ಪ್ರಧಾನಿ ನರೇಂದ್ರ ಮೋದಿ ರವರು ಕಳೆದ 10 ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಇಡೇರಿಸಲಿಲ್ಲ…!
(KOLARA): ಬಂಗಾರಪೇಟೆ: ಪ್ರಧಾನಿ ನರೇಂದ್ರ ಮೋದಿ ರವರು ಕಳೆದ 10 ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಇಡೇರಿಸಲಿಲ್ಲ ಮತ್ತು ಜನಪರ ಯೋಚನೆಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಕಾರಣ ದೇಶಾದ್ಯಂತ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ,ಆದ್ದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಐ.ಎನ್. ಡಿ .ಐ.ಎ. ಮೈತ್ರಿ ಕೂಟ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ಅಧ್ಯಕ್ಷ ಎಸ್ ಎನ್ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ತೊಪ್ಪನಹಳ್ಳಿ, ಧೋಣಿ ಮಡಗು ಮತ್ತು ಕಾಮಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಹುಸಿ ಭರವಸೆಗಳನ್ನು ನೀಡಿ ದೇಶದ ಜನರನ್ನು ವಂಚಿಸಿದ್ದಾರೆ,ಬಡವರ ಮತ್ತು ಮಧ್ಯಮ ವರ್ಗ ಮತ್ತು ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ, ಶ್ರೀಮಂತ ವರ್ಗದ ಪರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಡಗೈ ಮತ್ತು ಬಲಗೈ ಎಂಬ ಇಬ್ಬಗೆಯ ನೀತಿ ದೂರವಾಗಿದ್ದು ಎಲ್ಲರೂ ಒಟ್ಟಾಗಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಲಿಲ್ಲ ಇದರೊಟ್ಟಿಗೆ ಅಲ್ಪಸಂಖ್ಯಾತ ಮತಗಳ ಕ್ರೂಢೀಕರಣವಾಗಲಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಧನಾತ್ಮಕ ಪರಿಣಾಮ ಬೀರಲಿದೆ, ಆ ಮೂಲಕ ರಾಜಕೀಯ ದೃವೀಕರಣಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವೇದಿಕೆ ಕಲ್ಪಿಸಲಿದೆ ಎಂದರು.
ವಿರೋಧ ಪಕ್ಷದ ನಾಯಕರು ಮತದಾರರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್ ರವರು ನೆರೆಯ ರಾಷ್ಟ್ರ ಆಂಧ್ರಪ್ರದೇಶದ ಮೂಲದವರು ಎಂದು ಪ್ರತಿಬಿಂಬಿಸಲು ಹೊರಟಿದ್ದಾರೆ, ವಾಸ್ತವಿಕವಾಗಿ ಕೆ ವಿ ಗೌತಮ್ ರವರ ತಂದೆ ಬೆಂಗಳೂರಿನವರು ಹಾಗೂ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ, ಗೌತಮ್ ರವರ ಜನನ ಮತ್ತು ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ಆಗಿದೆ, ಇದರೊಟ್ಟಿಗೆ ಇವರ ತಾಯಿ ಮೂಲತಃ ಚಿಂತಾಮಣಿ ಕ್ಷೇತ್ರದವರಾಗಿದ್ದು ಇವರ ಸಹೋದರಿಯರನ್ನು ಕೋಲಾರ ಮೂಲದವರಿಗೆ ವಿವಾಹ ಮಾಡಿಕೊಳ್ಳಲಾಗಿದೆ ಈ ಹಿನ್ನಲೆಯಲ್ಲಿ ನಮ್ಮ ಅಭ್ಯರ್ಥಿ ಗೌತಮ್ ಹಾಗೂ ಕೋಲಾರಕ್ಕೆ ಅವಿನಾಭಾವ ಸಂಬಂಧವಿದೆ, ಅದರಂತೆಯೇ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುರವರೂ ಸಹ ಕೋಲಾರದ ನಿವಾಸಿ ಅಲ್ಲ ಅವರು ಬೆಂಗಳೂರಿನ ವಾಸಿಯಾಗಿದ್ದು ಅವರ ತಾಯಿ ಕೋಲಾರದ ನಿವಾಸಿಯಾಗಿದ್ದಾರೆ ಎಂದು ಟೀಕಿಸಿದರು.
ಐದು ವರ್ಷಗಳ ಕಾಲ ಕೋಲಾರ ಜಿಲ್ಲೆಗೆ ಶನಿಗ್ರಹ ಆವರಿಸಿ ದುಷ್ಟಗ್ರಹ ಪೀಡಿತವಾಗಿತ್ತು ಆದರೆ ಈ ಬಾರಿ ಕ್ಷೇತ್ರದ ಮತದಾರರು ಉತ್ತಮ ವ್ಯಕ್ತಿತ್ವ, ಬಿ.ಇ. ಪದವೀಧರ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಕೆ ವಿ ಗೌತಮ್ ರವರಿಗೆ ಮತ ಚಲಾಯಿಸಲಿದ್ದು ಲೋಕಸಭೆಗೆ ಪ್ರವೇಶ ಕಲ್ಪಿಸಲಿದ್ದಾರೆ ಆ ಮೂಲಕ ಅಭಿವೃದ್ಧಿಯ ಶುಕ್ರ ದೇಸೆ ಕೋಲಾರ ಜಿಲ್ಲೆಗೆ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆನೆ ದಾಳಿಯಿಂದ ಅಮೃತ ಪಟ್ಟವರಿಗೆ ಪರಿಹಾರ:
ತಾಲೂಕಿನ ಬೋನೆಹಳ್ಳಿ ಗ್ರಾಮದಲ್ಲಿ ಆನೆ ದಾಳಿ ಪರಿಣಾಮ ನಾರಾಯಣಪ್ಪ ಎಂಬುವರು ಮೃತರಾಗಿದ್ದಾರೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸೋಲಾರ್ ಬೇಲಿಗೆ ಅವಕಾಶ ನೀಡಲಾಗಿತ್ತು ಅದರಂತೆ ಶೇಕಡ 70ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು, ವಿಪರ್ಯಾಸ ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ, ಈ ಕೂಡಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ರವರೊಂದಿಗೆ ಚರ್ಚಿಸಲಾಗುವುದು ಚುನಾವಣೆಯ ನಂತರ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು, ಇದರೊಟ್ಟಿಗೆ ಬನ್ನೇರಿಘಟ್ಟದ ಪಳಗಿಸಿದ ಆನೆಯನ್ನು ಕರೆತಂದು ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವ ಕೆಲಸ ಮಾಡಲಾಗುವುದು, ರೈತರು ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಧಿನಾರಾಯಣ ಕುಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ನಾಗರಾಜು, ಮುಖಂಡರಾದ ಪಿಚ್ಚಹಳ್ಳಿ ಗೋವಿಂದರಾಜು, ಸಮಾಜ ಸೇವಕ ಮುನಿರಾಜು, ರಂಗಾಚಾರಿ, ಜಿ.ಎಂ.ಶ್ರೀನಿವಾಸ್, ಬಾಬು, ಮುನೀರ್, ಸೀತಾರಾಮಪ್ಪ, ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ