ಧಾರಾಕಾರ ಮಳೆ ಹಾಗೂ ಗಾಳಿಗೆ ಹಲವು ಮನೆ, ಮರಗಳು ಧರೆಗುರುಳಿದ್ದೆ.
(SHIVAMOGA): ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ, ಕಾರ್ಗಲ್-ಜೋಗ ಪಟ್ಟಣ ಪಂಚಾಯತಿ ಹಾಗೂ ಪೇಟೆ ಸುತ್ತಮುತ್ತ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಹಲವು ಮನೆ, ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ. ನಷ್ಟವಾಗಿದ್ದಲ್ಲದೆ, ತಾಳಗುಪ್ಪ ಬಳಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ರಾಷ್ಟೀಯ ಹೆದ್ದಾರಿ 206 ಬಂದ್ ಆಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಾಳಗುಪ್ಪ ಹೋಬಳಿ ವ್ಯಾಪ್ತಿಯ ಯಲಕುಂದ್ಲಿ, ಪಡವಗೋಡು, ಕಾನಲೆ, ತಾಳಗುಪ್ಪ, ಮರತ್ತೂರು, ಸೈದೂರು, ನೆಜ್ಜೂರು, ಮೊದಲಾದ ಗ್ರಾಮಗಳಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಾರಂಭವಾದ ಗುಡುಗು, ಸಿಡಿಲು, ಗಾಳಿ ಸಹಿತ ಅಬ್ಬರದ ಮಳೆಯಿಂದಾಗಿ ಸುಮಾರು 10ಕ್ಕೂ ಹೆಚ್ಚು ಮರ ಮುರಿದು ಬಿದ್ದ ಪರಿಣಾಮ 2೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಯಲಕುಂದ್ಲಿಯಲ್ಲಿ 1, ಪಡವಗೋಡಿನಲ್ಲಿ ಸುಮಾರು 2&3, ಮರತ್ತೂರು, ತಾಳಗುಪ್ಪದಲ್ಲಿ 2&3 ಮರಗಳು ಬಿದ್ದಿದ್ದರಿಂದ 3&4 ಕಂಬಗಳು ಮುರಿದಿವೆ. ಇದರಿಂದಾಗಿ ತಾಳಗುಪ್ಪ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಿದೆ. ಇಂಧನ ಇಲಾಕೆಯವರು ವಿದ್ಯುತ್ ಸರಿ ಪಡಿಸಲು ಹರಸಾಹಸ ಪಡುತ್ತಾಇದ್ದು.ಇದಲ್ಲದೆ ಮರತ್ತೂರು ಗ್ರಾಮದಲ್ಲಿರುವ ಮಹಾಗಣಪತಿ ಟ್ರೇರ್ಸ್ ಮಿಲ್ನ ಗೋಡೌನ್ನ ಮಾಡಿನ ಟ್ರಸ್ಗಳು (ಟನ್ಗಟ್ಟಲೆ ತೂಕ ವಿದ್ದವು) ಹಾರಿ ಹೋಗಿ, ಮಿಲ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ, ಬತ್ತ ನೀರಿಗಾಹುತಿಯಾಗಿದೆ. ವಿಪರೀತ ಗಾಳಿಗೆ ಟ್ರಸ್ಗಳು ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ತಾಳಗುಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ಹಲವು ಕಂಬ, ಮರ ಮುರಿದ ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚುಕಾಲ ವಾಹನ ಸವಾರರು ರಸ್ತೆಯಲ್ಲೇ ನಿಂತು ಪರದಾಡಬೇಕಾಯಿತು.
ಕಾರ್ಗಲ್ ವ್ಯಾಪ್ತಿಯ ಶೆಟ್ಟಿಕ್ಯಾಂಪ್ ಬಳಿ ಶೈನಿ ಥಾಮ್ಸನ್ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಜತೆಯಲ್ಲಿ ಗೋಡೆ ಕುಸಿದು ಅಪಾರ ಹಾನಿಯುಂಟಾಗಿದೆ. ಈ ಭಾಗದಲ್ಲಿ ಮಧ್ಯಾಹ್ನ 1.30ರ ವೇಳೆಗೆ ಪ್ರಾರಂಭವಾದ ಧಾರಾಕಾರ ಮಳೆ ಸುಮಾರು 3 ಗಂಟೆವರೆಗೆ ಸುರಿದಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ.
ಸಾಗರ ಪೇಟೆ ಸುತ್ತ ಗುಡುಗು ಸಹಿತ ಸಾಧಾರಣವಾದ ಮಳೆ ಬಂದಿದ್ದರಿಂದ ಕೆಲವು ಮರಗಳು ಬಿದ್ದ ವರದಿಯಾಗಿದೆ.
ವರದಿ :ರಾಘವೇಂದ್ರ ತಾಳಗುಪ್ಪ