ಪೊಲೀಸರಿಗೆ ನೈತಿಕ ಆತ್ಮಸ್ಥೈರ್ಯ ತುಂಬಬೇಕು.
(CHIKKAMAGALURU): ಪೊಲೀಸರಿಗೆ ನೈತಿಕ ಆತ್ಮಸ್ಥೈರ್ಯ ನೀಡುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಕೀಲ ಎಚ್.ಎಚ್.ಕೃಷ್ಣಮೂರ್ತಿ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಗಡಿಯನ್ನು ಸೈನಿಕರು ಕಾಯುತ್ತಿದ್ದರೆ, ದೇಶದ ಒಳಭಾಗದಲ್ಲಿ ಆಂತರಿಕ ರಕ್ಷಣೆಯನ್ನು ಪೊಲೀಸರು ನೀಡುತ್ತಿದ್ದಾರೆ. ಹಗಲಿರುಳು ದೇಶದ ಜನರನ್ನು, ಜನರ ಆಸ್ತಿಯನ್ನು ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಪೊಲೀಸರ ಬಗ್ಗೆ, ಒಳ್ಳೆಯ ಅಭಿಪ್ರಾಯವನ್ನು ಸಮಾಜದಲ್ಲಿ ಮೂಡಿಸುವುದಲ್ಲದೇ ಅವರ ಕುಟುಂಬಸ್ಥರಿಗೂ ನಾವು ನೈತಿಕವಾದ ಬೆಂಬಲ ನೀಡಬೇಕಿದೆ.
ದೇಶದಲ್ಲಿ 1959ರಲ್ಲಿ ಚೈನಾ ವಿರೋಧಿಗಳ ಗುಂಪನ್ನು ಸೋಲಿಸಿ ವಾಪಾಸ್ ಕಳುಹಿಸಲಾಗುತ್ತದೆ. ಆ ಸಂದರ್ಭದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳು ಮೃತಪಟ್ಟಿದ್ದು, ಅವರ ಸ್ಮರಣಾರ್ಥ ಅ.21ನ್ನು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1962ರಲ್ಲಿ ನಡೆದ ಪೊಲೀಸ್ ಸಮ್ಮೇಳನದಲ್ಲಿ ಸಂಸ್ಮರಣಾ ದಿನ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಕ ಕೆ.ಎಂ.ರಾಘವೇಂದ್ರ ಮಾತನಾಡಿ, ದೇಶದಲ್ಲಿ ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಅಗತ್ಯವಿರುವುದು ಪೊಲೀಸ್ ಇಲಾಖೆಯಾಗಿದೆ. ನಮಗೆ ಧೈರ್ಯದ ಮನೋಭಾವ ಬರುವುದು ಪೊಲೀಸರಿಂದ ಮಾತ್ರವಾಗಿದೆ. ದೇಶದ ಆತಂಕರಿಕ ಭದ್ರತೆಗಾಗಿ ಹಲವಾರು ಪೊಲೀಸರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ.
ಪೊಲೀಸರು ಹಾಗೂ ಅವರ ಕುಟುಂಬಕ್ಕೆ ನೈತಿಕ ಬೆಂಬಲ ನೀಡಿ ಅವರನ್ನು ಸಮಾಜದ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ ಎಂದರು.
ಅಪರಾಧ ವಿಭಾಗದ ಪಿಎಸ್ಐ ಅಭಿಷೇಕ್ ಮಾತನಾಡಿ, ಪೊಲೀಸ್ ಸಂಸ್ಮರಣಾ ದಿನದ ಸಂದರ್ಭದಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಎಲ್ಲರ ಬೆಂಬಲದಿಂದ ಸಮಾಜದಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಉತ್ಸಾಹ ಇಮ್ಮಡಿಯಾಗಿದೆ ಎಂದರು.
ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಎಎಸ್ಸೆöÊ ಗಂಗಶೆಟ್ಟಿ, ಸಿಬ್ಬಂದಿ ವಿನಯ್, ಶಂಕರ್, ಧರ್ಮರಾಜ್, ಮಲೆನಾಡು ಒಳ್ಳೆಯ ಮನಸ್ಸು ಒಕ್ಕೂಟದ ಓ.ಡಿ.ಸ್ಟೀಫನ್, ರೆನ್ನಿ ದೇವಯ್ಯ, ಎಚ್.ಗೋಪಾಲ್, ಕೆ.ಪ್ರಶಾಂತ್ಕುಮಾರ್, ಸಿ.ವಿ.ಸುನೀಲ್, ಸತೀಶ್ ಅರಳೀಕೊಪ್ಪ, ಸತೀಶ್ ಕಾಮತ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.