ನವರಾತ್ರಿ ಜನಜಾಗೃತಿ ಧರ್ಮಸಭೆ, ಮದ್ಯ ಮಾರಾಟ ನಿಷೇಧ.
(CHIKKAMAGALURU): ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಹದಿನಾಲ್ಕನೇ ವರ್ಷದ ದುರ್ಗಾ ಪೂಜಾ ಮಹೋತ್ಸವದ ಅಂಗವಾಗಿ ಅ.23ರ ಸೋಮವಾರ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 1೦ರಿಂದ ಮಧ್ಯಾಹ್ನ 1ರವರೆಗೆ ಸಿಂಹವಾಹಿನಿ ರಾಜರಾಜೇಶ್ವರಿ ಪೂಜಾ ಪಾರಾಯಣ, ಶ್ರೀದೇವಿ ಸನ್ನಿಧಿಯಲ್ಲಿ ಆಯುಧ ಪೂಜೆ ನಡೆಯಲಿದೆ.
ಸಂಜೆ 7 ಗಂಟೆಗೆ ನವರಾತ್ರಿ ಜನಜಾಗೃತಿ ಧರ್ಮಸಭೆ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ವಿಜಯಪುರ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತೆ ಡಾ. ಬಿ.ಮಂಜಮ್ಮ ಜೋಗತಿ ಅವರಿಗೆ ದುರ್ಗಾದೇವಿ ಶ್ರೀರಕ್ಷೆ ಪ್ರಧಾನ ಮಾಡಿ ಗೌರವಿಸಲಾಗುವುದು.
ಸಮಾರಂಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ, ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ಕಾರ್ಯಾಧ್ಯಕ್ಷ ವೈ.ಮೋಹನ್ಕುಮಾರ್ ತಿಳಿಸಿದ್ದಾರೆ.
ರಾತ್ರಿ 8 ಗಂಟೆಗೆ ಭಕ್ತಾದಿಗಳಿಂದ ವಿವಿಧ ಪೂಜಾ ಸೇವೆ, ಮಹಾಮಂಗಳಾರತಿ ನಡೆಯಲಿದೆ. ನಂತರ ಕಾರ್ಕಳ ಸಿರಿಬೈಲಿನ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ.
ಸಿದ್ಧಲಿಂಗ ದೇವರು
ಮಂಜಮ್ಮ ಜೋಗತಿ.
ಅ.24ರಂದು ಬೆಳಿಗ್ಗೆ 7 ರಿಂದ ಗಜವಾಹಿನಿ, ಶ್ರೀ ಗಜಲಕ್ಷ್ಮೀ ಪೂಜಾ ಪಾರಾಯಣ, ದುರ್ಗಾಹೋಮ ನಡೆಯಲಿದೆ. ಬೆಳಿಗ್ಗೆ 9.3೦ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು, ಸುಮಾರು 15 ಸಾವಿರ ಭಕ್ತರಿಗೆ ಅನ್ನ ದಾಸೋಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಧ್ಯಾಹ್ನ 2.3೦ರಿಂದ ದುರ್ಗಾದೇವಿಯ ಜಲಸ್ತಂಭನಾ ಶೋಭಾಯಾತ್ರೆಯು ಆರಂಭಗೊಂಡು, 2೦ಕ್ಕೂ ಅಧಿಕ ಕಲಾತಂಡಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ಭದ್ರಾನದಿಯಲ್ಲಿ ದುರ್ಗಾದೇವಿ ವಿಗ್ರಹವನ್ನು ಜಲಸ್ತಂಭನೆಗೊಳಿಸಲಾಗುವುದು ಎಂದು ಮೋಹನ್ಕುಮಾರ್ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ: ಪಟ್ಟಣದಲ್ಲಿ ದುರ್ಗಾದೇವಿ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಅ.24ರಂದು ಬಾಳೆಹೊನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧದ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ಅ.24ರ ಬೆಳಿಗ್ಗೆ 6 ಗಂಟೆಯಿಂದ ಅ.25ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಬೀರ್, ಮದ್ಯಸಾರ ಹಾಗೂ ಇತ್ಯಾದಿ ಅಬಕಾರಿ ಪದಾರ್ಥಗಳ ಮಾರಾಟ, ಶೇಖರಣೆ, ತಯಾರಿಕೆ ಹಾಗೂ ಸಾಗಾಟವನ್ನು ನಿಷೇಧಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವದಲ್ಲಿ ಶನಿವಾರ ಉಡುಪಿ ಕಲಾಮಯಂ ತಂಡದಿಂದ ವಿವಿಧ ಜಾನಪದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ನಡೆಯಿತು.
ದುರ್ಗಾದೇವಿಗೆ ವಿಶೇಷ ಹೂವಿನ ಪೂಜೆ
ಬಾಳೆಹೊನ್ನೂರು: ಇಲ್ಲಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಹದಿನಾಲ್ಕನೇ ವರ್ಷದ ದುರ್ಗಾಪೂಜೆ ಅಂಗವಾಗಿ ಭಾನುವಾರ ದುರ್ಗಾದೇವಿಗೆ ವಿಶೇಷ ಹೂವಿನ ಪೂಜೆ ನಡೆಸಲಾಯಿತು.
ನವರಾತ್ರಿಯ ಅಷ್ಟಮಿ ದಿನದಂದು ದೇವಿಯು ಮಹಾದುರ್ಗೆಯಾಗಿ ಸರ್ವಾಲಂಕಾರಭೂಷಿತಳಾಗಿ ದೇವಲೋಕದಲ್ಲಿ ದೇವತೆಗಳಿಗೆ ಅಭಯ ನೀಡಿದ ದಿನವಾಗಿರುವುದರಿಂದ ಭಕ್ತರ ವತಿಯಿಂದ ನಾನಾ ಸುಗಂಧಭರಿತ ಪುಷ್ಪಗಳಿಂದ ಅಲಂಕರಿಸಿ ಆರಾಧಿಸಲಾಯಿತು. ಬೆಳಿಗ್ಗೆ ದುರ್ಗೆಗೆ ವಿಶೇಷ ಅಲಂಕಾರ ಮಾಡಿ, ದುರ್ಗಾರೂಪಿಣಿ ಪೂಜಾ ಪಾರಾಯಣ ನಡೆಸಲಾಯಿತು. ಅರ್ಚಕ ಸುಬ್ರಮಣ್ಯ ಭಟ್ ಸಂಗಡಿಗರು ಪೂಜಾ ವಿಧಿಗಳನ್ನು ನೆರವೇರಿಸಿದರು.
ಹೂವಿನ ಪೂಜೆ ಅಂಗವಾಗಿ ದೇವಾಲಯದ ಆವರಣವನ್ನು ನಾನಾ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಗಮನಸೆಳೆಯಿತು. ಏಳ್ಳಾರೆಯ ಲಕ್ಷ್ಮಿ ಜನಾರ್ಧನ ಭಜನಾ ಮಂಡಳಿ ಸದಸ್ಯರಿಂದ ವಿಶೇಷ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.