ಚಿಕ್ಕಮಗಳೂರುನ್ಯೂಸ್

ಮಾಗುಂಡಿ-ಬಾಳೆಹೊನ್ನೂರು ರಸ್ತೆಗೆ ಅಭಿವೃದ್ಧಿಗೆ ಶಾಸಕರ ನಿರ್ಲಕ್ಷ್ಯ

ಮಾಗುಂಡಿ-ಬಾಳೆಹೊನ್ನೂರು ರಸ್ತೆಗೆ ಅಭಿವೃದ್ಧಿಗೆ ಶಾಸಕರ ನಿರ್ಲಕ್ಷ್ಯ


(CHIKKAMAGALURU): ರಸ್ತೆ ಅಭಿವೃದ್ಧಿಯಾಗದಿದ್ದರೆ ಬಿಜೆಪಿಯಿಂದ ಹೋರಾಟ: ಭಾಸ್ಕರ್ ಬಾಳೆಹೊನ್ನೂರು : ಶೃಂಗೇರಿ ಕ್ಷೇತ್ರದ ಮಾಗುಂಡಿಯಿಂದ ಬಾಳೆಹೊನ್ನೂರು ತಲುಪುವ ರಸ್ತೆಯ ಅಭಿವೃದ್ಧಿಗೆ ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ಶಾಸಕರು ನಿರ್ಲಕ್ಷ್ಯ ವಹಿಸಿದ್ದು, ಶಾಸಕರ ಧೋರಣೆಯಿಂದ ವಾಹನ ಚಾಲಕರು, ಪ್ರಯಾಣಿಕರು ಹಿಡಿ ಶಾಪ ಹಾಕುವಂತೆ ಆಗಿದೆ ಎಂದು ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ದೂರಿದ್ದಾರೆ.


ಬಾಳೆಹೊನ್ನೂರಿನಿಂದ ಮಾಗುಂಡಿ ತಲುಪುವ ಸುಮಾರು 10 ಕಿಲೋ ಮೀಟರ್ ರಸ್ತೆಯು ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಹಾಳಾಗಿದ್ದು, ಇದರ ಅಭಿವೃದ್ಧಿ ಮಾಡಬೇಕು ಎಂಬ ಕನಿಷ್ಠ ಸೌಜನ್ಯವೂ ಶಾಸಕರಿಗೆ ಇಲ್ಲವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಹಾನ್‌ಬಾಳು- ಮುಡುಬ ಕೊಗಾಳ್ ಕ್ರಾಸ್ ರಾಜ್ಯ ಹೆದ್ದಾರಿ (ಎಸ್‌ಹೆಚ್ 252) ವ್ಯಾಪ್ತಿಗೆ ಮಾಗುಂಡಿ-ಬಾಳೆಹೊನ್ನೂರು ರಸ್ತೆಯು ಒಳಪಡಲಿದ್ದು, ಈ ವರ್ಷ ಸುರಿದ ನಿರಂತರ ಮಳೆಗೆ ರಸ್ತೆ ಸಾಕಷ್ಟು ಹಾನಿಯಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಹಾಗೂ ಬಿಜೆಪಿ ಶಾಸಕರ ಅವಧಿಯಲ್ಲಿ ಈ ರಸ್ತೆಯನ್ನು ಉತ್ತಮವಾಗಿ ಡಾಂಬರೀಕರಣ ಮಾಡಿದ್ದು, ನಂತರದ ದಿನಗಳಲ್ಲಿ ರಸ್ತೆ ಅಭಿವೃದ್ಧಿಯಾಗಿಲ್ಲ.

ಹತ್ತು ಕಿಲೋ ಮೀಟರ್ ಉದ್ದಕ್ಕೂ ರಸ್ತೆಯಲ್ಲಿ ಬಾರೀ ಪ್ರಮಾಣದ ಹೊಂಡ, ಗುಂಡಿಗಳು ಬಿದ್ದಿದ್ದು, ವಾಹನ ಚಾಲಕರು ನಿತ್ಯವೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಲೇ ವಾಹನ ಚಾಲನೆ ಮಾಡುತ್ತಿದ್ದಾರೆ. ಹಲವು ವಾಹನಗಳು   ಗುಂಡಿಗಳಿಂದ ಅಪಘಾತಗೊಳ್ಳುವುದು, ಹಾಳಾಗುವುದು ನಿರಂತರವಾಗಿ ನಡೆಯುತ್ತಿದೆ.
ರಸ್ತೆ ಅಭಿವೃದ್ಧಿಗೆ ಶಾಸಕರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಹ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೇವಲ ಭರವಸೆಗಳನ್ನು ಜನರಿಗೆ ನೀಡುತ್ತಿದ್ದಾರೆ. ಮಾಗುಂಡಿ, ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿ ಈ ಭಾಗದ ಮತದಾರರು ರಾಜೇಗೌಡರು ಜಯಶಾಲಿಯಾಗುವಂತೆ ಮಾಡಿದರೂ ಸಹ ಈ ಭಾಗಕ್ಕೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.
ಜಕ್ಕಣಕ್ಕಿ ಜಾಕ್ಸನ್ ಶಾಲೆಯ ಸಮೀಪದ ಮುಖ್ಯರಸ್ತೆಯಲ್ಲಿ ಸೇತುವೆ ಶಿಥಿಲಗೊಂಡಿದ್ದು, ವಾಹನ, ಜನರು ಪ್ರಾಣಾಪಾಯದಿಂದಲೇ ಈ ಸೇತುವೆ ಮೇಲೆ ದಿನವೂ ಸಂಚರಿಸುತ್ತಿದ್ದಾರೆ. ಇದಲ್ಲದೇ ಹಲವು ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಕುಸಿತಗೊಂಡಿದ್ದು, ರಾತ್ರಿ ವೇಳೆ ವಾಹನಗಳು ಗುಂಡಿ ಬೀಳುವ ಆತಂಕ ಎದುರಾಗಿದೆ.


ಶಾಸಕರು ಈ ರಸ್ತೆಯಲ್ಲಿ ಹಲವಾರು ಬಾರಿ ಸಂಚರಿಸುತ್ತಿದ್ದರೂ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಬಾಳೆಹೊನ್ನೂರು-ಮಾಗುಂಡಿ ರಸ್ತೆಯು ಕಳಸ, ಹೊರನಾಡು, ಧರ್ಮಸ್ಥಳ, ಕೊಟ್ಟಿಗೆಹಾರ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಮುಂತಾದ ಕಡೆಗಳಿಗೆ ಸಂಪರ್ಕ ಕಲಿಸುವ ರಸ್ತೆಯಾಗಿದ್ದು ನಿತ್ಯವೂ ಸಾವಿರಾರು ಜನ ಪ್ರವಾಸಿಗರು, ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ.
ಆದರೂ ಕೂಡ ಶಾಸಕರು ಈ ರಸ್ತೆ ಅಭಿವೃದ್ಧಿ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯವಾಗಿದೆ. ಮಳೆಗಾಲ ಮುಕ್ತಾಯಗೊಂಡು ತಿಂಗಳುಗಳೇ ಕಳೆದಿದ್ದರೂ ರಸ್ತೆ ಅಭಿವೃದ್ಧಿ ಬಗ್ಗೆ ಚಕಾರವೆತ್ತುತ್ತಿಲ್ಲ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಬಿಜೆಪಿ ಪಕ್ಷದಿಂದ ರಸ್ತೆ ತಡೆ, ಪ್ರತಿಭಟನೆ ಸೇರಿದಂತೆ ಗಂಭೀರ ಹೋರಾಟ ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

Leave a Reply

Your email address will not be published. Required fields are marked *

Scan the code