ಮಲ್ಲೇಶ್ ಬಾಬು ರವರ ಬೆಂಬಲಿಗರು ಎಸ್.ಎನ್.ನಾರಾಯಣಸ್ವಾಮಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ.
(KOLARA): ಬಂಗಾರಪೇಟೆ: ಕೋಲಾರ ಲೋಕಸಭಾ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ರವರ ಬೆಂಬಲಿಗರು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ತಮ್ಮ ಕಾರು ಬರುತ್ತಿದ್ದಾಗ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿರುವುದು ತೀರಾ ಖಂಡನಾರ್ಹವಾಗಿದ್ದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಹಮ್ಮಿಕೊಂಡಿದ್ದ ಜಾಥಾ ವೇಳೆ ತಾವು ಕಾರಿನಲ್ಲಿ ಬರುತ್ತಿದ್ದಾಗ ಏಕಾಏಕಿ ಮಲ್ಲೇಶ್ ಬಾಬು ಬೆಂಬಲಿಗರು ತಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲು ಯತ್ನಿಸಿದ್ದು, ಸ್ಥಳದಲ್ಲೇ ಇದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದರು.
ಕಳೆದ ಹನ್ನೊಂದು ವರ್ಷಗಳಿಂದ ಶಾಸಕನಾಗಿ ತಾಲ್ಲೂಕಿನ ಜನರಿಗೋಸ್ಕರ ಹಗಲಿರುಳು ಶ್ರಮಿಸುತ್ತಿರುವ ತಮ್ಮ ಮೇಲೆಯೇ ಹೀಗೆ ಹಲ್ಲೆ ನಡೆಸಲು ಮುಂದಾದರೆ, ಇನ್ನು ಸಾಮಾನ್ಯ ಜನರ ಗತಿಯೇನು ಎಂದು ಪ್ರಶ್ನಿಸಿದರು. ತಾವು ತಾಲ್ಲೂಕಿನ ಜನತೆಯ ಹಿತಕ್ಕಾಗಿ ಪ್ರಾಣ ಕೊಡಲು ಸಿದ್ದವಿರುವುದಾಗಿ ತಿಳಿಸಿದ ಅವರು, ಜನತೆ ಎಲ್ಲವನ್ನೂ ಗಮನಿಸುತ್ತಿದ್ದು, ಇದೇ ತಿಂಗಳ 26 ರಂದು ನಡೆಯಲಿರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಮಲ್ಲೇಶ್ ಬಾಬು ರವರ ಸಂಗಡಿಗರು ಈ ರೀತಿಯ ಹಲ್ಲೆ ಮಾಡುವಂತಹ ಹೇಯ ಕೃತ್ಯವನ್ನು ಎಸಗಲು ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯವಾಗಿದ್ದು, ನಿಮ್ಮ ಆಟ, ರೌಡಿಸಂ, ಗೂಂಡಾಗಿರಿ ಬಂಗಾರಪೇಟೆ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಇಲ್ಲಿನ ಜನತೆ ಶಾಂತಿಪ್ರಿಯರಾಗಿದ್ದು, ಅತಿ ಶೀಘ್ರದಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ವೆಂಕಟೇಶ್, ಅಣ್ಣಾದೊರೈ, ಸುಹೇಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದು ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ