ರಾಜ್ಯ ಸರ್ಕಾರ ಪೌಷ್ಟಿಕ ಆಹಾರ ನೀಡಬೇಕು. ಬುಡಕಟ್ಟು ಜನರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿದೆ.
(SHIVAMOGA): ಸಾಗರ. ಒಂದು ವರ್ಷದ ಪೌಷ್ಟಿಕ ಆಹಾರ ನೀಡುವ ಭರವಸೆ ನೀಡಿದ್ದ ರಾಜ್ಯ ಸರಕಾರವು ಆರು ತಿಂಗಳ ಟೆಂಡರ್ ಸಹ ಕೂಡ ಕರೆಯದೆ ಬುಡಕಟ್ಟು ಜನರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿದೆ ಎಂದು ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಒಕ್ಕೂಟ ಆಯೋಜಿಸಿರುವ ಅಹೋರಾತ್ರಿ ಪ್ರತಿಭಟನೆ ವೇಳೆ ಅವರು ಮಾತನಾಡಿದರು.
ಬುಡಕಟ್ಟು ಸಮುದಾಯದವರಿಗೆ 2019-20ರಿಂದ ರಾಜ್ಯ ಸರಕಾರವು ಆರು ತಿಂಗಳ ಕಾಲ ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿಗೆ ತಂದಿತ್ತು. ಅದನ್ನು ಈಗಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ವರ್ಷವಿಡೀ ನೀಡುವ ಭರವಸೆ ನೀಡಿತ್ತು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹೊಸದಾಗಿ ಟೆಂಡರ್ ಕರೆಯಲು ಆಗುತ್ತಿಲ್ಲ ಎಂದು ನೆಪ ಹೇಳಿ ಪೌಷ್ಟಿಕ ಆಹಾರ ವಿತರಣೆ ನಿಲ್ಲಿಸಿ ಬಡ ಬುಡಕಟ್ಟು ಜನರಿಗೆ ಮೋಸ ಮಾಡಿತ್ತು. ಈಗ ಅಧಿಕಾರಿಗಳನ್ನು ಕೇಳಿದರೆ, ಬಜೆಟ್ ನೀಡಿಲ್ಲ. ನಮಗೆ ಬರುತ್ತಿದ್ದಂತೆ ನಿಮಗೆ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಮೂಲಕ ಹಾಸ್ಟೆಲ್ಗಳಲ್ಲಿ ಹೋಗಿ ನಾವು ಪೌಷ್ಟಿಕ ಆಹಾರ ಪಡೆದುಕೊಳ್ಳಬೇಕಾಗುತ್ತಿದೆ. ಜಿಲ್ಲೆಯಲ್ಲಿರುವ 7 ಸಾವಿರ ಕುಟುಂಬಗಳು ಇದರಿಂದ ತೊಂದರೆಗೀಡಾಗಿವೆ. ವೃದ್ಧರು, ಮಹಿಳೆಯರು ಕಾಡು, ಬೆಟ್ಟದಲ್ಲಿ ಆರೆಂಟು ಕಿಮೀ ನಡೆದು, ಬಸ್ ಹಿಡಿದು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗೆ ಹೋಗಿ ಆಹಾರ ಪಡೆದು, ಮೂಟೆ ಹೊತ್ತು ವಾಪಾಸ್ ಮನೆ ಸೇರುವಾಗ ರಾತ್ರಿಯಾಗುತ್ತದೆ. ಇದನ್ನು ತಪ್ಪಿಸಿ, ಬಡವರನ್ನು ಕಾಪಾಡಬೇಕೆನ್ನುವುದು, ಪೌಷ್ಟಿಕ ಆಹಾರ ವಿತರಣೆ ಅಂಗನವಾಡಿ ಮೂಲಕವೇ ನಡೆಯಬೇಕೆನ್ನುವುದು ನಮ್ಮ ಹೋರಾಟದ ಪ್ರಮುಖ ಉದ್ದೇಶವಾಗಿದೆ. ರಾಜ್ಯದ 11 ಜಿಲ್ಲೆಯಲ್ಲಿ ಅಂಗನವಾಡಿ ಮೂಲಕವೇ ಆಹಾರ ವಿತರಣೆ ನಡೆಯುತ್ತಿದ್ದು, ನಮ್ಮಲ್ಲಿ ಮಾತ್ರ ಇದು ಇಂದಿಗೂ ಜಾರಿಗೆ ಬಂದಿಲ್ಲ. ಇದರ ಬದಲಾಗಿ ರಾಜ್ಯಾದ್ಯಂತ ಏಕ ರೂಪದ ವಿತರಣೆ ನಡೆಯಬೇಕೆನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಒಕ್ಕೂಟದ ಮಹಿಳಾ ಮುಖಂಡರಾದ ಲಕ್ಷ್ಮಮ್ಮ ಹಿರೇಮನೆ ಮಾತನಾಡಿ, ಎಲ್ಲದ್ದಕ್ಕೂ ಹೋರಾಟ ಮಾಡಿ ಹಕ್ಕು ಪಡೆಯುವುದು ಅನಿವಾರ್ಯ ಎಂಬ ಸ್ಥಿತಿಯನ್ನು ರಾಜ್ಯ ಸರಕಾರ ನಿರ್ಮಾಣ ಮಾಡಿದೆ. ಪೌಷ್ಟಿಕ ಆಹಾರ ಪಡೆಯುವುದು ಬುಡಕಟ್ಟು ಒಕ್ಕೂಟದ ಹಕ್ಕಾಗಿದ್ದು, ಆನಿಟ್ಟಿನಲ್ಲಿ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಮುಖ್ಯವಾಗಿ ಸ್ಥಳೀಯ ಅಂಗನವಾಡಿ ಮೂಲಕ ಸಮುದಾಯಗಳಿಗೆ ಆಹಾರ ಪೂರೈಕೆ ಮಾಡಬೇಕೆನ್ನುವುದು ಒತ್ತಾಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶಿವಾನಂದ ಕುಗ್ವೆ. ನಾಗರತ್ನ, ಮಂಜಪ್ಪ, ಜಯಮ್ಮ, ಶಿವಪ್ಪ, ಗೋಪಾಲ, ರವಿ ಕುಗ್ವೆ, ಲತಾಶ್ರೀ, ಕಮಲ, ಶುಕ್ರ, ಸರಸ್ವತಿ, ಸಾವಿತ್ರಿ, ಕಮಲಾಕ್ಷಿ ಮುಪ್ಪಾನೆ, ಪಾರ್ವತಮ್ಮ, ಚಂದ್ರಶೇಖರ್, ವನಜಾಕ್ಷಿ ಮೊದಲಾದವರು ಹಾಜರಿದ್ದರು. …
ವರದಿ: ರಾಘವೇಂದ್ರ ತಾಳಗುಪ್ಪ