“ನೋಡಿ ಸ್ವಾಮಿ ಇವರಿರೋದು ಹೀಗೆ”
ಶಂಕರ್ ನಾಗರಕಟ್ಟೆ ಎಂದರೆ ಕೆಲವರಿಗೆ ಅರ್ಥವೇ ಆಗುವುದಿಲ್ಲ. ಶಂಕರ್ನಾಗ್ ಎಂದರೆ ಯಾರಿಗೂ ನೆನಪುಮಾಡಿಕೊಡುವ ಅವಶ್ಯಕತೆ ಇರುವುದಿಲ್ಲ. ನಮ್ಮನ್ನು ಅಗಲಿ ಸುಮಾರು 25 ವರ್ಷವಾದರೂ ಜನಮಾನಸದಲ್ಲಿ ಮಾನಸಿಕವಾಗಿ ಬೆರೆತಿರುವವರು. ಸಿನಿಮಾ, ರಂಗಭೂಮಿ ಹಾಗೂ ಸಮಾಜಸೇವೆಯ ಕ್ಷೇತ್ರಗಳಲ್ಲಿ ತಮ್ಮದೇ ಗುರುತನ್ನು ಇದ್ದ ಅತ್ಯಲ್ಪಕಾಲದಲ್ಲೇ ಬಿಟ್ಟು ಹೋದ ಇವರ ಜನ್ಮದಿನ ಇಂದು.
ಕಾರ್ನಾಡ್ ರವರು ತಮ್ಮ ‘ಒಂದಾನೊoದು ಕಾಲದಲ್ಲಿ’ ಚಿತ್ರಕ್ಕೆ ಹೊಸಮುಖದ ಅನ್ವೇಷಣೆಯಲ್ಲಿ ತೊಡಗಿದ್ದಾಗ ಕಂಡದ್ದು ಶಂಕರ್.
ಮೊದಲ ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದರು. ಹೀಗೆ ಶುರುವಾದ ಇವರ ಸಿನಿಪಯಣದಲ್ಲಿ ಕರ್ನಾಟಕದಲ್ಲಿ ಚಿತ್ರೋದ್ಯಮ ಬೇರೂರಬೇಕು. ಪ್ರತಿಯೊಂದಕ್ಕೂ ಮದ್ರಾಸ್ಅನ್ನು ಅವಲಂಬಿಸುವುದು ಬೇಡ ಎಂಬ ಸ್ವಾಭಿಮಾನ ಮೂಡಿತು. ‘ನಾಳೆ ಎಂಬುವ ಚಿಂತೆ ಎಂಬುದೆ ನಮಗಿಲ್ಲ’ ಎಂದು ಹಾಡಿದ್ದರೂ ನಾಳೆಗಳ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದವರು. ಬೆಂಗಳೂರಿಗೆ ಮೆಟ್ರೋ, ನಂದಿಬೆಟ್ಟಕ್ಕೆ ರೋಪ್ವೇ, ಬಡವರಿಗೆ ಕಡಿಮೆ ದರದಲ್ಲಿ ಸೈಟ್, ಕನ್ನಡಿಗರ ಅಭಿಮಾನದ ‘ಸಂಕೇತ’ವಾಗಿ ಸ್ಟೂಡಿಯೋ.. ಹೀಗೆ ಹಲವು ಯೋಜನೆಗೆ ಕೈ ಹಾಕಿದವರು.
ಸಿನಿಮಾರಂಗದಲ್ಲಿ ವಿಶಿಷ್ಟ ಅಭಿನಯದಿಂದಲೇ ಹೆಸರಾದವರು. ಇಂದಿನ ಅದೆಷ್ಟೋ ಆಟೋ ಡ್ರೈವರ್ ಗಳು ಯುವಕರು ಅವರಾರು ಶಂಕರ್ ಇದ್ದಾಗ ಹುಟ್ಟಿಯೇ ಇರಲಿಲ್ಲ ಆದರೂ ಅವರ ರಕ್ತಸಂಬಧಿಗಳಿಗಿoತ ಈ ಆಟೋರಾಜನ ಚಿತ್ರಕ್ಕೆ ಅವರ ವಾಹನಗಳಲ್ಲಿ ಖಾಯಂ ಸ್ಥಾನ.
ನೃತ್ಯ ಸರಿಯಾಗಿ ಬಾರದಿದ್ದರೂ, ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಎಂದು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ಸುಳ್ಳಲ್ಲ. ಆಕ್ಸಿಡೆಂಟ್, ಮಿಂಚಿನ ಓಟ, ಜನ್ಮಜನ್ಮದ ಅನುಭಂದದoತಹ ವಿಭಿನ್ನ ಕಥೆಗಳಿಗೆ ನಿರ್ದೇಶನ ಮಾಡಿದವರು. ಪೋಲಿಸ್ ಎಂದರೆ ಹೀಗಿರಬೇಕು ಎಂದು ಸಾಂಗ್ಲಿಯಾನ ಮೂಲಕ ಗೆದ್ದವರು. ಇವರ ಬಹುತೇಕ ಚಿತ್ರಗಳು ಶ್ರಮಿಕ ವರ್ಗದವರ ಪ್ರತಿಬಿಂಬವಾಗಿತ್ತು. ಮೂಗನ ಸೇಡು, ಮುನಿಯನ ಮಾದರಿ, ಜೀವನ ಚಕ್ರ ಇದಕ್ಕೆ ಉದಾಹರಣೆ.
ಇಡೀ ವಿಶ್ವವೇ ಬೆರಗಾಗುವಂತೆ ‘ಮಾಲ್ಗುಡಿ ಡೇಸ್’ ಎಂಬ ಧಾರಾವಾಗಿ ಶಂಕರ್ನಾಗ್ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಲು ಕಾರಣವಾಯಿತು. ಆಗುಂಬೆಯಲ್ಲಿನ ದೊಡ್ಡಮನೆ ಮಾಲ್ಗುಡಿ ಮನೆ ಎಂದಾಯಿತು. ಧಾರಾವಾಹಿಗಾಗಿ ಮಲೆನಾಡಿನಲ್ಲೂ ಕೃತಕ ರೈಲುಬರುವ ಹಾಗೆ ಮಾಡಿದವರು. ಇಂದಿಗೂ ಆಗುಂಬೆಯ ಒಂದು ವೃತ್ತಕ್ಕೆ ಮಾಲ್ಗುಡಿ ಸರ್ಕಲ್ ಎನ್ನುತ್ತಾರೆ. ಇದರ ಮುಂದೆ ಬಹಳಷ್ಟು ಭಾಷೆಗೆ ಡಬ್ ಆದ ಧಾರಾವಾಹಿಗಳ ಉದಾಹಣೆ ಇಂದಿಗೂ ಇಲ್ಲ.
ಸಂಕೇತ್ ಕಲಾವಿದರು ಎಂಬ ರಂಗ ತಂಡದಿoದ ಹಲವು ಹೊಸತರಹದ ರಂಗಭೂಮಿ ಸಾಧ್ಯತೆಗಳಬಗ್ಗೆ ತಿಳಿಸಿಕೊಟ್ಟವರು. ಇತ್ತಿಚೆಗೆ ರಮೇಶ್ ಭಟ್ ಅವರೊಂದಿಗೆ ಕಲಾವಿದರ ಒಕ್ಕೂಟ ಆಯೋಜಿಸಿದ್ದ ರಂಗ ಸಂವಾದದಲ್ಲಿ ಮಾತನಾಡುತ್ತ, ‘ಒಮ್ಮೆ ಶಂಕರ್ ನಿರ್ದೇಶದ ನಾಟಕಕ್ಕಾಗಿ ಬಾಲಭವನವನ್ನು ಗೊತ್ತುಮಾಡಿ ವೃತ್ತದ ರೀತಿ ಸುತ್ತಲೂ ವೇದಿಕೆ ಸಿದ್ಧಪಡಿಸಿ ಮಧ್ಯದಲ್ಲಿ ಹಾಸಿಗೆ ಹಾಸಿ ಅದರ ಮೇಲೆ ಕುಳಿತು ಪ್ರೇಕ್ಷಕ ನಾಟಕ ನೋಡುವಂತೆ ಮಾಡಿದರು.
ಇದು ಅಂದಿನ ಸಮಯದಲ್ಲಿ ಜನರಿಂದಲೇ ಪ್ರಚಾರಪಡೆದುಕೊಂಡಿತು. ಇಂತಿಷ್ಟು ದಿನದಲ್ಲಿ ನಾಟಕ ಮುಗಿದಾಗ ಮತ್ತೇ ಅದೇ ನಾಟಕಮಾಡಿ ಎಂಬ ಒತ್ತಾಯಬಂತು ಆದರೆ ಬಾಲಭವನ ಸಿಗಲೇ ಇಲ್ಲ ಹಾಗಾಗಿ ಆ ಪ್ರದರ್ಶನ ಮತ್ತೆ ಆಗಲೇ ಇಲ್ಲ’ ಎಂದು ತಿಳಿಸಿದರು. ಮಾಸ್ಟರ್ ಮಂಜು, ರಮೇಶ್ಭಟ್, ಸಂಕೇತ್ಕಾಶಿ, ಮನ್ದೀಪ್ರಾಯ್, ಅಂಕಲ್ ಲೋಕನಾಥ್ ಇವರುಗಳು ಶಂಕರ್ನಾಗ್ ಒಡನಾಟದಿಂದ ಹೆಚ್ಚು ಪ್ರಭಾವಿತರಾದವರು.
ತನ್ನ ಜೊತೆಗೆ ಒಂದು ಟೈಪ್ರೈಟಿಂಗ್ ಮಿಷಿನ್ಅನ್ನು ಸದಾ ಇಟ್ಟುಕೊಂಡಿರುತ್ತಿದ್ದ ಇವರು ಕೆಲಸದ ಬಿಡುವಿನ ವೇಳೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. 8ಘಂಟೆ ನಿದ್ರೆಗೆ ಬೇಡವೆಂದು ಅದರ ಕೆಲವು ಸಮಯದಲ್ಲಿ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸಮಾಡಿಮುಗಿಸಿದವರು. ಇವರ ಇಂಥಹ ಕರ್ಯಗಳು ಅನೇಕರಿಗೆ ಪ್ರೇರಣೆಯಾಗಿರುವುದಂತೂ ಸುಳ್ಳಲ್ಲ. ಇಂದಿಗೆ ಅವರ ೬೧ನೇ ಜನ್ಮದಿನ. ಅವರಿಗೆ ಮತ್ತೊಮ್ಮೆ ಹೇಳೋಣ, ‘ಶಂಕರಣ್ಣ ಮತ್ತೊಮ್ಮೆ ಹುಟ್ಟಿ ಬಾ..”
ಚೇತನ್ ಸಿ ರಾಯನಹಳ್ಳಿ
ಶಿವಮೊಗ್ಗ
ಮೊಬೈಲ್ – ೯೫೩೮೦೨೦೩೬೭