ಆನೆ ಬಿಡಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಶಾಸಕ ಟಿ.ಡಿ.ರಾಜೇಗೌಡ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪ ಇರುವ ತನೂಡಿ ಸಮೀಪದಲ್ಲಿ ಆರಂಭಿಸಲು ಉದ್ದೇಶಿರುವ ಆನೆ ಬಿಡಾರದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಚಿಕ್ಕಮಗಳೂರಿಗೆ ತೆರಳಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸಾರ್ವಜನಿಕರಿಗೆ ನೀಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಈ ಹಿಂದೆ ಮುತ್ತಿನಕೊಪ್ಪದಲ್ಲಿ ಸಫಾರಿಗಾಗಿ ಆನೆ ಬಿಡಾರ ಆರಂಭಿಸಬೇಕು ಎಂದು ಮನವಿ ನೀಡಿದ್ದರು. ಆ ಮನವಿಯಂತೆ ಬಿಡಾರ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೋ ಏನು ಎಂಬುದು ಗೊತ್ತಿಲ್ಲ ಎಂದರು.
ಕಸ್ತೂರಿ ರಂಗನ್ ವರದಿಯ ಬಗ್ಗೆ ಆಕ್ಷೇಪಣೆಗಾಗಿ ರಾಜ್ಯ ಸರ್ಕಾರದ ಬಳಿ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದೆ. ಆದರೆ ರೈತರು ಕೆಲಸ ಕಾರ್ಯದ ಒತ್ತಡದಲ್ಲಿರುವುದರಿಂದ ರೈತರನ್ನು ನಿಯೋಗ ತೆಗೆದುಕೊಂಡು ಹೋಗಿಲ್ಲ. ಸರ್ಕಾರ ಈಗಾಗಲೇ ಇದಕ್ಕೆ ಆಕ್ಷೇಪಣೆ ಸಲ್ಲಿಸಿದೆ.
ಕ್ಷೇತ್ರದಲ್ಲಿ ರೈತರಿಗೆ ಹಕ್ಕುಪತ್ರ ನೀಡಲು ಕೆಲವು ಕಾನೂನಾತ್ಮಕ ಬದಲಾವಣೆಗಳು ಆಗಬೇಕಿದ್ದು, ಈ ಹಿಂದೆ 10 ಸಾವಿರ ಹೆಕ್ಟೇರ್ ಅರಣ್ಯವನ್ನು ಡೀಮ್ಡ್ ಆಗಿ ಪರಿವರ್ತಿಸಿದ ಪರಿಣಾಮ ಹಕ್ಕುಪತ್ರ ನೀಡಲು ಸಮಸ್ಯೆಯಾಗಿದೆ. ಇದಕ್ಕೆ ಈಗಾಗಲೇ ಟಾಸ್ಕ್ ಪೋರ್ಸ್ ಸಮಿತಿ ರಚನೆಯಾಗಿದ್ದು, ಇವರು ಸರ್ವೆ ನಡೆಸಿದ ಬಳಿಕ ಪ್ರಸ್ತಾವಿತ ಅರಣ್ಯವನ್ನು ಹೊರತಂದರೆ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.