣಪತಿಯ ಆರಾಧನೆಯ ಹೆಸರಿನಲ್ಲಿ ಪ್ರತಿಭೆಗಳಿಗೆ ಅವಕಾಶ ನೀಡುವುದು ಒಂದು ಉತ್ತಮ ಕೆಲಸವಾಗಿದ್ದು, ಆಚರಣೆಯ ಮೂಲಕ ನಮ್ಮ ಬದುಕು, ಪರಿಸರವನ್ನು ಕಟ್ಟಿಕೊಳ್ಳುವ ಕೆಲಸ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್ ಸಿಗಸೆ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ವಿದ್ಯಾಗಣಪತಿ ಮಹೋತ್ಸವವದಲ್ಲಿ ಜೇಸಿಐ ಸಂಸ್ಥೆಯು ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿಜೃಂಭಣೆ, ಅಚ್ಚುಕಟ್ಟುತನದಿಂದ ನಡೆಯುವ ಬಾಳೆಹೊನ್ನೂರು ಗಣೇಶೋತ್ಸವ ಎಲ್ಲರಿಗೂ ಮಾದರಿಯಾಗಿದ್ದು, ಇದನ್ನು ಕಣ್ತುಂಬಿಕೊಳ್ಳುವ ನಾವು ಧನ್ಯರು. ಬಾಳೆಹೊನ್ನೂರು ಜೇಸಿ ಸಂಸ್ಥೆಯು ಇಂತಹ ದೊಡ್ಡ ವೇದಿಕೆಯಲ್ಲಿ ರಾಜ್ಯದ ಪ್ರತಿಭೆಗಳನ್ನು ಕರೆಯಿಸಿ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ.
ಭಗವಂತ ಆರಾಧನೆ ನಮ್ಮ ಮನರಂಜನೆಗಾಗಿ ಮಾತ್ರವಲ್ಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಉದ್ದೇಶದಿಂದ ಗಣೇಶೋತ್ಸವವನ್ನು ಸಾರ್ವತ್ರೀಕರಣಗೊಳಿಸಿದ್ದು, ಇದರಿಂದಾಗಿ ಸಮಾಜದ ಎಲ್ಲ ಸ್ತರದ ಜನ ಮೇಲು, ಕೀಳು, ಬಡವ, ಬಲ್ಲಿದ ಎಂಬ ಬೇಧವನ್ನು ಬಿಟ್ಟು ಒಗ್ಗೂಡುವುದು ಆಗಿತ್ತು.

ಇಂದಿನ ಗಣೇಶೋತ್ಸವವನ್ನು ನೋಡಿದರೆ ತಿಲಕರ ಕನಸು ಅಕ್ಷರಶಃ ಸತ್ಯವಾಗಿದೆ ಎಂಬುದು ತೋರಿಸುತ್ತದೆ. ಧಾರ್ಮಿಕ ಕೈಂಕರ್ಯಗಳು ಒಂದು ಪರಿಸರ ಪೂರಕವಾಗಿದ್ದು, ಪೂಜಾ ಕಾರ್ಯಗಳನ್ನು ನಡೆಸುವುದರಿಂದ ಹಲವು ಉದ್ಯೋಗಗಳನ್ನು ಸೃಷ್ಟಿಸಲಿದೆ. ಇಲ್ಲಿ ಪೆಂಡಾಲ್ ಮಾಡುವವನಿಂದ ಹಿಡಿದು, ಹೂ ಮಾರುವವನು, ವಿವಿಧ ಸಾಮಾಗ್ರಿಗಳನ್ನು ನೀಡುವವರಿಗೆ ಉದ್ಯೋಗ ದೊರೆಯಲಿದೆ. ಇದು ಭಗವಂತ ನಮಗೆ ಆಶೀರ್ವಾದದ ರೂಪದಲ್ಲಿ ನೀಡುವ ಉದ್ಯೋಗವಾಗಿದೆ.
ಮನುಷ್ಯನ ದುಡಿಮೆ ಮತ್ತು ಅನ್ನ ಭಗವಂತನ ಕೃಪೆಯಾಗಿದೆ. ಸಂಸ್ಕಾರ ಉಳಿದರೆ ನಮ್ಮ ಬದುಕು ಉಳಿಯಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇಸಿ ಸಂಸ್ಥೆಯು ನೃತ್ಯ ಸ್ಪರ್ಧಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸ್ಪರ್ಧಿಗಳು ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಕಲಾ ಪ್ರೇಮಿಗಳ ಮನಗೆಲ್ಲಬೇಕು ಎಂದು.
ಜೇಸಿಐ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಜೇಸಿಐ ಸಂಸ್ಥೆಯು ಯುವಜನರ ವ್ಯಕ್ತಿತ್ವ ವಿಕಸನಕ್ಕಾಗಿ ಇದ್ದು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಬಾಳೆಹೊನ್ನೂರು ಗಣೇಶೋತ್ಸವದಲ್ಲಿ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ವೇದಿಕೆಯನ್ನು ನೀಡುತ್ತಿದೆ.
ಗಣೇಶೋತ್ಸವವು ಧಾರ್ಮಿಕತೆಯೊಂದಿಗೆ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉತ್ಸವವಾಗಿದ್ದು, ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದ ಗಣೇಶೋತ್ಸವ ಎಂಬ ಹೆಮ್ಮೆಯಿದೆ. ಇಲ್ಲಿನ ತಮ್ಮ ಕಲೆಯನ್ನು ಪ್ರದರ್ಶಿಸಿದ ಪ್ರತಿಭೆಗಳು ರಾಜ್ಯ, ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದ ಹಲವು ಉದಾಹರಣೆಗಳು ಇವೆ. ಇದು ಇಲ್ಲಿನ ಗಣೇಶೋತ್ಸವದ ಮಹಿಮೆಯನ್ನು ಸಾರಲಿದೆ.


ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿ, ತಂಡಗಳು ತೀರ್ಪುಗಾರರು ನೀಡುವ ತೀರ್ಪನ್ನು ಸಮಭಾವದಿಂದ ಸ್ವೀಕರಿಸಿ ತಮ್ಮ ಸ್ಫೂರ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ, ಉದ್ಯಮಿ ಎಂ.ಜಿ.ಪ್ರದೀಪ್ ಜಯಪುರ, ಮಂಜುನಾಥ್ ಕೋಟ್ಯಾನ್, ಚಿತ್ರನಟ ಭರತ್, ಜೇಸಿ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅಜಿತ್, ಕಾರ್ಯಕ್ರಮ ನಿರ್ದೇಶಕ ನಿಖಿಲ್ ಕಾನ್ಕೆರೆ, ಗಣಪತಿ ಸಮಿತಿ ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಚೈತನ್ಯ ವೆಂಕಿ, ಸುಧಾಕರ್, ಕೆ.ಎಂ.ರಾಘವೇಂದ್ರ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code