ಕೋಲಾರನ್ಯೂಸ್

ಅ.29ರ ಮಂಗಳವಾರ ನಷ್ಟ ಬೆಳೆ ಸಮೇತ ರೈಲ್ವೇ ಇಲಾಖೆ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನ

ಅ.29ರ ಮಂಗಳವಾರ ನಷ್ಟ ಬೆಳೆ ಸಮೇತ ರೈಲ್ವೇ ಇಲಾಖೆ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನ

(KOLARA): ಬಂಗಾರಪೇಟೆ: ಅವೈಜ್ಞಾನಿಕ ಅಂಡರ್ ಪಾಸ್ ಗಳಿಗೆ ಮುಕ್ತಿ ನೀಡಿ ಹಿಂಗಾರುಮಳೆ ಆರ್ಭಟದಿಂದ ತತ್ತರಿಸಿರುವ ರಾಜ್ಯದ ಜನರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಅ.29ರ ಮಂಗಳವಾರ ನಷ್ಟ ಬೆಳೆ ಸಮೇತ ರೈಲ್ವೇ ಇಲಾಖೆ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮುಂಗಾರು ಮಳೆ ಹಿನ್ನಡೆಯಾಗಿ ಹಿಂಗಾರು ಮಳೆ ಆರ್ಭಟಕ್ಕೆ ರಾಜ್ಯದ ಜನಸಾಮಾನ್ಯರ ಬದುಕು ನೀರುಪಾಲು ಆಗುವ ಜೊತೆಗೆ ರೈತ ಕೂಲಿಕಾರ್ಮಿಕರ ಜೀವನ ಅಸ್ತವ್ಯಸ್ತವಾಗುತ್ತಿದೆ.
ನಿಲ್ಲದ ಮಳೆರಾಯನ ಕೋಪಕ್ಕೆ ದುಡಿಯುವ ಕೈಗೆ ಕೆಲಸವಿಲ್ಲದೆ ರೈತರು ಬೆಳೆದ ಬೆಳೆಗಳಿಗೆ ರೋಗ ನಿಯಂತ್ರಣಕ್ಕೆ ಬಾರದೆ ಹಾಕಿದ ಬಂಡವಾಳ ಕೈಗೆ ಬಾರದೆ ಖಾಸಗಿ ಸಾಲಕ್ಕೆ ಸಿಲುಕಿ ನಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಮೂರು ಪಕ್ಷದ ಜನಪ್ರತಿನಿಧಿಗಳು ಉಪಚುನಾವಣೆ ಒಳಮೀಸಲು, ಜಾತಿಗಣತಿ ಹಾಗೂ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಪ್ರತಿನಿತ್ಯ ಬೀದಿ ನಾಯಿಗಳಂತೆ ಕಚ್ಚಾಡಿಕೊಂಡು ಸಂವಿಧಾನದ ಆಶಯವನ್ನು ಮರೆತು ಮಳೆಯಿಂದ ತತ್ತರಿಸಿರುವ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ವಿಫಲವಾಗಿದ್ದಾರೆಂದು ಆರೋಪಿಸಿದರು.
ನಷ್ಟ ಪರಿಹಾರ ನೀಡುತ್ತೇವೆ ಅಧಿಕಾರಿಗಳು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಮಾಡಿದ್ದೇವೆಂದು ಭರವಸೆ ಕೊಡುವ ಮುಖ್ಯಮಂತ್ರಿಗಳ ಪರಿಹಾರದ ಹಣ ಅಧಿಕಾರಿಗಳ ಕೈ ಬದಲಾಗಿ ರೈತರ ಖಾತೆಗಳಿಗೆ ಸೇರುವ ನಿರೀಕ್ಷೆಯಲ್ಲಿ ರೈತರು ಇರುತ್ತಾರೆ. ಆದರೆ ಪರಿಹಾರವೂ ಇಲ್ಲ ಸರ್ಕಾರದ ಆದೇಶಕ್ಕೆ ಬೆಲೆಯೂ ಇಲ್ಲದಂತಾಗಿದೆ.


ಇದರ ಜೊತೆಗೆ ಕೃಷಿ ಕ್ಷೇತ್ರ ಅತ್ಯಂತ ಸೂಕ್ಷ್ಮ ವಲಯ. ಉತ್ತಮ ಮಳೆಯಾದರಷ್ಟೇ ರೈತರು ಖುಷಿಯಾಗಿರುತ್ತಾರೆ. ಕಂಡಕಂಡತೆಲ್ಲಾ ಮಳೆಯಾದರೂ ಕಷ್ಟ. ಮಳೆ ಬಾರದಿದ್ದರೂ ಕಷ್ಟ. ಅಂತಹ ಸವಾಲುಗಳನ್ನು ಮೀರಿ ರೈತ ಕೃಷಿ ಮಾಡಿ ದೇಶದ ಹೊಟ್ಟೆ ತುಂಬಿಸುತ್ತಾನೆ. ಅನ್ನದಾತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ಪ್ರತಿವರ್ಷ ಮುಂಗಾರು ಹಿಂಗಾರು ಮಳೆಯಿಂದ ರೈಲ್ವೇ ಇಲಾಖೆ ಅಭಿವೃದ್ಧಿಪಡಿಸಿರುವ ಜಿಲ್ಲೆಯ ಅಂಡರ್ ಪಾಸ್ ಗಳು ಈಜುಕೊಳಗಳಾಗಿ ಮಾರ್ಪಟ್ಟು ಹಳ್ಳಿಯಿಂದ ಹಳ್ಳಿಗೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ಅಂಡರ್ ಪಾಸ್ ಗಳಿಗೆ ಮೇಲ್ಛಾವಣಿ ಹಾಕಿ ಮಳೆ ನೀರು ಬಾರದಂತೆ ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುವ ಮುಖಾಂತರ ಕೋಟಿಕೋಟಿ ಹಣವನ್ನು ಲೂಟಿ ಮಾಡುವ ದಂಧೆಯಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ರೈಲ್ವೇ ಟ್ರಾಕ್ ಗಳಲ್ಲಿ ಕೆಲವು ಕಡೆ ನಗರಸಭೆ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಕಸವನ್ನು ಸುರಿದು ದನಕರುಗಳು, ಮಕ್ಕಳು ಆಟವಾಡುವ ಜೊತೆಗೆ ರಾತ್ರಿಯಾದರೆ ರೈಲ್ವೇ ಟ್ರಾಕ್ ಗಳ ಮೇಲೆ ಕುಳಿತು ಮದ್ಯಪಾನ ಮಾಡುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆರೋಪಿಸಿದರು.


ಅಂಡರ್‌ಪಾಸ್‌ಗಳಲ್ಲಿ ನೀರು ಸರಾಗವಾಗಿ ಹರಿಯಲಾಗದೆ ತುಂಬಿತುಳುಕುತ್ತಿರುವುದರಿಂದ ರೈತರ ತರಕಾರಿ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆಯಾಗುತ್ತಿರುವ ಜೊತೆಗೆ ಹಿಂಗಾರು ಮಳೆ ಆರ್ಭಟಕ್ಕೆ ತತ್ತರಿಸಿರುವ ರಾಜ್ಯದ ರೈತರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ರೈತಸಂಘದಿಂದ ಅ.29ರ ಮಂಗಳವಾರ ನಷ್ಟ ಬೆಳೆ ಸಮೇತ ರೈಲ್ವೇ ಇಲಾಖೆ ಮುತ್ತಿಗೆ ಹಾಕುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಕದಿರಿನತ್ತ ಅಪ್ಪೋಜಿರಾವ್, ಕಾಮಸಮುದ್ರ ಮುನಿಕೃಷ್ಣ, ವಿಶ್ವ, ಮುನಿರಾಜು, ಚಾಂದ್ ಪಾಷ, ಮುನಿಯಪ್ಪ, ಕೃಷ್ಣಪ್ಪ, ವೇಣು, ಯಲ್ಲಣ್ಣ, ತಿಮ್ಮಣ್ಣ, ಶಿವಾರೆಡ್ಡಿ, ಗಿರೀಶ್, ರತ್ನಮ್ಮ, ಸೌಭಾಗ್ಯಮ್ಮ, ಗೌರಮ್ಮ, ವೆಂಕಟಮ್ಮ, ರತ್ನವೇಣಿ ಮುಂತಾದವರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code