ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡೋಜ ಮನು ಬಳಿಗಾರ ಆಯ್ಕೆ
(BIDAR):ಬಸವಕಲ್ಯಾಣ: ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಹಾರಕೂಡ ಸಂಸ್ಥಾನ ಹಿರೇಮಠದಿಂದ ಪ್ರತಿರ್ವ ನೀಡಲಾಗುವ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ, ನಾಡೋಜ ಮನುಬಳಿಗಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪಿಠಾಧಿಪತಿಗಳಾದ ಶ್ರೀ ಡಾ: ಚನ್ನವೀರ ಶಿವಾಚಾರ್ಯರು ತಿಳಿಸಿದರು.
ತಾಲೂಕಿನ ಹಾರಕೂಡ ಹಿರೇಮಠದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕನ್ನಡ ನಾಡು, ನುಡಿ ರಕ್ಷಣೆಗಾಗಿ ಶ್ರಮಿಸಿದ ಮನುಬಳಿಗಾರ ಅವರನ್ನು 2023ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ 2 ತೊಲಾ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕಹೊಂದಿದೆ ಎಂದು ಮಾಹಿತಿ ನೀಡಿದರು.
ಸಾಹಿತ್ಯ. ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸಿದ ಮಹನಿಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ 2011ರಲ್ಲಿ ಶ್ರೀ ಮಠದಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಇದೆ ಅಕ್ಟೋಬರ್ 23ರಂದು ಹಾರಕೂಡ ಮಠದಲ್ಲಿ ನಡೆಯಲಿರುವ ಶ್ರೀ ಗುರುಲಿಂಗ ಶಿವಾರ್ಚಾಯರ 54ನೇ ಪುಣ್ಯಸ್ಮರಣೋತ್ಸವ ಹಾಗೂ 37ನೇ ಅನುಭವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಶ್ರೀ ಗುರುಲಿಂಗೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ: ಎಸ್.ಎಂ. ಹಿರೇಮಠ ಅವರು ಬರೆದ ವಚನ ವಾಙ್ಮಯದ ವೈಶಿಷ್ಟ್ಯ ಗಳು ಎನ್ನುವ ಗ್ರಂಥ ಬಿಡುಗಡೆ ಜರುಗಲಿದೆ ಎಂದು
ಇದುವರೆಗೆ ನಾಡಿನ ಖ್ಯಾತ ಸಾಹಿತಿಗಳಾದ ಡಾ: ಸಂಗಮೇಶ ಸವದತ್ತಿಮಠ, ಎಲ್.ಬಿಕೆ ಅಲ್ದಾಳ್, ಡಾ: ಪಂಚಾಕ್ಷರಿ ಹಿರೇಮಠ, ಪ್ರೊ. ದೊಡ್ಡ ರಂಗೆಗೌಡ, ಡಾ: ಎಂ.ಜಿ.ನಾಗರಾಜ, ಶ್ರೀಮತಿ ಸಂಗೀತಾ ಕಟ್ಟಿ, ಪ್ರೊ. ಜೆ.ಎಸ್, ಖಂಡೇರಾವ್, ಪಂಡಿತ್ ರಾಜಗುರು ಗುರುಸ್ವಾಮಿ ಕಲಕೇರಿ, ಶ್ರೀ ಗುರುಬಾಬಾ ಹಾರಾಜ ಔಸೆಕರ್, ಡಾ: ಶರಣಬಸವಪ್ಪ ಅಪ್ಪಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಲ್ಲಿನಾಥ ಹಿರೇಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ:- ಉದಯ ಮುಳೆ