ನ. 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸರಕಾರ ತಮ್ಮ ಬೇಡಿಕೆ ಈಡೇರಿಸದೆ ಕಚೇರಿಗೆ ಬಂದು ಕೆಲಸ ಮಾಡುವುದಿಲ್ಲ
(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರದ ವಿವಿಧ ಬೇಡಿಕೆ ಈಡೇರಿಕೆಗಾಗಿ ತಾಲೂಕು ವ್ಯಾಪ್ತಿಯ ಎಲ್ಲ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಪಶು ಸಖಿ ಹಾಗೂ ಕೃಷಿ ಸಖಿಯರು ನ. 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸರಕಾರ ತಮ್ಮ ಬೇಡಿಕೆ ಈಡೇರಿಸದೆ ಕಚೇರಿಗೆ ಬಂದು ಕೆಲಸ ಮಾಡುವುದಿಲ್ಲ ಎಂದು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಎಲ್ಲ ಗ್ರಾಪಂ ಒಕ್ಕೂಟದ ಸಿಬ್ಬಂದಿಗಳಿಗೆ ಸರಕಾರವು ಗೌರವ ಧನ ನೀಡುತ್ತಿದ್ದು, ಇದನ್ನು ವೇತನವಾಗಿ ಪರಿಷ್ಕರಿಸಬೇಕು, ಸರಕಾರಿ ಉದ್ಯೋಗಿಗಳಿಗೆ ನೀಡುವಂತೆಯೇ ಕನಿಷ್ಟ ವೇತನ ನೀಡಬೇಕು ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ತಾಲೂಕು ವ್ಯಾಪ್ತಿಯ ಒಕ್ಕೂಟದ ಎಲ್ಲ ಸಿಬ್ಬಂದಿಗಳೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಯಾವುದೇ ವರದಿಯನ್ನೂ ಕಳುಹಿಸುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯು ರಾಜ್ಯಾದ್ಯಂತ ಸೋಮವಾರದಿಂದ ನ. 11ರಿಂದ ಪ್ರಾರಂಭವಾಗಿದ್ದು, ತಾಲೂಕು ಮಟ್ಟದ ಗ್ರಾಮ ಪಂಚಾಯತಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಪಶು ಸಖಿ ಹಾಗೂ ಕೃಷಿ ಸಖಿಯರು ತಾಲೂಕು ಪಂಚಾಯತಿ ಎದುರು ಪ್ರತಿಭನೆ ನಡೆಸಿ, ತಮ್ಮ ಬೇಡಿಕೆಗಳಿಗೆ ಸ್ಪಂದಿಸುವoತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಸ್ಥೆ ವೀಣಾ, ಶಶಿಕಲಾ, ಆಶಾ, ರವಿಕಲಾ, ಪವಿತ್ರ, ಚೇತನ, ಮಂಜುಳಾ, ಸುವರ್ಣ ಸೇರಿದಂತೆ, ತಾಲೂಕು ವ್ಯಾಪ್ತಿಯ ಎಲ್ಲ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಪಶು ಸಖಿ ಹಾಗೂ ಕೃಷಿ ಸಖಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ