ಜಿಲ್ಲೆನ್ಯೂಸ್

ಶರಾವತಿ ಹಿನ್ನೀರಿನ ಶಾಪಗ್ರಸ್ತ ಜನರ ಬದುಕಿಗೆ ಮುಕ್ತಿ ಸಿಗಲಿ ಸಮ್ಮೇಳನಾಧ್ಯಕ್ಷೆ ಕು.ಮಾನ್ವಿ ಕರೂರು

ಶರಾವತಿ ಹಿನ್ನೀರಿನ ಶಾಪಗ್ರಸ್ತ ಜನರ ಬದುಕಿಗೆ ಮುಕ್ತಿ ಸಿಗಲಿ ಸಮ್ಮೇಳನಾಧ್ಯಕ್ಷೆ ಕು.ಮಾನ್ವಿ ಕರೂರು


(SHIVAMOGA): ಸಾಗರ: ಕನ್ನಡ ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ ಎಂದು ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುಮಾರಿ ಮಾನ್ಯ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ಸಾಗರ ಶಾಖೆ. ಶ್ರೀಸಿಗಂದೂರೆಶ್ವರಿ ಶಿಕ್ಷಣ ಸಂಸ್ಥೆ ಉಳ್ಳೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಇವರ ಸಹಯೋಗದಲ್ಲಿ ಇಲ್ಲಿನ ಉಳ್ಳೂರು ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಗರ ತಾಲ್ಲೂಕು ಮಟ್ಟದ 12ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ. ಕನ್ನಡ ಸಾಕಷ್ಟು ಬೆಳೆದಿದೆ, ನಾವು ಬೆಳೆಸಬೇಕಾದ ಅವಶ್ಯಕತೆ ಇಲ್ಲ. ಕನ್ನಡವನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದ ಸಾಹಿತಿಗಳು, ಕನ್ನಡದ ನೆಲಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಗರಿಮೆ ಇದೆ. ಇಲ್ಲಿ ಆದರ್ಶವಿದೆ. ಬದುಕಿನ ಸ್ಪೂರ್ತಿ ಇದೆ. ಸಾಂಸ್ಕೃತಿಕ ಹಿನ್ನೆಲೆ ಇದೆ ಹಾಗಾಗಿ ನಿತ್ಯ ಸತ್ಯವನ್ನು ಸಾರುವ ಹೆಗ್ಗಳಿಕೆ ಕನ್ನಡ ಸಾಹಿತ್ಯಕ್ಕಿದೆ. ನಮ್ಮನ್ನು ನಾವು ಎಚ್ಚೆತ್ತುಕೊಳ್ಳುವ ಕೆಲಸ ಕನ್ನಡದ ಮೂಲಕ ಆಗಬೇಕಾಗಿದೆ. ರಾಜ್ಯದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚಿನ ಕೆಲಸ ಆಗುತ್ತಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ ಎನ್ನುವುದು ವಿಶೇಷ ಸಂಗತಿಯಾಗಿದೆ, ಶಿವಮೊಗ್ಗ ಜಿಲ್ಲೆ ಹಾಗೂ ಸಾಗರ ತಾಲ್ಲೂಕಿಗೆ ತನ್ನದೆಯಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಂಪು ಇದೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಮಕ್ಕಳ ಸಾಹಿತ್ಯ ಪ್ರತಿಭೆಯನ್ನು ಗುರುತಿಸುತ್ತಿರುವುದು ಅಭಿನಂದನಿಯವಾದ ಸಂಗತಿತಾಗಿದೆ ಹಾಗಾಗಿ ನನ್ನಂತಹ ಅನೇಕ ಪ್ರತಿಭೆಗಳು ಇಲ್ಲಿದ್ದೀರಿ ಮುಂದಿನ ದಿನಗಳಲ್ಲಿ ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವ ಮೂಲಕ ಸಾಹಿತ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಬೆಳೆಸುವಂತಾಗಲಿ ಎಂದವರು ಹೇಳಿದರು.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಕುಮಾರಿ ಮಾನ್ವಿ ಕರೂರು ಅವರು ಮಾತನಾಡಿ ಜಗತ್ತಿನ ಶ್ರೇಷ್ಠ ಸಾಹಿತ್ಯ ಸಾಲಿಗೆ ಸೇರುವಂತಹದ್ದು ಕನ್ನಡ ಸಾಹಿತ್ಯವಾಗಿದೆ. ಇಂತಹ ನೆಲದಲ್ಲಿ ಕನ್ನಡದ ಕಂಪು ಮಾನವೀಯ ಸಂಬಂಧವನ್ನು ಬೆಳೆಸುವಲ್ಲಿ ಮಹತ್ವವನ್ನು ಸಾರಿದೆ. ಜಗತ್ತಿಗೆ ಶ್ರೇಷ್ಠ ಸಂದೇಶವನ್ನು ನೀಡಿದ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಗುಡಿ ಚರ್ಚ್ ಮಸೀದಿಗಳನ್ನು ಬಿಟ್ಟು ಹೊರಬರಬೇಕಾಗಿದೆ, ಆ ಮತ ಈ ಮತ, ಹಳೆಮತಗಳ ಸಹವಾಸವನ್ನು ಸಾಕುಮಾಡಬೇಕಾಗಿದೆ. ಬಹಳ ಮುಖ್ಯವಾಗಿ ಮನುಜ ಮತದ ಮೂಲಕ ವಿಶ್ವಪಥವನ್ನು ಸೇರಬೇಕಾಗಿದೆ. ನಾಡಿನ ಸಾಹಿತ್ಯದ ಮೇರು ಪರ್ವತ ನಾ.ಡಿಸೋಜ ಅಂತವರು ಮಣ್ಣಿನ ಮಹತ್ವನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ, ತಮ್ಮ ಬರಹಗಳ ಮೂಲಕ ಸ್ಪೂರ್ತಿಯಾಗಿದ್ದಾರೆ. ಇಂತಹ ಅನೇಕ ಗಣ್ಯ ಸಾಹಿತಿಗಳು ಕಲಾವಿದರ ನೆಲ ನಮ್ಮದು ಹಾಗಾಗಿ ಸಾಹಿತ್ಯ ಸತ್ವವನ್ನು ಹೆಚ್ಚಿಸುವ ಮಹಾನ್ ಚೈತನ್ಯಶೀಲರು ನಮ್ಮಲ್ಲಿದ್ದಾರೆ ಇಂತಹವರ ಮಾರ್ಗದರ್ಶನದಲ್ಲಿ ಮಕ್ಕಳ ಸಾಹಿತ್ಯಕ್ಕೆ ಮಹತ್ವ ದೊರಕಿದೆ.


ಆದಿಕವಿ ಪಂಪರಿಂದ ಆರಂಭಿಸಿ ಇಂದಿನ ಅನೇಕ ಸಾಹಿತಿಗಳು ಕನ್ನಡವನ್ನು ಬೆಳೆಸಿದ್ದಾರೆ ಹಾಗಾಗಿ ನಮ್ಮ ಇಂದಿನ ದಿನಗಳಲ್ಲಿ ಕನ್ನಡವನ್ನು ನಮ್ಮದಾಗಿಸಿಕೊಳ್ಳುವ ಕೆಲಸ ಆಗಬೇಕಾಗಿದೆ. ಆಧುನಿಕತೆಯ ಸವಾಲಿನಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡತನವನ್ನು ಉಳಿಸಿಬೆಳೆಸುವಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗಿದೆ ಆ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡಬೇಕಾಗಿದೆ.
ಪ್ರಾಕೃತಿಕ ಸಂಪತ್ತಿನ ನೆಲೆಯಾಗಿರುವ ಸಾಗರ ತಾಲ್ಲೂಕಿನ ಹಿನ್ನೀರನ ಪ್ರದೇಶದ ಜನರು ನಾಡಿಗೆ ಬೆಳಕು ನೀಡಿದ್ದಾರೆ ಆದರೆ ಅವರ ಬದುಕು ಇನ್ನೂ ಸಹ ಸಂಕಷ್ಟದಲ್ಲಿದೆ, ಮಡೆನೂರು ಹಾಗೂ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದಿಂದಾಗಿ ೧೪೨ ದುರ್ಗಮ ಹಳ್ಳಿಗಳನ್ನು ಒಳಗೊಂಡಿರುವ ದೌಪ ಪ್ರದೇಶದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಈಗಲೂ ಅನೇಕ ಹಳ್ಳಿಗಳಿಗೆ ರಸ್ತೆಗಳಿಲ್ಲ ವಿದ್ಯುತ್ ಇಲ್ಲ, ಸರಿಯಾದ ಆಸ್ಪತ್ರೆಗಳಿಲ್ಲ, ದೌಪ ಪ್ರದೇಶದ ೫೨ ಶಾಲೆಗಳಲ್ಲಿ ಇಂದಿಗೂ ಖಾಯಂ ಶಿಕ್ಷಕರಿಲ್ಲ, ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ದ್ವೀಪ ಪ್ರದೇಶದ ಜನರ ಬದುಕಿಗೆ ಶಾಪವಿಮೋಚನೆಯಾಗಬೇಕಾಗಿದೆ ಎಂದು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳನ್ನು ತೆರೆದಿಟ್ಟರು.
ಶೈಕ್ಷಣಿಕವಾಗಿಯೂ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ, ಶಿಕ್ಷಕರ ನೇಮಕಾತಿ, ಅಂಗನವಾಡಿ ಶಾಲೆಗಳಲ್ಲಿ ವ್ಯವಸ್ಥಿತ ಸೌಕರ್ಯ ಮುಂತಾದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಿ ಎಂದು ಕೋರಿ ಕೆಲವು ಬೇಡಿಕೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಿದ್ದು ವಿಶೇಷವಾಗಿತ್ತು. ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹಾಗೂ ಮಕ್ಕಳ ಗ್ರಾಮ ಸಭೆಗಳಲ್ಲಿ ಆದ ನಿರ್ಣಯಗಳು ಮರೆಮಾಚಿ ಹೋಗದೆ ಅವುಗಳನ್ನು ಜಾರಿಯಾಗುವಂತಾಗಬೇಕು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನಿಷ್ಠ ಎರಡುಜನ ಶಿಕ್ಷಕಿಯರ ನೇಮಕ ಆಗಬೇಕು.ವಿಶೇಷವಾಗಿ ಶಾಲಾ ಪಠ್ಯ ರಾಜಕೀಯದಿಂದ ದೂರವಾಗಬೇಕಾಗಿದೆ, ಮಲೆನಾಡಿನ ಪರಿಸರವನ್ನು ಉಳಿಸಬೇಕಾಗಿದೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸರ್ಕಾರವೇ ನಡೆಸುವಂತಾಗಬೇಕು, ಅಲ್ಲದೆ ಅಖಿಲಾ ಭಾರತ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವಂತಾಗಲಿ ಎಂದರಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮಂತಹ ಅಂಬೆಗಾಲಿಡುತ್ತಿರುವ ಸಾಹಿತ್ಯ ಪ್ರತಿಭೆಗಳನ್ನು ಹೊರತರುತ್ತಿರುವ ಡಿ.ಮಂಜುನಾಥ ಹಾಗೂ ವಿ.ಟಿ.ಸ್ವಾಮಿಯಂತಹವರ ಕಾರ್ಯವನ್ನು ಶ್ಲಾಘಿಸಬೇಕಾಗಿದೆ ಎಂದರು.


ಖ್ಯಾತ ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ ಸಾಹಿತ್ಯ ಬರೆಯುವುದಕ್ಕಿಂತ ಹೆಚ್ಚು ಓದಬೇಕಾಗಿದೆ, ಕನ್ನಡ ಸಾಹಿತ್ಯಕ್ಕೆ ತನ್ನದೆಯಾದ ಶ್ರೇಷ್ಠತೆ ಇದೆ. ಇಂತಹ ಸಾಹಿತ್ಯವನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇಂತಹ ಸಮ್ಮೇಳನಗಳನ್ನು ನಡೆಸುವ ಮೂಖಾಂತರ ಮಕ್ಕಳ ಸಾಹಿತ್ಯ ಪ್ರತಭೆಗಳಿಗೆ ಅವಕಾಶ ನೀಡುವಂತಾಗಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಹಿತ್ಯದ ಹೊಸ ಅರಿವು ಮೂಡಿಸಲಾಗುತ್ತಿದೆ. ನಮ್ಮ ಮುಂದೆ ಹೊಸ ಪೀಳಿಗೆ ಬರುತ್ತಿರುವುದು ಅಭಿನಂದನಿಯವಾಗಿದೆ. ಈ ಬಗ್ಗೆ ಪೋಷಕರು ಶಿಕ್ಷಕರು ಮಕ್ಕಳಲ್ಲಿರುವ ಸಾಹಿತ್ಯ ಮನಸ್ಸುಗಳನ್ನು ಹೊರತರುವ ಕೆಲಸ ಆಗಲಿ, ಸಾಗರದಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ನೀಡುತ್ತಿರುವುದು ಶ್ಲಾಘನಿಯವಾದ ಸಂಗತಿಯಾಗಿದೆ ಎಂದರು.
ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ದಿಕ್ಸೂಚಿ ಮಾತುಗಳನ್ನಾಡಿ ಮಕ್ಕಳಿಗೆ ಬರಿ ಶಿಕ್ಷಣ ನೀಡುವುದಲ್ಲ ಅದರೊಂದಿಗೆ ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳನ್ನು ಬೆಳಸಬೇಕಾಗಿದೆ. ಮಕ್ಕಳೋಳಗೆ ಅಡಿಗಿರುವ ಪ್ರತಿಭೆಗಳನ್ನು ಗುರಿತಿಸುವ ಕೆಲಸ ಆಗಬೇಕಾಗಿದೆ ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ. ರಾಜ್ಯದ ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಗರದ ಪ್ರತಿಭೆಗಳನ್ನು ಕಾಣಬಹುದಾಗಿದೆ ಹಾಗಾಗಿ ಸಾಗರದ ಮಣ್ಣಿನ ಗುಣ ಆಗಿದೆ ಎಂದರು.
ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಕಸ್ತೂರಿ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ರಕ್ಷಿತಾ ಪಿ.ಕೆಲುವೆ, ಕ್ಷೇತ್ರ ಶಿಕ್ಷಣಾಧಿಕಾರಿ ಈ.ಪರಶುರಾಮಪ್ಪ, ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಬಿಳಿಗಲ್ಲೂರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ನಾಯ್ಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಕೆ. ಮಂಕಳಲೆ ಸೆಂಟ್ ಜೋಸೆಫ್ ಶಾಲೆಯ ಮುಖ್ಯ ಶಿಕ್ಷಕಿ ತೆರೆಸಾ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ಸಿರಿವಂತೆ. ವೇದಿಕೆಯ ಪ್ರದಾನ ಕಾರ್ಯದರ್ಶಿ ಸತ್ಯನಾರಾಯಣ, ಪರಮೇಶ್ವರ ಕರೂರು, ಪೂರ್ಣಿಮಾ ಕರೂರು, ಸಂಸ್ಥೆಯ ಶ್ರೀಕಾಂತ ಬಿ, ಬಸವರಾಜ್ ಪಿ, ವಿಜಯಕುಮಾರ್ ಎಂ.ಪಿ, ವಿನಯ್ ವಿ.ಎಸ್, ವಿದ್ಯಾಲೇಖ ಜೆ.ಜಿ, ಪ್ರಭುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು, ಲಿವಿಯಾ ಸ್ವಾಗತಿಸಿ ಅಂಕಿತ ವಂದಿಸಿ ಅಂಬರ ನಿರೂಪಿಸಿದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code