ಸಮಾಜದ ಪ್ರತಿಭಾವಂತರಿಗೆ ವೇದಿಕೆ ಹಾಕಿ ಕೊಡುವುದು ನಮ್ಮ ಉದ್ದೇಶವಾಗಿದೆ.
(SHIVAMOGA): ಸಾಗರ , ಸಮಾಜದ ಪ್ರತಿಭಾವಂತರಿಗೆ ವೇದಿಕೆ ಹಾಕಿ ಕೊಡುವುದು ನಮ್ಮ ಉದ್ದೇಶವಾಗಿದ್ದು, ಹಿರಿ-ಕಿರಿಯ ಆಟಗಾರರು ಕಲೆತು ಕಲಿಯಲು ಅವಕಾಶ ಸಿಗುತ್ತದೆ ಎಂದು ಕೇರಂ ಮಿತ್ರ ಮಂಡಳಿ ಅಧ್ಯಕ್ಷ ಗುರುದತ್ತ ಶರ್ಮಾ ಹೇಳಿದರು.
ತಾಲೂಕಿನ ವರದಾಮೂಲದಲ್ಲಿ ಸೋಮವಾರ ಕೇರಂ ಮಿತ್ರ ಮಂಡಳಿ ಆಯೋಜಿಸಿದ್ದ 3 ದಿನದ ರಾಜ್ಯ ಮಟ್ಟದ ಹವ್ಯಕ ಕೇರಂ ಪಂದ್ಯಾವಳಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಬಾರಿಯೂ ಹೊಸ ರೀತಿಯಲ್ಲಿ ಪಂದ್ಯಾವಳಿ ಆಯೋಜಿಸಿದಾಗ ಹೊಸ ಪ್ರತಿಭೆ ಅನಾವರಣವಾಗುತ್ತಿದೆ. ಸಾಕಷ್ಟು ಹಿರಿಕಿರಿಯ ಆಟಗಾರರು ಇಲ್ಲಿಗೆ ಬರುತ್ತಿದ್ದು, ಪ್ರಶಸ್ತಿಯ ಮೊತ್ತಕ್ಕಿಂತ ನಮ್ಮ ಆದರಾತಿಥ್ಯವನ್ನು ಗುರುತಿಸಿ, ಬೆಂಬಲಿಸುತ್ತಿದ್ದಾರೆ.
ಕೇರಂ ಆಟಗಾರರು ಖುಷಿಯಿಂದ, ಅಹಂಕಾರ ತೊರೆದು ನಿಯಮ ಪಾಲನೆಯ ಜತೆಯಲ್ಲಿ ತಮ್ಮ ಆಟದ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಗಮಹರಿಸಬೇಕು. ಆಗ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲೂ ಸಾಧನೆ ಸಾಧ್ಯವಾಗುತ್ತದೆ. ಹಬ್ಬದ ರೀತಿಯಲ್ಲಿ ಹಲವು ಜನ ಕೆಲಸ ಮಾಡಿ ಇಷ್ಟು ಅಚ್ಚುಕಟ್ಟಾಗಿ ಆಯೋಜಿಸುತ್ತಿರುವುದು ನಮಗೆ ಹೆಮ್ಮೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೊಡಬಟ್ಟೆ ಸುಬ್ಬಣ್ಣ ಮಾತನಾಡಿ, ಆಟಗಾರರು, ಸ್ಥಳೀಯರು ಆಯೋಜಕರಿಗೆ ಸಹಕರಿಸಿದರೆ ಇನ್ನು ಉತ್ತಮ ರೀತಿಯಲ್ಲಿ ಪಂದ್ಯಾವಳಿ ಆಯೋಜಿಸಲು ಸಾಧ್ಯ. ಜತೆಯಲ್ಲಿ ಕ್ರೀಡೆಯನ್ನು ಬೆಳೆಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.
ಮಹಿಳೆಯರ ಸಿಂಗಲ್ಸ್, ಡಬಲ್ಸ್, ಲೆಜೆಂಡ್ಸ್, ಪುರುಷರ ಶ್ರೇಯಾಂಕಿತ ಹಾಗೂ ಶ್ರೇಯಾಂಕ ರಹಿತ ವಿಭಾಗದಲ್ಲಿ ಕೇರಂ ಪಂದ್ಯಾವಳಿ ಆಯೋಜಿಸಲಾಗಿತ್ತು. ಭಿಮನಕೋಣೆ ಗ್ರಾಪಂ ಅಧ್ಯಕ್ಷ ಎಂ.ಎಸ್. ನಾಗರಾಜ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಶ್ರೀಹರಿ ನಿರ್ವಹಿಸಿದರು. ಆಯೋಜಕರಾದ ಶ್ರೀನಿಧಿ, ಅರುಣ, ಗಗನ, ಸುಕೇತ, ಶ್ರೀಕಾಂತ ಶೆಡ್ತೀಕೆರೆ, ರಮೇಶ, ಅಶೋಕ ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ