ಅವೈಜ್ಞಾನಿಕ ಆನೆ ಬಿಡಾರಕ್ಕೆ ಮಲೆನಾಡು ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ವಿರೋಧ.
(CHIKKAMAGALURU): ಅರಣ್ಯ ಸಚಿವರು ಹಾಗು ಇಲಾಖೆಯ ಹೇಳಿಕೆಯಲ್ಲಿ ಗೊಂದಲ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಮಾಡಲು ಉದ್ದೇಶಿಸಿರುವ ಆನೆ ಶಿಬಿರದ ವಿಚಾರದಲ್ಲಿ ಅರಣ್ಯ ಸಚಿವರ ಹೇಳಿಕೆ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆಗಳ ನಡುವೆ ವೈರುಧ್ಯವಿದ್ದು. ವೈರುಧ್ಯವನ್ನು ಸ್ಪಷ್ಟ ಪಡಿಸದೇ, ಸ್ಥಳೀಯ ಗ್ರಾಮ ಪಂಚಾಯತಿ ಹಾಗು ಗ್ರಾಮಸ್ಥರ ನಡುವೆ ಚರ್ಚಿಸದೆ ಆನೆ ಶಿಬಿರ ಮಾಡಲು ಉದ್ದೇಶಿಸಿರುವುದಕ್ಕೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಸಮಿತಿ ವಿರೋಧ ಮಾಡುತ್ತದೆ ಎಂದು ಸಮಿತಿಯ ಕ್ಷೇತ್ರ ಅಧ್ಯಕ್ಷರಾದ ನಾಗೇಶ್ ಎಂ ಎನ್ ಹೇಳಿದರು.
ಈಗಾಗಲೇ ಮಲೆನಾಡು ಅನೇಕ ಅರಣ್ಯ ಕಾನೂನು ಹಾಗು ಯೋಜನೆಗಳ ಮೂಲಕ ತತ್ತರಿಸಿ ಹೋಗಿದೆ. ಬೆಳದ ಭತ್ತ, ಅಡಿಕೆ, ಕಾಫಿ, ಕಾಳು ಮೆಣಸು ಫಸಲು ಕೊಯ್ಲು ಬರುವ ಸಂದರ್ಭದಲ್ಲಿ ಸುರಿಯುತ್ತಿರುವ ಭೀಕರ ಅಕಾಲಿಕ ಮಳೆಯಿಂದ ಮಲೆನಾಡಿನ ರೈತರು ಆತಂಕದ ನಡುವೆ ಬದುಕುತ್ತಾ ಇದ್ದಾರೆ. ಅಲ್ಲದೆ ಅಡಿಕೆಗೆ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಹಾಗು ಕೊಳೆತು ಉದುರುತಿರುವ ಕಾಫಿ ಫಸಲಿನ ನಡುವೆ ಮುಂದಿನ ಜೀವನ ಹೇಗೆ ಎನ್ನುವ ಬದುಕಿನ ಭಯದ ನಡುವೆ ರೈತರು ಕಂಗಾಲು ಆಗಿದ್ದಾನೆ.
ಇದಲ್ಲದೆ ಈಗಾಗಲೇ ಒತ್ತುವರಿ ತೆರವು, ಸೆಕ್ಷನ್4, ಸೆಕ್ಷನ್17 ಕಸ್ತೂರಿ ರಂಗನ್ ವರದಿಯ ಗುಮ್ಮಗಳು ಇಲ್ಲಿನ ನಾಗರಿಕರನ್ನು ಬೆದರಿಸುತ್ತಿದೆ. ಇಲ್ಲಿನ ವಾಸಿಗಳ ಪಾಲಿಗೆ ಬೆಂಬಲವಾಗಿ ನಿಲ್ಲಬೇಕಾದ ಚುನಾಯಿತ ಜನ ಪ್ರತಿನಿಧಿಗಳು ವೇದಿಕೆಯ ಭಾಷಣಕ್ಕೆ ಸೀಮಿತರಾಗಿ ಬಿಟ್ಟಿದ್ದಾರೆ. ಜನ ಹಿತ ಕಾಪಾಡಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈಗಾಗಲೇ ಇರುವ ಅನೇಕ ಯೋಜನೆಗಳ ನಡುವೆ ಆನೆ ಶಿಬಿರ ಮಾಡಲು ಹೊರಟಿರುವುದು ಮಲೆನಾಡಿಗರ ಮೇಲೆ ಸರ್ಕಾರ ಹಾಗು ಅರಣ್ಯ ಇಲಾಖೆ ದಬ್ಬಾಳಿಕೆ ಆಗಿದೆ.
ಭದ್ರಾ ಹುಲಿಯೋಜನೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನ್ಯ ಈಶ್ವರ ಖಂಡ್ರೆ ಅವರು. ಭದ್ರಾ ಅಭಯಾರಣ್ಯದಲ್ಲಿ 2000 ಹೆಕ್ಟೇರ್ ಭೂಮಿ ಗುರುತಿಸಿದ್ದು ಅದರಲ್ಲಿ ಆನೆ ವಿಹಾರ ಧಾಮ ನಿರ್ಮಾಣ ಮಾಡಿ ಅಲ್ಲಿ ಚಿಕ್ಕಮಗಳೂರು ಕೊಡಗು ಹಾಸನ ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣ ಆಗಿರುವ ಆನೆಗಳನ್ನು ಹಿಡಿದು ಭದ್ರಾ ಅಭಯಾರಣ್ಯದಲ್ಲಿ ಹಲಸು ಬಿದಿರು ಹುಲ್ಲು ಬೆಳೆದು ಆಹಾರ ಒದಗಿಸಿ ಜೊತೆಗೆ ಸುತ್ತಲೂ ಬೇಲಿ ನಿರ್ಮಾಣ ಮಾಡಿ ಪುನರ್ವಸತಿ ಮಾಡಲಾಗುವುದು ಎಂದಿದ್ದರು.
ಆದರೆ ಅರಣ್ಯ ಇಲಾಖೆ ಬಾಳೆಹೊನ್ನೂರು ಸಮೀಪ ಹಲಸೂರು ಅರಣ್ಯ ಭಾಗದಲ್ಲಿ ಆನೆ ಶಿಬಿರ ಮಾಡಲಾಗುತ್ತದೆ. ಇತರ ಭಾಗದಲ್ಲಿ ಉಪಟಳ ಕೊಡುವ ಕಾಡಾನೆಗಳ ಹಿಡಿಯಲು ಇಲ್ಲಿ ಆನೆಗಳನ್ನು ಸಾಕಿ ಪಳಗಿಸುವ ಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಗೊಂದಲ ಇಲ್ಲಿನ ನಿವಾಸಿಗಳ ಚಿಂತೆಗೆ ಕಾರಣ ಆಗಿದೆ.
ಮುಖ್ಯವಾಗಿ ಆನೆ ಶಿಬಿರ ಮಾಡಲು ಆಯ್ಕೆ ಮಾಡಿಕೊಂಡ ಜಾಗ. ಮುಂದೆ ವಿಸ್ತರಣೆ ಮಾಡಿದರೆ ಇಲ್ಲಿ ವಾಸ ಮಾಡುವ ನಿವಾಸಿಗಳ ಪಾಡು ಏನು? ಈ ಹಿಂದೆ ಹುಲಿ ಯೋಜನೆ ಜಾರಿಗೆ ಬಂದಾಗ ಕೂಡ ಜಾಗರ ವ್ಯಾಲಿಯಲ್ಲಿ ಮಾತ್ರ ಮಾಡುತ್ತೇವೆ ಎಂದು ಅನಂತರ ಕ್ರಮೇಣ ವಿಸ್ತರಣೆ ಮಾಡಿ ,ಬಫರ್ ಝೋನ್ ಹೆಸರಲಿ ಮತ್ತಷ್ಟು ವಿಸ್ತರಣೆ ಮಾಡಿದೆ. ಮುಂದೆ ಆನೆ ಶಿಬಿರದ ಹೆಸರಿನಲ್ಲಿ ಇಲ್ಲಿನ ಜನರ ಬದುಕನ್ನು ಕಸಿದುಕೊಳ್ಳುವುದಿಲ್ಲ ಎನ್ನುವ ಭರವಸೆ ಜನರಲ್ಲಿ ಉಳಿದಿಲ್ಲ . ಆನೆ ಶಿಬಿರ ಮಾಡುವುದು ಹೇಗೆ ಎಂದು ಸ್ಥಳೀಯ ಜನರಿಗೆ ಸ್ಪಷ್ಟ ಪಡಿಸಬೇಕು. ಹಾಗೆಯೇ ಈ ಯೋಜನೆಯಲ್ಲಿ ಸೃಷ್ಟಿ ಆಗುವ ಉದ್ಯೋಗ ಅವಕಾಶಗಳನ್ನು ಸ್ಥಳೀಯರಿಗೆ ಮೀಸಲು ಇಡಬೇಕು. ಪ್ರವಾಸೋದ್ಯಮ ಬೆಳವಣಿಗೆ ವಿಚಾರದಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಮಿತಿ ಒತ್ತಾಯ ಮಾಡುತ್ತದೆ. ಸ್ಥಳೀಯ ಜನರೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ರೂಪುರೇಷೆ ನಿರ್ಮಾಣ ಮಾಡಿ ಪ್ರವಾಸೋದ್ಯಮ ನೀತಿ ಜಾರಿ ಮಾಡುವುದಕ್ಕೆ ಸಮಿತಿಯ ವಿರೋಧ ಇಲ್ಲಾ ಆದರೆ ಆನೆ ವಿಹಾರ ಧಾಮ ಮಾಡುವುದಕ್ಕೆ ಮಾತ್ರ ಸಮಿತಿ ವಿರೋಧ ಮಾಡುತ್ತದೆ. ಹಾಗಾಗಿ ಸ್ಥಳೀಯವಾಗಿ ಚರ್ಚಿಸದೆ.
ವ್ಯಾಪ್ತಿಯ ಕುರಿತು ಲಿಖಿತ ಭರವಸೆ ನೀಡದೆ ಜಾರಿ ಮಾಡಲು ಹೊರಟರೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಉಗ್ರ ಜನ ಆಂದೋಲನ ಮಾಡಬೇಕಾಗುತ್ತದೆ. ಈವರೆಗೆ ಸೌಮ್ಯ ರೀತಿಯಲ್ಲಿ ನಮ್ಮ ಹೋರಾಟ ಸಾಗಿ ಬಂದಿದೆ. ಆದರೆ ಮುಂದೆ ಜನರ ಆಕ್ರೋಶದ ಹೋರಾಟವನ್ನು ಸರ್ಕಾರ ಹಾಗು ಅರಣ್ಯ ಇಲಾಖೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಳೆಹಾನಿಯಿಂದ ಆಗಿರುವ ಅನಾಹುತಕ್ಕೆ ಕೊಳೆ ಹಾಗು ಎಲೆ ಚುಕ್ಕಿ ರೋಗಕ್ಕೆ ರೈತರಿಗೆ ವೈಜ್ಞಾನಿಕವಾದ ಸೂಕ್ತ ಪರಿಹಾರ ಕೂಡ ಕೂಡಬೇಕು ಈ ಕುರಿತು ಶಾಸಕರು ಸರಕಾರದ ಗಮನ ಸೆಳೆಯಬೇಕು ಎಂದು ಸಮಿತಿ ಕಾರ್ಯದರ್ಶಿ ಅಭಿಷೇಕ್ ಹೇಳಿದರು.
ಜಯಪುರ ಹೋಬಳಿಯ ಹೋರಾಟ ಸಮಿತಿ ಮುಂದಿನ ತಿಂಗಳು ಜಯಪುರದಿಂದ ಕೊಪ್ಪಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿ ಕೊಂಡಿದ್ದು. ರೈತರು ಕಾರ್ಮಿಕರ ಹಿತ ದೃಷ್ಟಿಯಿಂದ ಪಕ್ಷಾತೀತವಾಗಿ ನಡೆಯುವ ಹೋರಾಟಕ್ಕೆ ಮಲೆನಾಡು ರೈತ ಹಿತರಕ್ಷಣಾ ಸಮಿತಿ ಬೆಂಬಲ ನೀಡುತ್ತದೆ ಎಂದು ಸಮಿತಿ ಕಾರ್ಯದರ್ಶಿ ರಂಜಿತ್ ಶೃಂಗೇರಿ ಹೇಳಿದರು. ಸೆಕ್ಷನ್ 4 ಅನ್ನು ಜಂಟಿ ಸಮಿತಿ ವರದಿ ಇಲ್ಲಿದೆ 17 ಮಾಡುವುದು, ಹೊಸದಾಗಿ ಸೆಕ್ಷನ್ 4 ಮಾಡುವುದು, ACF ಕೋರ್ಟ್ ಗೆ ಹೊಸ ಪ್ರಕರಣಗಳು ದಾಖಲು ಮಾಡುವುದು, ಒತ್ತುವರಿ ತೆರವು ಮಾಡುವುದು, ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ಪ್ರಕ್ರಿಯೆ ನಡೆದ ಪಕ್ಷದಲ್ಲಿ ಜಿಲ್ಲಾ ಮಟ್ಟದ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ರಾಜ್ಯ ಸರಕಾರದ ಬಳಿ ನಿಯೋಗ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಸಂಸದರು ಹಾಗು ಶಾಸಕರು ಯಾವುದೇ ಕಾರ್ಯ ಮಾಡಿಲ್ಲ ಹಾಗಾಗಿ ಜಿಲ್ಲೆಯ ಇತರ ಸಂಘ ಸಂಸ್ಥೆಗಳು, ಮಠ ಮಂದಿರಗಳ ಸ್ವಾಮೀಜಿಗಳು ಸಹಕಾರದ ಮಾರ್ಗದರ್ಶನ ಮೂಲಕ ಜಿಲ್ಲಾ ಮಟ್ಟದಲ್ಲಿ ಜಿಲ್ಲೆಯ ಎಲ್ಲ ನಾಗರಿಕರೂ ರೈತರು ಕಾರ್ಮಿಕರ ಸಹಯೋಗದ ಜೊತೆಗೆ ಚರ್ಚೆ ಮಾಡಲಾಗುತಿದೆ. ಎಲ್ಲರ ಅಭಿಪ್ರಾಯ ಪಡೆದು ಮುಂದೆ ಏನು ಎನ್ನುವ ಹೋರಾಟದ ರೂಪುರೇಷೆ ಮಾಡಲಾಗುವುದು ದಯವಿಟ್ಟು ಶಾಸಕರು ಸಂಸದರು ರೈತರ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರ ನೀಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗೇಶ್ ಎಂ ಎನ್, ಸಮಿತಿ ಕಾರ್ಯದರ್ಶಿ ಅಭಿಷೇಕ್, ರಂಜಿತ್ ಶೃಂಗೇರಿ, ರತ್ನಾಕರ್ ಗಡಿಗೇಶ್ವರ, ಚಂದ್ರಶೇಖರ್ ರೈ ಖಂಡ್ಯ, ಕಾರ್ತಿಕ್ ಗೌಡ ಕಾರ್ಗದ್ದೆ, ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.