ನ್ಯೂಸ್ಶಿವಮೊಗ್ಗ

ಜನವರಿ 21 ರಂದು, ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆಯ ರಾಜ್ಯಮಟ್ಟದ ವಿಚಾರ ಸಂಕಿರಣ.

ಜನವರಿ 21 ರಂದು, ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆಯ ರಾಜ್ಯಮಟ್ಟದ ವಿಚಾರ ಸಂಕಿರಣ.

(SHIVAMOGA): ಸೊರಬ: ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆಯ ಕಾರ್ಯತಂತ್ರ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಸಾಗರದ ಎಲ್ ಬಿ ಕಾಲೇಜು ಸಭಾಂಗಣದಲ್ಲಿ ಜನವರಿ 21 ರಂದು ನಡೆಯಲಿದೆ ಎಂದು ಕರ್ನಾಟಕ ವೃಕ್ಷಲಕ್ಷ ಆಂದೋಲನದ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪಾರಂಪರಿಕ ಐತಿಹಾಸಿಕ ಮೌಲ್ಯ ಇರುವ  ರಾಜರ ಕಾಲದ ಕೋಟೆ, ಅರಣ್ಯಗಳು ಹಾಗೂ ಕೆರೆಗಳ ಇಂದಿನ ಪರಿಸ್ಥಿತಿ ಹಾಗೂ ರಕ್ಷಣಾ ಕ್ರಮಗಳು ಬಗ್ಗೆ ತಜ್ಞ ಮಂಥನ ವಿಚಾರ ಸಂಕಿರಣದಲ್ಲಿ ನಡೆಯಲಿದೆ. ಕೋಟೆ ಕಾಡುಗಳು, ಕೋಟೆ ಕೆರೆಗಳ ಸಂರಕ್ಷಣೆಯ ಕಾರ್ಯತಂತ್ರ ಎಂಬ ವಿನೂತನ ವಿಷಯದ ಮೇಲೆ ಸಮಾಲೋಚನೆ, ಸಂವಾದ ನಡೆಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ. ಸೋಂದಾ, ಬನವಾಸಿ, ಇಕ್ಕೇರಿ, ಕಾನೂರು, ಜಡೆ, ನಗರ, ಅಘನಾಶಿನಿ, ಮಿರ್ಜಾನ ಕೋಟೆಗಳ ಸುತ್ತ ಕೆರೆ, ಕಾನು, ಕಾಡು, ದೇವರಕಾಡುಗಳಿವೆ. ಕೆಲವೆಡೆ ರಕ್ಷಣೆ ಸಿಕ್ಕಿದೆ. ಹಲವೆಡೆ ಈ ಕೋಟೆ ಕಾಡುಗಳು ವಿನಾಶದ ಅಂಚಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇತಿಹಾಸ ತಜ್ಞರು, ಪರಿಸರ ಕಾರ್ಯಕರ್ತರು ಪ್ರಾಚ್ಯವಸ್ತು ಇಲಾಖೆ, ಅರಣ್ಯ ಇಲಾಖೆಯವರು ಸೇರಿ ಕೋಟೆ ಕಾಡುಗಳ ಉಳಿವಿಗೆ ಕಾರ್ಯತಂತ್ರ ರೂಪಿಸಲು ವಿಶೇಷ ಗೋಷ್ಠಿ ನಡೆಸಲಿದ್ದಾರೆ.

ಊರಿನ ಸುತ್ತ ಕಂದಕ, ಕೆರೆ, ಮಧ್ಯೆ ಕಾಡು, ಐತಿಹಾಸಿಕ ಗುರುತುಗಳು ಇಲ್ಲಿ ಕಾಣಸಿಗುತ್ತವೆ. ಕೆಲವೆಡೆ
ಶಾಸನಗಳಿವೆ. ಭಾರತೀಯ ಪರಂಪರೆಯಲ್ಲಿ ಈ ಎಲ್ಲ ಸ್ಥಳಗಳೂ ಐತಿಹಾಸಿಕ ನೈಸರ್ಗಿಕ ಪವಿತ್ರ ತಾಣಗಳಾಗಿವೆ ಎಂಬ ಸಮೀಕ್ಷೆ ಆಗಬೇಕಿದೆ. ಮಾಹಿತಿ ಸಂಗ್ರಹ ಆಗಬೇಕು. ಸಂರಕ್ಷಣೆಗೆ ಮುಂದಾದ ಸ್ಥಳೀಯ ರೈತರು, .ಕಾರ್ಯಕರ್ತರ ಸಹಯೋಗ ಇವೆಲ್ಲಕ್ಕಾಗಿ ಜಾಗೃತಿ ಅಭಿಯಾನ, ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ ಹೀಗೆ ಕಾರ್ಯಕ್ರಮ ಸರಣಿ ನಿಶ್ಚಯಿಸಬೇಕು. ಇತಿಹಾಸ ತಜ್ಞರು, ಅಧ್ಯಯನಕಾರರ ಜೊತೆ ಪರಿಸರ ಕಾರ್ಯಕರ್ತರು ಜೊತೆಗೂಡಿ ಮಲೆನಾಡಿನ ಅನನ್ಯ ನಿಸರ್ಗ ಭಂಡಾರದ ಉಳಿವಿಗೆ ಕಾರ್ಯತಂತ್ರ ರೂಪಿಸುವ, ಜೀವವೈವಿಧ್ಯ, ಜಲ, ಅರಣ್ಯ, ಇತಿಹಾಸ, ಪರಂಪರೆ, ಪಶ್ಚಿಮಘಟ್ಟ, ಸಂಶೋಧನೆ, ಸಂರಕ್ಷಣಾ ಕಾರ್ಯತಂತ್ರ, ಇವೆಲ್ಲ ಮೇಳೈಸುವ ಸಮಗ್ರ ಸುಸ್ಥಿರ ಅಭಿವೃಧ್ಧಿ ವಿಷಯ ಕುರಿತ ವಿಚಾರ ಸಂಕಿರಣ ಇದಾಗಿದೆ ಎಂದಿದ್ದಾರೆ.

ವೃಕ್ಷಲಕ್ಷ ಆಂದೋಲನ, ಮರಡವಳ್ಳಿ ಗ್ರಾಮ ಅರಣ್ಯ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರ ಇವರ ಸಹಕಾರದಲ್ಲಿ ನಡೆವ ವಿಚಾರ ಸಂಕಿರಣದಲ್ಲಿ  ನಡೆಯಲಿದೆ. ಡಾ||ಶೇಜೇಶ್ವರ್ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಇವರು ಉದ್ಘಾಟಿಸಲಿದ್ದಾರೆ. ಡಾ|| ಸುಭಾಷ್ ಮಾಳ್ಕೇಡ್ ಪಿ.ಸಿ.ಸಿ.ಎಫ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ.  ಅನಂತ ಹೆಗಡೆ ಅಶೀಸರ ಅಧ್ಯಕ್ಷತೆ ವಹಿಸುತ್ತಾರೆ. ಎಫ್. ಆರ್. ಎಲ್ ಹೆಚ್.ಟಿ. ಯೋಜನಾ ಅಧಿಕಾರಿಗಳು ಡಾ|| ಬಿ.ಎಸ್. ಸೋಮಶೇಖರ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಾಗರ ಡಿಸಿಎಫ್  ಮೋಹನ್ ಕುಮಾರ್, ಇಒ ಬಿ.ಎಲ್.ಶಿವಪ್ರಕಾಶ್, ಡಾ|| ಬಾಲಚಂದ್ರ ಸಾಯಿಮನೆ, ಡಾ|| ಪ್ರಕಾಶ ಮೇಸ್ತಾ, ರಘುನಂದನ ಭಟ್, ರತ್ನಾಕರ ಬಾಡಲಕೊಪ್ಪ, ಡಾ||ವೆಂಕಟೇಶ್ ಜೋಯಿಸ್, ಡಾ||ಪ್ರೀತಮ್, ನರಸಿಂಹ ಸಾತೊಡ್ಡಿ, ಗಣಪತಿ ಹುಲಿಮನೆ, ರಮೇಶ್ ಹಿರೆಜಂಬೂರು, ಮಂಜಪ್ಪ ಚುರ್ಚುಗುಂಡಿ, ಆನೆಗುಳಿ ಸುಬ್ರಾವ್, ತಜ್ಞರು, ಅಧ್ಯಯನ ಕಾರರು ಅಭಿಪ್ರಾಯ ಮಂಡಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆ.ವೆಂಕಟೇಶ್ 9844277772 ಇವರನ್ನು ಸಂಪರ್ಕಿಸಬಹುದು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code