ಜನ, ವನ, ಅರಣ್ಯ ಎಂಬ ವಿಶೇಷ ರೀತಿಯಲ್ಲಿ ಅರಣ್ಯ ರಕ್ಷಣೆ,
(SHIVAMOGA): ಸಾಗರ ಜನ, ವನ, ಅರಣ್ಯ ಎಂಬ ವಿಶೇಷ ರೀತಿಯಲ್ಲಿ ಅರಣ್ಯ ರಕ್ಷಣೆ, ವನಗಳ ಅಭಿವೃದ್ಧಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಾದ ಎಂ.ಎಸ್. ಸಂತೋಷ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಪ್ರಾಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಾಗರ ಉಪವಿಭಾಗ ಸಹಭಾಗಿತ್ವದಲ್ಲಿ ತಾಲೂಕಿನ ಕಾನಲೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಗೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯರಾದ ನಾವು ಈಗಿನ ಮಕ್ಕಳಿಗೆ ಮರ ಗಿಡಗಳನ್ನು ಬೆಳೆಸಿ ಪೋಷಣೆ ಮಾಡುವುದನ್ನು ಕಲಿಸಬೇಕು. ಪ್ರತಿಯೊಬ್ಬರೂ ತಮ್ಮ ಜಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡಬೇಕಾಗಿದೆ. ಗಿಡಗಳು ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಶುದ್ಧ ಆಮ್ಲಜನಕ ನೀಡುತ್ತವೆ. ಹೀಗೇ ನಾವ ಪರಿಸರ ನಾಶ ಮಾಡುತ್ತಾ ಸಾಗಿದರೆ ಆಸ್ಪತ್ರೆಗಳಲ್ಲಿ ದುಡ್ಡು ಕೊಟ್ಟು ಆಮ್ಲಜನಕ ಖರೀದಿಸುವ ಕಾಲ ಬರುತ್ತದೆ. ಅಂಥ ಪರಿಸ್ಥಿತಿ ಬರುವ ಮೊದಲು ಎಚ್ಚೆತ್ತುಕೊಂಡು ಸುತ್ತಲೂ ಗಿಡ ನೆಟ್ಟು ಪೋಷಣೆ ಮಾಡುವುದನ್ನು ಕಲಿಯಬೇಕಿದೆ ಎಂದರು.
ಸಾಗರ ಉಪವಿಭಾಗ ಅರಣ್ಯ ಅಧಿಕಾರಿ ಸಂತೋಷ ಕುಮಾರ ಮಾತಾನಾಡಿ, ಮಲೆನಾಡು ಭಾಗದಲ್ಲಿ ಕಳೆದ ವರ್ಷದ ಮಳೆಯ ಕೊರತೆ ಗಮನಿಸಿದರೆ ಈ ವರ್ಷ ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಕಾಣಸಿಗಬಹುದು. ಆದ್ದರಿಂದ ಶಾಲೆ, ತಮ್ಮ ಮನೆಗಳ ಅಕ್ಕಪಕ್ಕದಲ್ಲಿ ಅತಿ ಹೆಚ್ಚು ಗಿಡಗಳನ್ನು ಬೆಳೆಸಬೇಕು. ಮುಖ್ಯವಾಗಿ ರೈತರು ಅರಣ್ಯ ಒತ್ತುವರಿ ಮಾಡುವುದನ್ನು ನಿಲ್ಲಿಸಿ, ಗ್ರಾಮಗಳಲ್ಲಿ ಸೊಪ್ಪಿನ ಬೆಟ್ಟ ರಕ್ಷಣೆ ಮಾಡಬೇಕು. ಮರ ಕಡಿತಲೆ ತಡೆದು ಅರಣ್ಯ ಕಾಪಾಡುವಲ್ಲಿ ಇಲಾಖೆಯೊಂದಿಗೆ ಸಹಕಾರ ನೀಡಿಬೇಕು ಎಂದರು.
ನ್ಯಾಯಾಧೀಶರಾದ ವೆಂಕಟೇಶ್, ಕೆ.ಆರ್. ದೀಪಾ, ಶ್ರೀ ಶ್ಯೆಲ ಭೀಮಸೇನ ಬಾಗಡಿ, ಸ್ಪರ್ಶ ಎಂ. ಡಿಸೋಜ, ರಮೇಶ್ ಹೆಚ್.ಬಿ. ಶಿರುವಾಳ, ಅರಣ್ಯ ಇಲಾಖೆ ಅಧಿಕಾರಿಗಳಾದ ಮೋಹನ್, ಅರವಿಂದ, ಅಶೋಕ, ಸುರೇಶ್, ಸಂತೋಷ ಸೇರಿದಂತೆ ಹಲವು ಸಿಬ್ಬಂದಿ, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ