ಮಠಪುರ ಬಳಿ ರಾಜಕೀಯ ಪ್ರಭಾವಿಗಳಿಂದ ಗಣಿಗಾರಿಕೆ, ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲ
(KOLARA): ಕೋಲಾರ : ತಾಲೂಕಿನ ವೇಮಗಲ್ ಹೋಬಳಿಯ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಿ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಡೆಯುತ್ತಿದೆ ಎಂದು ಆರೋಪಿಸಿ ಸೀತಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ ರಾಜ್ಯ ಉಪಾಧ್ಯಕ್ಷ ಮಠಪುರ ಶ್ರೀನಿವಾಸ್ ಮಾಧ್ಯಮದವರೊಂದಿಗೆ ಮಾತನಾಡಿ ಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಗ್ರಹಿಸಿದರು,
ಈ ಜಾಗದಲ್ಲಿ ನಡೆಯುವ ಕಲ್ಲು ಬಂಡೆಗಳ ಬ್ಲಾಸ್ಟಿಂಗ್ನಿಂದ ಸುಮಾರು ಒಂದರಿಂದ ಎರಡು ಕಿ.ಮೀ ದೂರದವರೆಗೆ ಕಲ್ಲುಗಳ ಚೂರುಗಳು ಚರುದಿಸುತ್ತಿವೆ. ಈ ಕಲ್ಲಿನ ಚೂರುಗಳು ಮಠಪುರ ಗ್ರಾಮದ ಮನೆಗಳ ಮೇಲ್ಚಾವಣಿ ಮೇಲೆ ಬೀಳುತ್ತಿವೆ. ಇದರಿಂದ ಮೇಲ್ಚಾವಣಿ ಸಿಮೆಂಟ್ ಶೀಟ್ಗಳು ಪುಡಿಪುಡಿ ಆಗಿವೆ. ಬ್ಲಾಸ್ಟಿಂಗ್ ಸಮಯದಲ್ಲಿ ಬರುವ ದೊಡ್ಡ ಸದ್ದಿಗೆ ಮಕ್ಕಳು, ವಯೋವೃದ್ಧರು ಭಯಪಡುವಂತಾಗಿದೆ. ಕೆಲವು ಸಂದರ್ಭಗಳಲ್ಲಿ ರಾತ್ರಿ ಹೊತ್ತಿನಲ್ಲೂ ಕಲ್ಲುಗಳ ಬ್ಲಾಸ್ಟಿಂಗ್ ನಡೆಯುತ್ತಿದ್ದು, ಇದರಿಂದ ಗ್ರಾಮಸ್ಥರು ನಿದ್ದೆ ಮಾಡಲು ಸಾಧ್ಯವಾಗದಂತಾಗಿದೆ ಎಂದು ದೂರಿದರು.
ಇನ್ನಾದರೂ ಅನಧಿಕೃತ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಚಟುವಟಿಕೆ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಅಕ್ರಮ ಕಲ್ಲು ಗಣಿಗಾರಿಕೆಯಿಂದ ನೀರು ಶೇಖರಣೆ ಮಾಡುವ ನೀರಿನ ಓವರ್ಟ್ಯಾಂಕ್ ಸಹ ಹಾನಿಯಾಗಿದೆ. ಸೀತಿ ಗ್ರಾಮ ಪಂಚಾಯಿತಿಯಿಂದ ಸ್ವಚ್ಛ ಭಾರತ ಯೋಜನೆ ಅಡಿ ಮಠಪುರ ಗ್ರಾಮದ ಬಳಿ ಇರುವ ಸೀತಿ ಗ್ರಾಮದ ಸರ್ವೆ ಸಂಖ್ಯೆ 19ರ ಗೋಮಾಳ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಜೊತೆಗೆ ಕಸ ಸಾಗಣೆಗೆ ವಾಹನಗಳನ್ನು ಖರೀದಿಸಲಾಗಿದೆ. ಆದರೆ, ಕಲ್ಲುಗಣಿಗಾರಿಕೆಯಿಂದ ಈವರೆಗೆ ಕಸ ಸಂಗ್ರಹ ಮಾತ್ರ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸಂಬಂಧ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ, ಸ್ಥಳ ಪರಿಶೀಲನೆ ನಡೆಸಿದರು. ಜೊತೆಗೆ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಚಟುವಟಿಕೆಗೆ ತಡೆಯೊಡ್ಡಿದರು. ಜೊತೆಗೆ ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ ಸೂಚಿಸಿದರು.
ಈ ವೇಳೆ ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ ರಾಜ್ಯ ಉಪಾಧ್ಯಕ್ಷ ಮಠಪುರ ಶ್ರೀನಿವಾಸ್, ಸುಬ್ಬರೆಡ್ಡಿ, ವೆಂಕಟರಾಮ್, ಬೈರೇಗೌಡ, ಗಂಗಿರೆಡ್ಡಿ, ಅನಂತ್ ಕುಮಾರ್, ಮುನಿಯಪ್ಪ, ಅನಿಲ್ ಕುಮಾರ್, ಶ್ರೀನಿವಾಸ್ ರಮೇಶ್, ಮುನಿನರಸಮ್ಮ, ಮಠಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ವರದಿ: ವಿಷ್ಣು ಕೋಲಾರ