ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ವ್ಯಕ್ತಿ ಸಾವು.
(CHIKKAMAGALURU): ಚಿಕ್ಕಮಗಳೂರು ತಾಲೂಕು ಉಳುವಾಗಿಲು ಕೆರೆಮಕ್ಕಿ ಗ್ರಾಮದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ.
ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತಪಟ್ಟಿರುವ ಯುವಕ ಸಂಜು (33)
ಸಂಜು ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ.
ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎನ್ನುವ ಪ್ರಶ್ನೆಗಳು ಕಾಡುವಂತಾಗಿದೆ.
ಮೃತ ಸಂಜು ಕೆರೆಮಕ್ಕಿ ಗ್ರಾಮದ ದಿವಂಗತ ಜೂಲೇಗೌಡರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.