ಕೊಳವೆ ಬಾವಿಯೊಳಗೆ ಕಲ್ಲು ಹಾಕಿದ ದುಷ್ಕರ್ಮಿಗಳು ; ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಒತ್ತಾಯ
(KOLARA): ಬಂಗಾರಪೇಟೆ :ನೂತನವಾಗಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೊಳವೆಬಾವಿ ಕೊರಿಸಲಾಗಿತ್ತು, ಆದರೆ ಕೆಲ ದುಷ್ಕರ್ಮಿಗಳು ಕೊಳವೆ ಬಾವಿಯೊಳಗೆ ಕಲ್ಲುಗಳನ್ನು ಹಾಕಿ ಪರಾರಿಯಾಗಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗು ಹಾಲಿ ಸದಸ್ಯರಾದ ಮಂಜುನಾಥ್ ಆರೋಪ ಮಾಡಿದರು.
ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮರವಹಳ್ಳಿ ಗ್ರಾಮದಲ್ಲಿ ಮಾತನಾಡುತ್ತಾ, ಬೇಸಿಗೆ ಕಾಲ ಬರುತ್ತಿರುವುದರಿಂದ ನಮ್ಮ ಮರವಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು ಆದ್ದರಿಂದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿ ನಮ್ಮ ಗ್ರಾಮಕ್ಕೆ ಕೊಳವೆ ಬಾವಿ ಬೇಕೆಂದು ಕೇಳಿದ ಸಂದರ್ಭದಲ್ಲಿ ,ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನೂತನವಾಗಿ ಕೊಳವೆಬಾವಿ ಕೊರಿಸಿದರು. ಆದರೆ ಕೆಲ ದುಷ್ಕರ್ಮಿಗಳು ಶುಕ್ರವಾರ ಮುಂಜಾನೆ ಬಂದು ಕೊಳವೆ ಬಾವಿಗೆ ಮುಚ್ಚಿದ್ದ ಪೈಪ್ ಲೈನ್ ಅನ್ನು ಕಟ್ ಮಾಡಿ ಕಲ್ಲನ್ನು ಹಾಕಿದ್ದಾರೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕೃತ್ಯ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಕುಮಾರ್ ಮಾತನಾಡಿ,ಬೇಸಿಗೆಯ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು ಕೊಳವೆ ಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಕುಡಿಯುವ ನೀರಿಗಾಗಿ ತೊಂದರೆಯಾಗುತ್ತಿದೆ. ಆದರೆ ನಮ್ಮ ಗ್ರಾಮದಲ್ಲಿ ಕೊಳವೆಬಾವಿ ಕೊರೆಸಿದ ಹಿನ್ನೆಲೆ ಸಾಕಷ್ಟು ನೀರು ಸಿಕ್ಕಿದೆ, ಇದನ್ನು ಮನಗೊಂಡ ಕಿಡಿಗೇಡಿಗಳು ಕೊರೆಸಿರುವ ಕೊಳವೆ ಬಾವಿಯೊಳಗೆ ಕಲ್ಲು ಹಾಕಿ ಮುಚ್ಚುತ್ತಾರೆ ಎಂದರೆ ಎಂತಹ ಮನಸ್ಸು ಇರಬಹುದು ಇವರಿಗೆ ಎಂದು ಬೇಸರ ವ್ಯಕ್ತಪಡಿಸಿ ಈ ಕೂಡಲೇ ಈ ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಕ್ಷ್ಮೀನಾರಾಯಣ,ರಾಮಚಂದ್ರಪ್ಪ, ಚಲಪತಿ, ತರುಣ್, ಮನು, ಅಮರೇಶ್,ಉಮೇಶ್, ನಾರಾಯಣಸ್ವಾಮಿ, ರಾಜೇಶ್, ಮಂಜುನಾಥ್, ನಾರಾಯಣ ಇದ್ದರು.
ವರದಿ: ವಿಷ್ಣು ಕೋಲಾರ