ನ್ಯೂಸ್ಮನರಂಜನೆಶಿವಮೊಗ್ಗ

ಕೆರೆಗೆ ಹಾರ ರೂಪಕ:
ಸುರಭಿ ಮಹಿಳಾ ಯಕ್ಷ ತಂಡದ ಯಶಸ್ವಿ ಪ್ರಯೋಗ

ಕೆರೆಗೆ ಹಾರ ರೂಪಕ: ಸುರಭಿ ಮಹಿಳಾ ಯಕ್ಷ ತಂಡದ ಯಶಸ್ವಿ ಪ್ರಯೋಗ

(SHIVAMOGA): ಸೊರಬ: ಸಂದರ್ಭೋಚಿತ ನೀರಿನ ಮಹತ್ವ, ನೀರಿಗಾಗಿ, ಜನತೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಭಾಗೀರತಿ ಕತೆಯನ್ನು ಮನೋಜ್ಞವಾಗಿ ಪ್ರದರ್ಶಿಸಿ ಪರಿಸರ ಕಾಳಜಿಯನ್ನು ನೆನಪಿಸಿದ ಜನಪದ ನಾಟಕ ಕೆರೆಗೆ ಹಾರ ಜನಾಕರ್ಷಣೆ ಪಡೆದಿದ್ದು, ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಇಲ್ಲಿನ ಸುರಭಿ ಮಹಿಳಾ ಯಕ್ಷ ಬಳಗ ಯಕ್ಷಗಾನದ ಮೂಲಕ ಯಕ್ಷ ಸಂಸ್ಕೃತಿಯ ಉನ್ನತಿಗೆ ಮುಂದಾಗಿದ್ದು ಗಂಡು ಕುಣಿತವಾದರೂ ಯಕ್ಷಗಾನದಲ್ಲಿ ಸೈ ಎನಿಸಿಕೊಂಡು ಹಲವು ಪ್ರದರ್ಶನ ನೀಡಿದ ಬಳಿಕ ಇದೀಗ ಜನಪದ ನಾಟಕದ ಮೂಲಕ ವಿನೂತನ ಪ್ರದರ್ಶನ ನೀಡಿ ಗಮನ ಸೆಳೆದರು.

ಪಟ್ಟಣದ ಕಾನಕೇರಿ ಮಠದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವದಾಸೋಹ ದಿನದ ಆಚರಣೆಯ ವೇಳೆ ನಾಟಕ ಪ್ರದರ್ಶನ ನಡೆಯಿತು.

ಜಡೆ ಹಿರೇಮಠ ಅಮರೇಶ್ವರ ಶ್ರೀಗಳು, ಮೂಡಿ ಶಿವಲಿಂಗೇಶ್ವರ ಮಠದ ಸದಾಶಿವ ಶ್ರೀಗಳ ಸಾನ್ನಿಧ್ಯದಲ್ಲಿ
ಜಯಕುಮಾರ್ ನಿರ್ದೇಶನದಲ್ಲಿ ಪ್ರತಿ ಪಾತ್ರದಾರಿಗಳು ಪರಕಾಯ ಪ್ರವೇಶ ಮಾಡಿದ್ದು ಭಾಗೀರತಿ ಪಾತ್ರದಲ್ಲಿ ವೀಣಾಶ್ರೀಧರ್, ಕಥೆಗಾರನಾಗಿ ಶ್ರೀಮತಿ ಎಸ್., ಮಲ್ಲನಗೌಡನ ಪಾತ್ರದಲ್ಲಿ ಲಕ್ಷ್ಮೀ ಮುರಳೀಧರ್, ಮಾದೇವರಾಯನಾಗಿ ಶೋಭಾಸತ್ಯ, ಭರಮಯ್ಯನ ಗೌಡತಿಯಾಗಿ ಅನುಕೃತ, ಭರಮಯ್ಯಗೌಡನಾಗಿ ಅನುಷಾ, ಮಲ್ಲನಗೌಡರಾಗಿ ಪಂಕಜ, ಶಂಕರೆಗೌಡನಾಗಿ ನಂದಾ, ಊರಿನಗೌಡನಾಗಿ ಹರ್ಷಿತಾ, ಗೆಳತಿಯಾಗಿ ಶ್ವೇತಾ, ಭಟ್ಟರಾಗಿ ಸರಸ್ವತಿ ನಾವುಡಾ, ದೊಡ್ಡ ಸೊಸೆಯಾಗಿ ಯಶಸ್ವಿನಿ, ಎರಡನೇ ಸೊಸೆಯಾಗಿ ಸಂಜನಾ ಸಚಿನ್  ಪಾತ್ರದಾರಿಗಳಾಗಿದ್ದರು.

ಹಿಮ್ಮೇಳದಲ್ಲಿ ಕೆ.ಪಿ.ಹೆಗ್ಡೆ ಹಾರ್ಮೋನಿಯಂ, ಮಹೇಶ್ ಖಾರ್ವಿ ಖಂಜರ ವಾದಕರಾಗಿದ್ದರು.

ಅಕ್ಕನಬಳಗದವರ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾಸೋಹ ಜರುಗಿತು. ಪಟ್ಟಣದ ವೀರಶೈವ ಸಮಾಜದ ಪ್ರಮುಖರು, ಅನೇಕ ಕಲಾಭಿಮಾನಿಗಳು ಇದ್ದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code