ತಾಲೂಕು ಪಂಚಾಯತ್ ಇಓ ಹಾಗೂ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ.
(SHIVAMOGA): ಸೊರಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಳು ತಾಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಕಿರಣ್ ಕುಮಾರ್ ರವರ ನೇಮಕಾತಿಯಲ್ಲಿ ತಪ್ಪು ಮಾಡಿರುವುದನ್ನು ಒಪ್ಪಿಕೊಂಡು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಎದುರು ಗುರುವಾರ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಎಣ್ಣೆಕೊಪ್ಪ, ಆಗಸನಹಳ್ಳಿ,ಚಿಟ್ಟೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಮಟೆ ಚಳುವಳಿ ಮಾಡುವ ಮೂಲಕ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಪಿತಸ್ಥರೆಂದು ಪರೀಶೀಲನಾ ಸಮಿತಿ ವರದಿಯಿಂದ ಕಂಡು ಬಂದಿರುವುದರಿಂದ ಕೂಡಲೇ ಪಿಡಿಓರನ್ನು ಅಮಾನತುಗೊಳಿಸಬೇಕು ಎಂದ ಅವರು ಚಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆಕೊಪ್ಪ ಸರ್ವೆ ನಂ 44 ರಲ್ಲಿ ನಿವೇಶನ ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದರು ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಕಾಲಹರಣ ಮಾಡಿದ್ದು ಸದರಿ ಜಾಗವನ್ನು ಬೇರೆಯವರು ಆಕ್ರಮಣ ಮಾಡಿರುತ್ತಾರೆ.ಆಗಸನಹಳ್ಳಿ ಗ್ರಾಮ ಪಂಚಾಯಿತಿ ಆಗಸನಹಳ್ಳಿಯಲ್ಲಿ ಖಾನೇಷುಮಾರಿ 43 ಪಿ ಯಲ್ಲಿ ಅನಾದಿಕಾಲದಿಂದಲೂ ಓಡಾಡುವ ರಸ್ತೆಯಿದ್ದು ಇದನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಹಿರೇಚೌಟಿ ಗ್ರಾಮದ ಮಧ್ಯಭಾಗದಲ್ಲಿ ಅನಧಿಕೃತವಾಗಿ ಅಡಿಕೆ ಸುಲಿಯುವ ಯಂತ್ರವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಿರುವ ವಿದ್ಯಾ ಕೋಂ ನಟರಾಜರ ಮೇಲೆ ಕ್ರಮ ಕೈಗೊಂಡು ಯಂತ್ರವನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ, ಜಿಲ್ಲಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ತಾಲೂಕು ಸಂಘಟನಾ ಸಂಚಾಲಕ ಹರೀಶ್ ಚಿಟ್ಟೂರು, ನಾಗರಾಜ ಹುರಳಿಕೊಪ್ಪ,ಚಂದ್ರಪ್ಪ ತುಡನೀರು,ರೇವಪ್ಪ ಹಿರೇಚೌಟಿ, ಪರಮೇಶ್ವರ್, ಶಿವಮೂರ್ತಿ, ಪ್ರಭು, ರಾಜು ಆಗಸನಹಳ್ಳಿ ಸೇರಿದಂತೆ ಮೊದಲಾದವರಿದ್ದರು.
ವರದಿ: ಸಂದೀಪ ಯು.ಎಲ್. ಸೊರಬ