ಸೊರಬದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶ
(SHIVAMOGA): ಸೊರಬ: ಐದು ಗ್ಯಾರೆಂಟಿಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಅದನ್ನು ಜನರಿಂದಲೇ ವಸೂಲಿ ಮಾಡುತ್ತಿದೆ ಎನ್ನುವುದು ವಿಪರ್ಯಾಸ. ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರದ ಪತನ ನಿಶ್ಚಿತ ಎಂದು ಮಾಜಿ ಸಚಿವ ಎಸ್.ಕುಮಾರಬಂಗಾರಪ್ಪ ಭವಿಷ್ಯ ನುಡಿದರು.
ಗುರುವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾಮೂಹಿಕವಾಗಿ ಒಗ್ಗೂಡಿ ಪಕ್ಷ ಬಲಪಡಿಸಬೇಕು. ರೈತರ ಜಮೀನನ್ನು ರಸ್ತೆಯ ಬದಿಯನ್ನೂ ಕೇಳುವ ಪರಿಸ್ಥಿತಿ ಬಂದೊದಗಿದೆ. ಮುಂದಿನ ಪೀಳಿಗೆಯನ್ನು ಉದ್ಧರಿಸುವ ಹೊಣೆ ಬಿಜೆಪಿಯ ಮೇಲಿದೆ.ದೇಶದಲ್ಲಿಯೇ ಉತ್ತಮ ಸಂಸದ ಎನ್ನುವ ಹೆಸರನ್ನು ಸಂಸದ ಬಿ.ವೈ.ರಾಘವೇಂದ್ರ ಪಡೆದಿದ್ದಾರೆ. ಈ ಬಾರಿಯೂ ಶಿವಮೊಗ್ಗದಿಂದ ಅವರನ್ನು ಕೇಂದ್ರಕ್ಕೆ ಆರಿಸಿ ಕಳಿಸಬೇಕು.
ಗರ್ವದಿಂದ ರಾಜಕಾರಣ ಮಾಡುತ್ತಿರುವವರ ಗರ್ವವನ್ನು ಮುರಿಯಬೇಕು
ಈ ಬಾರಿ ಯಾವ ಗರ್ವದಿಂದ ರಾಜಕಾರಣ ಮಾಡುತ್ತಿದ್ದಾರೋ ಅಂತವರ ಗರ್ವವನ್ನು ಮುರಿಯಬೇಕು ಎಂದು ಪರೋಕ್ಷವಾಗಿ ಮಧುಬಂಗಾರಪ್ಪಗೆ ಟಾಂಗ್ ನೀಡಿದ ಅವರು ಚುನಾವಣೆಗೆ ಮುಖ್ಯ ಬೇಕಾಗಿರುವುದು ಒಗ್ಗಟ್ಟು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವುದು ಜನರ ಅಭಿಲಾಷೆಯಾಗಿದೆ. ವಿರೋಧಿಗಳನ್ನು ಹೀಯಾಳಿಸುವ ಅಗತ್ಯವಿಲ್ಲ. ರೈತ ತಾನು ಬೆಳೆದ ಬೆಳೆಯನ್ನು ತನ್ನ ಜಾತಿಯವನಿಗೆ ಮಾರಾಟ ಮಾಡುವುದಾದರೆ ಎಲ್ಲರಿಗೂ ಹಸಿವು ನೀಗಲು ಸಾಧ್ಯವಿಲ್ಲ. ಅದರಂತೆ ಜಾತಿ,ಮತ ಮರೆತು ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಬೇಕು. ಸಂಸದರಾಗಿ ರಾಘವೇಂದ್ರ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಬಹುಮತದಿಂದ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರು ಹೊರಬೇಕು ಎಂದರು.
ದೆಹಲಿಗೆ ಹೋಗಿ ಬಂದವರು, ನಾನೇ ಗೆಲ್ಲುತ್ತೇನೆ ಎನ್ನುತ್ತಾರೆ. ನನ್ನ ಪತ್ನಿ ಗೆಲ್ಲಿಸಿ ಕೊಡಿ ನಾನು ಹಾಡ್ತಿನಿ, ಕುಣಿದು ಕುಪ್ಪಳಿಸುತ್ತೇನೆ ಎನ್ನುವವರಿಂದ ಏನೂ ಆಗಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪತಿ, ನಟ ಶಿವರಾಜಕುಮಾರ್ ಅವರ ವಿರುದ್ಧ ಲೇವಡಿ ಮಾಡಿದರು.
ಇದು ದೇಶದ ಚುನಾವಣೆ. ಬಿಜೆಪಿ ಗೆದ್ದರೆ ಭಾರತ ಗೆದ್ದಂತೆ:
ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ದೇಶದಲ್ಲಿ ಈ ಬಾರಿಯೂ ಬಿಜೆಪಿಯೇ ಬರುತ್ತದೆ.ಮೋದಿಯೇ ಪ್ರಧಾನಿಯಾಗಲಿದ್ದಾರೆ. ಇದು ದೇಶದ ಚುನಾವಣೆ. ಬಿಜೆಪಿ ಗೆದ್ದರೆ ಭಾರತ ಗೆದ್ದಂತೆ. ರಾಘವೇಂದ್ರ ಸಾಹೇಬರಾಗಬೇಕು. ಕೇಂದ್ರದ ಸಚಿವರಾಗಬೇಕು. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಒಳ್ಳೆಯ ಅಂತರದ ಮತ ಬರುವಂತೆ ಮಾಡಬೇಕು.ಒಂದೂ ದಿನವೂ ರಜೆತೆಗೆದುಕೊಳ್ಳದಂತೆ ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ.ಈ ಲೋಕಸಭಾ ಚುನಾವಣೆಯಲ್ಲಿ ಇಂದಿನಿoದ ಮುವತ್ತು ದಿನಗಳಾದರೂ ನಾವು ಪಕ್ವವಾಗಿ ಪಕ್ಕವಾಗಿ ಬಿಜೆಪಿಗಾಗಿ ಕೆಲಸ ಮಾಡೋಣ.ಯಾರೇನೇ ಎಂದರೂ, ದೇಶದಲ್ಲಿ ಈ ಬಾರಿಯೂ ಬಿಜೆಪಿಯೇ ಬರುತ್ತದೆ.ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂದು ಹಾಲಪ್ಪ ಭವಿಷ್ಯ ನುಡಿದರು.
ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿಯ ಮಹಾಸಭೆ ನಡೆಯಿತು.ನಾವೆಲ್ಲಾ ಮುಖಂಡರು ಸಹ ಹೋಗಿದ್ದೆವು.ಮತಗಟ್ಟೆ ಎನ್ನುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಬೂತ್ ಗೆದ್ದರೆ ಭಾರತದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಪ್ರಧಾನಿ ಮೋದಿ ಪಾಠ ಮಾಡಿದ್ದಾರೆ.ನಮ್ಮ ಬೂತ್ ಯಾವುದೂ ಅದರಲ್ಲಿ ಎಷ್ಟು ನಮ್ಮ ಮತಗಳು ಎನ್ನುವುದನ್ನು ಬಿಜೆಪಿ ಮುಖಂಡರು ತಿಳಿದು ಕೆಲಸ ಮಾಡಬೇಕು.
ಮತಕ್ಕೋಸ್ಕರವೇ ‘ಮತ’ ಹಾಕಬಾರದು. ದೇಶಕ್ಕೋಸ್ಕರ ಮತಹಾಕಬೇಕು
ಈ ಲೋಕಸಭಾ ಚುನಾವಣೆಯನ್ನು ಎದುರಿಸಲು ನಮಗೆ ಹಲವಾರು ಚುನಾವಣೆಗಳ ಅನುಭವವಿದೆ. ಈ 45 ದಿನಗಳಲ್ಲಿ ನಾವು ಕಳೆದುಕೊಂಡಿದ್ದನ್ನು ವಾಪಸುಪಡೆಯಬೇಕಿದೆ. ಮತಕ್ಕೋಸ್ಕರವೇ ‘ಮತ’ ಹಾಕಬಾರದು. ದೇಶಕ್ಕೋಸ್ಕರ ಮತಹಾಕಬೇಕು. ಸ್ವಾರ್ಥಕ್ಕಾಗಿ ಜಾತಿ, ಸಮುದಾಯಕ್ಕೆ ಮತಹಾಕಬಾರದು.ಜಾತಿಗೆ ಸೀಮಿತವಾಗಿ ಮತದಾನ ಮಾಡಬಾರದು.ದೇಶವೇ ಒಂದು ಜಾತಿಯಾಗಿದೆ.ಪ್ರಧಾನಮಂತ್ರಿ ಹುದ್ದೆ ಯಾವ ಜಾತಿ ಎಂದು ಪ್ರಶ್ನಿಸಿ,ಜಾತಿಗಳನ್ನು ಸಮುದಾಯಗಳನ್ನು ಅಭಿವೃದ್ಧಿ ಮಾಡಬೇಕೇ ಹೊರತು ದ್ವೇಷದಿಂದ ರಾಜಕಾರಣ ಮಾಡಬಾರದು ಎಂದರು.
ಚುನಾವಣೆಗಾಗಿ ಮಾತ್ರ ಮಾತನಾಡುವ ಪಕ್ಷ, ವ್ಯಕ್ತಿ ನಾವಲ್ಲ,
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮೋದಿಯವರು ಮತ್ತೆ ಪ್ರಧಾನಿಯಾಗಲು ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ಚುನಾವಣೆಗಾಗಿ ಮಾತ್ರ ಮಾತನಾಡುವ ಪಕ್ಷ, ವ್ಯಕ್ತಿ ನಾವಲ್ಲ, ಜನರ ಮಧ್ಯೆ ಇದ್ದು ಅಭಿವೃದ್ಧಿ, ದೇಶದ ರಕ್ಷಣೆ, ಜನಪರ ಯೋಜನೆಗಳ ಚಿಂತನೆ ನಡೆಸುವ ಪಕ್ಷ ಬಿಜೆಪಿ. ಇದರ ಕಾರ್ಯಕರ್ತರಾಗಿರುವ ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಕಂಕಣಬದ್ಧರಾಗಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಪ್ರಮುಖರಾದ ರಾಜು ಎಂ.ತಲ್ಲೂರು, ಪಾಣಿರಾಜಪ್ಪ, ಗಾಯತ್ರಿ ಮಲ್ಲಪ್ಪ, ಎ.ಎಲ್.ಅರವಿಂದ್ ಎಂ.ಡಿ.ಉಮೇಶ್, ಅನ್ವರ್ ಸಾಬ್, ಡಿ.ಶಿವಯೋಗಿ, ಗೀತಾ ಮಲ್ಲಿಕಾರ್ಜುನ ಮತ್ತಿತರಿದ್ದರು.
ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್,ಸೊರಬ