ಎಲ್ಲವೂ ಅಭಿವೃದ್ಧಿಕಾರ್ಯಗಳು ಆಗಿವೆ ಎಂದು ಬೀಗುತ್ತಿರುವ ಸಂಸದ ಬಿವೈ ರಾಘವೇಂದ್ರ
(SHIVAMOGA): ತಾಳಗುಪ್ಪ- ರಾಷ್ಟೀಯ ಹೆದ್ದಾರಿ, ಹಾಗೂ ರೈಲ್ವೆ ಉನ್ನತೀಕರಣವೇ ತಮ್ಮ ಅಭಿವೃದ್ಧಿಕಾರ್ಯದ ಸಾಕ್ಷಿ ಎಂದು ಬೀಗುತ್ತಿರುವ ಸಂಸದ ಬಿವೈ ರಾಘವೇಂದ್ರರಿಂದ ತಾಳಗುಪ್ಪ ಹೋಬಳಿಗೆ ಅನ್ಯಾಯವಾಗಿದೆ ಎಂದು ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ ಮಂಡಗಳಲೆ ಆರೋಪಿಸಿದ್ದಾರೆ.
ತಾಳಗುಪ್ಪದಲ್ಲಿ 2005 ನೇ ಇಸ್ವಿಯಿಂದಲೇ ಹೆದ್ದಾರಿ ವಿಸ್ತರಣೆಗಾಗಿ ರಸ್ತೆಯ ಎಡಬಲದಲ್ಲಿ 4೦ ಮೀಟರ್ ಸ್ಥಳದಲ್ಲಿ ಹೊಸ ಕಟ್ಟಡಕ್ಕೆ ಅವಕಾಶ ನೀಡದೆ ಕಾದಿರಿಸಿಕೊಂಡಿದ್ದರೂ ಫಲವತ್ತಾದ ಬತ್ತದ ಗದ್ದೆಯಲ್ಲಿ ಹಾದು ಹೋಗುವ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ್ದಾರೆ. ಇದರಿಂದ ತಾಳಗುಪ್ಪ ಹಾಗೂ ಮರತ್ತೂರು ಗ್ರಾಮಗಳ ಕೆರೆ ಅಚ್ಚುಕಟ್ಟಿನ ನೀರಾವರಿ ಪ್ರದೇಶದಲ್ಲಿರುವ 300ಕ್ಕೂ ಹೆಚ್ಚು ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳ 50 ಕ್ಕೂ ಹೆಚ್ಚು ಎಕರೆ ಫಲವತ್ತಾದ ಭತ್ತದ ಗದ್ದೆ, ಅಡಿಕೆ ತೋಟಗಳು ಬಳಕೆಯಾಗುತ್ತಿದೆ. ಜಮೀನು ಇಭ್ಭಾಗವಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಿ ತಮಗೆ ರಕ್ಷಣೆ ನೀಡಬೇಕೆಂದು ಸಂಸದರಲ್ಲಿ ಹಲವಾರು ಬಾರಿ ಕೇಳಿಕೊಂಡರೂ ರೈತರ ಪರ ನಿಲ್ಲದೆ ಭೂ ಸ್ವಾಧೀನತೆಗೆ ಮುಂದಾಗಿದ್ದಾರೆ.
ರೈಲ್ವೆ ಇಲಾಖೆ 62 ಕೋಟಿ ವೆಚ್ಚದಲ್ಲಿ ನೂರಾರು ಜನರಿಗೆ ಉದ್ಯೋಗಾವಕಾಶಕ್ಕೆ ಕಾರಣವಾಗುವ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಕೊನೆ ಹಂತದಲ್ಲಿ ಯೋಜನೆಯನ್ನು ಕೋಟೆಗಂಗೂರಿಗೆ ಸ್ಥಳಾಂತರಿಸಲಾಯಿತು. ಇದರಲ್ಲಿ ಸಂಸದರ ಕೈವಾಡವಿದ್ದು, ಸಂಸದ ಬಿ.ವೈ ರಾಘವೇಂದ್ರರವರ ವಿನಂತಿಯ ಮೇಲೆ ಉದ್ದೇಶಿತ ಯೋಜನೆಯನ್ನು ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರೆಸ್ನೋಟ್ನಲ್ಲಿ ತಿಳಿಸಲಾಗಿದೆ ಎಂದರು.
ಬಿಜೆಪಿ ಪಕ್ಷವು ಹಿಂದುಳಿದ ವರ್ಗದವರ ಬಗ್ಗೆ ಗೌರವ ಭಾವನೆ ಹೊಂದಿಲ್ಲ. ಅರ್ಹತೆ ಇದ್ದರೂ ಕುಮಾರ ಬಂಗಾರಪ್ಪನವರಿಗೆ ಮಂತ್ರಿಸ್ಥಾನದಿoದ ವಂಚಿಸಿರುವುದು, ಅವರನ್ನು ಮೂಲೆಗುಂಪು ಮಾಡಿರುವುದೇ ಸಾಕ್ಷಿ ಎಂದ ಅವರು ಈ ನೆಲದ ಮಗಳು ಗೀತಾ ಶಿವರಾಜಕುಮಾರರಿಗೆ ಸಾರಾ ಸಗಟಾಗಿ ಮತ ನೀಡಿ, ಗೆಲ್ಲಿಸಿ ಅನ್ಯಾಯವನ್ನು ಹಿಂದುಳಿದ ವರ್ಗದವರು ಸಹಿಸುವುದಿಲ್ಲ ಎನ್ನುವದನ್ನು ಮನದಟ್ಟು ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ