ನ್ಯೂಸ್ಶಿವಮೊಗ್ಗ

ಅಭಿವೃದ್ಧಿಯ ಭರಾಟೆಯಲ್ಲಿ ಪ್ರಾಕೃತಿಕ ವಿಕೃತಿ ಸಲ್ಲ,

ಅಭಿವೃದ್ಧಿಯ ಭರಾಟೆಯಲ್ಲಿ ಪ್ರಾಕೃತಿಕ ವಿಕೃತಿ ಸಲ್ಲ,

(SHIVAMOGA): ಸೊರಬ: ಅಭಿವೃದ್ಧಿಯ ಭರಾಟೆಯಲ್ಲಿ ಪ್ರಾಕೃತಿಕ ವಿಕೃತಿ ಸಲ್ಲ, ಪ್ರಕೃತಿಯೊಂದಿಗೆ ಹೊಂದಿಕೊಂಡು ನಡೆಸುವ ಪ್ರಗತಿ ಸುಸ್ಥಿರ ಪ್ರಗತಿಯಾಗುತ್ತದೆ ಎಂದು ನಿವೃತ್ತ ಪ್ರೊಫೆಸರ್ ಹೆಚ್.ಬಿ.ಪಂಚಾಕ್ಷರಯ್ಯ ಹೇಳಿದರು.

ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಕಾಂತಾರ ಯಜ್ಞ ಕೊಪ್ಪಲು, ಭಾರತಿ ಸಂಪದ ಹಾಗೂ ಕಾನೂನು ಸೇವಾ ಸಮಿತಿ ಇನ್ನೂ ಅನೇಕ ಪರಿಸರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವನದಲ್ಲೊಂದು ವಿಶೇಷ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಜೀವನ ಶೈಲಿಯ ವಿಪರೀತ ಬದಲಾವಣೆಯಿಂದ ಪರಿಸರ ಮತ್ತು ಮಾನವನ ಅವಿನಾಭಾವ ಸಂಬಂಧ ಕ್ಷೀಣಿಸಿದೆ. ಭೂಮಿ, ನೀರು ಸ್ವಾರ್ಥಕ್ಕೆ ಬಳಸುವ ಮೂಲಕ ಭವಿಷ್ಯದ ಬದುಕಿಗೆ ಮಾರಕವಾಗುವ ವಿಕೃತಿ ಪ್ರಧಾನವಾಗಿದೆ. ಪ್ರಸ್ತುತ ಜಾಗತಿಕ ತಾಪಮಾನ ಮನುಷ್ಯನ ಬದುಕಿಗೆ ಅದೆಷ್ಟು ಮಾರಕವಾಗಿ ಪರಿಣಮಿಸುತ್ತಿದೆ ಎಂಬುದನ್ನು ಕಾದು ನೋಡಬೇಕಿಲ್ಲ. ಈಗಲೇ ಅನುಭವಿಸುವ ಕಾಲ ಎದುರಾಗಿದೆ ಎಂದ ಅವರು ತಾಪಮಾನ ನಿಯಂತ್ರಣಕ್ಕೆ ಅನುಸರಿಸಬೇಕಾದ ವಿಧಾನ, ಆಡಳಿತದಲ್ಲಿನ ಅವೈಜ್ಞಾನಿಕ ಯೋಜನೆ ಮುಂತಾದ ವಿಷಯಗಳ ಕುರಿತು ಪ್ರಸ್ತಾಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜೆಎಂಎಫ್ಸಿ ನ್ಯಾಯಾಧೀಶ ರಾಜು ಶೆಡಬಾಳ್ಕರ್  ಮುಂಪೀಳಿಗೆಗೆ ಪರಿಸರದ ಬಗ್ಗೆ  ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಂತಾರ ಯಜ್ಞ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪರಿಸರ ಕೆಡಿಸಿಕೊಂಡು ಮನುಷ್ಯ ಬದುಕಲಾರ. ಹಾಗಾಗಿ ಪರಿಸರದೊಂದಿಗೆ ಬದುಕುವ ಕಾಯಕ ಎಲ್ಲರದ್ದಾಗಬೇಕು ಎಂದರು.

ಶಾಲಾ ಮಕ್ಕಳಿಗೆ ಕಾಡು ಗಿಡಮರಗಳನ್ನು ಗುರುತಿಸುವ, ಹಿರಿಯರಿಗೆ ಕಾಡು ಜಾತಿ, ಔಷಧೀಯ ಬಳ್ಳಿ, ಹೂವು, ಕಾಯಿ, ಬೀಜ ಗುರುತಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶಾಲಾ ಮಕ್ಕಳ ವಿಭಾಗದಲ್ಲಿ ವಿಸಂ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಎಚ್.ಆಕಾಶ್, ಎ.ಎಚ್.ಅಭಿ, ಜಿ.ತೇಜಸ್ ಕ್ರಮವಾಗಿ, ಹಿರಿಯರ ವಿಭಾಗದಲ್ಲಿ ಬಿ.ಟಿ.ಪರಮೇಶ್ವರ, ಬಿ.ಎಂ.ಕನ್ನಪ್ಪ, ಹುಚ್ಚಪ್ಪ ಕ್ರಮವಾಗಿ ವಿಜೇತರಾದರು. ನಿರ್ಣಾಯಕರಾಗಿ ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಹೆಗಡೆ, ನಾಟಿವೈದ್ಯ ಕೆ.ಟಿ.ಗೌಡ, ಸಸ್ಯಶಾಸ್ತ್ರ ಉಪನ್ಯಾಸಕಿ ನಂದನ ಟೇಂಬೆ ಪಾಲ್ಗೊಂಡರು.

ಇದೇ ವೇಳೆ ಕರ್ನಾಟಕ ರಾಜ್ಯ ಔಷಧಿ ಪ್ರಾಧಿಕಾರದವರು ಶಾಲಾ ಔಷಧಿ ವನ ಪುಸ್ತಕವನ್ನು ಎಲ್ಲರಿಗೂ ವಿತರಿಸಿದರು.

ಗ್ರಾಮದ ಹಿರಿಯ ಪ್ರಾಜ್ಞ ಅನಂತರಾವ್ ಅಧ್ಯಕ್ಷತೆ ವಹಿಸಿದ್ದರು.

ಕಾಂತಾರಾ ಯಜ್ಞ ಟ್ರಸ್ಟ್ ಅಧ್ಯಕ್ಷ ಸೀತರಾಮ ಶ್ರೀಧರ ಹೆಗಡೆ,  ಪರಿಸರ ಟ್ರಸ್ಟ್ ಅಧ್ಯಕ್ಷ ಎಂ.ಆರ್ .ಪಾಟೀಲ್, ಹಿರಿಯ ವಕೀಲ ಎಂ. ನಾಗಪ್ಪ, ಮಂಜುನಾಥ್ ಹೆಗಡೆ, ವಕೀಲ ಕಾಶಿನಾಥ್, ಅಶೋಕ್ ವಿ. ಗುಡ್ಡೆ, ಜೇನು ಕೃಷಿಕ, ಉಪನ್ಯಾಸಕ ವಿಘ್ನೇಶ್, ಶಿಕಾರಿಪುರ ಸರ್ವಜ್ಞ ಪತ್ರಿಕೆಯ ಹಿರಿಯ ಪತ್ರಕರ್ತ ಎಸ್.ಬಿ.ಮಠದ್, ನಿವೃತ್ತ ಅರಣ್ಯ ರಕ್ಷಕ ನಾರಾಯಣಪ್ಪ, ಶ್ರೀಲಕ್ಷ್ಮೀ, ಪತಂಜಲಿ ಯೋಗ ಟೀಂ, ಪರಿಸರಾಸಕ್ತರು. ವಿಸಂ ಪ್ರೌಢ ಶಾಲೆ ಶಿಕ್ಷಕರು, ಗ್ರಾಮಸ್ಥರು, ಶ್ರೀಧರಹೆಗಡೆ ಕುಟುಂಬದವರು ಇದ್ದರು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code